Friday 19 September 2014

'ಖುಷಿ ಖುಷಿ'ಯಾಗಿ ಬದುಕಲು ಖುಷ್ ವಂತ್ ಸಿಂಗರ ಸೂತ್ರಗಳು

       'ಖುಷಿ ಖುಷಿ'ಯಾಗಿ ಬದುಕಲು ಖುಷ್ ವಂತ್ ಸಿಂಗರ  ಸೂತ್ರಗಳು


ಖುಷ್ ವಂತ್ ಸಿಂಗ್ ಅಂದೊಡನೆ ನೆನಪಾಗುವುದು ಅವರ ಅತ್ಯಂತ ವರ್ಣಮಯ ವ್ಯಕ್ತಿತ್ವ. ತೊಂಬತ್ತೊಂಬತ್ತು ವರ್ಷಗಳ ಆರೋಗ್ಯಪೂರ್ಣ ಜೀವನವನ್ನು ಸವೆಸಿ ಕೆಲ ತಿಂಗಳ ಹಿಂದೆ ನಿಧನರಾದ ಈ  ಯಶಸ್ವೀ ಲೇಖಕ , ಪತ್ರಕರ್ತ ರ ' absolute khushvant' ಪುಸ್ತಕವನ್ನು ಓದುತ್ತಿದ್ದೇನೆ.  ಇದರಲ್ಲಿನ ' ಖುಷಿ ಖುಷಿಯಾಗಿ ಬದುಕಲು ಬೇಕಾದ ಒಂಬತ್ತು ಸೂತ್ರಗಳು ' ಗಮನ ಸೆಳೆದವು. ಅವರ ಕೆಲ ವಿಚಾರಗಳನ್ನು ನಾನು ಒಪ್ಪುವುದಿಲ್ಲ. ಆದರೆ ಇದು ನಾವೆಲ್ಲರೂ ಅಳವಡಿಸಿಕೊಳ್ಳಲು ಯೋಗ್ಯವಾಗಿದೆ .

ಮೊದಲನೆಯದಾಗಿ- ಆರೋಗ್ಯ.  
ಆರೋಗ್ಯ ಕೈಕೊಟ್ಟರೆ ಸಂತೋಷವಿಲ್ಲ.  ಆದ್ದರಿಂದ ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿ ವಹಿಸಿ.

ಎರಡನೆಯದು - ದುಡ್ಡು.  
 ಬಿಡಿಕಾಸೂ ಖರ್ಚುಮಾಡದೇ , ಕೋಟಿಗಟ್ಟಲೆ ಸಂಗ್ರಹಿಸಿ ಇಡಬೇಕಾದ ಅವಶ್ಯಕತೆಯಿಲ್ಲ. ಆದರೆ ನಿಮ್ಮ ದೈನಂದಿನ ಜೀವನಕ್ಕೆ ಬೇಕಾಗುವಷ್ಟು, ಆಗಾಗ ಪ್ರವಾಸ ಹೋಗುವುದಕ್ಕೆ, ಮನರಂಜನೆಗೆ ಹಣವನ್ನು ಉಳಿತಾಯ  ಮಾಡಿ. ಸಾಲದ ಜೀವನ  ನಮ್ಮನ್ನು ಒಳಗಿಂದಲೇ ಕೊಲ್ಲುತ್ತದೆ.

ಮೂರನೆಯದು - ನಿಮ್ಮ ಸ್ವಂತ ಮನೆ. 
ಚಿಕ್ಕದಾದರೂ ಚಿಂತೆಯಿಲ್ಲ, ಸ್ವಂತಮನೆಯಲ್ಲಿ ಬದುಕಿ. ಮನೆಯ ಸುತ್ತ ಗಿಡಗಳನ್ನು ನೆಡಿ. ಗಿಡಗಳು, ಅವುಗಳಲ್ಲರಳುವ ಹೂಗಳು ಮನಸ್ಸಿಗೆ ನೆಮ್ಮದಿ ಕೊಡುತ್ತವೆ.

ನಾಲ್ಕನೆಯದು - ಒಳ್ಳೆಯ ಸಂಗಾತಿ. 
ನಿಮ್ಮ ಜೀವನಸಂಗಾತಿ ಅಥವಾ ಒಳ್ಳೆಯ ಮಿತ್ರರು ನೆಮ್ಮದಿಯ ದೂತರು. ಸಂಗಾತಿಯೊಡನೆ ಅಥವಾ ಮಿತ್ರನೊಡನೆ ಮನಸ್ತಾಪಗಳನ್ನು ಇಟ್ಟುಕೊಳ್ಳ ಬೇಡಿ. ಅದು ಮಾನಸಿಕ ಶಾಂತಿಗೆ ಮಾರಕ. 

ಐದನೆಯದು- ಪರರ ಜೊತೆಗೆ ಹೋಲಿಕೆ.  
ಜೀವನದಲ್ಲಿ ನಮಗಿಂತ ಎತ್ತರಕ್ಕೆ ಏರಿದವರನ್ನು ಕಂಡು ಅಸೂಯೆಪಡಬೇಡಿ. ನೀವು ಅಸೂಯೆಪಟ್ಟರೆ ಅವರಿಗೇನೂ ನಷ್ಟವಿಲ್ಲ. ಆದರೆ ಈ ಅಸೂಯೆ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.

ಆರನೆಯದು -  ವ್ಯರ್ಥ ಹರಟೆ.  
 ಚಾಡಿಕೋರರಿಂದ, ಉಪಯೋಗವಿಲ್ಲದ ಹರಟೆ ಕೊಚ್ಚುವವರಿಂದ ,  ಸದಾಕಾಲ ಪರರನ್ನು ದೂಷಿಸುವವರಿಂದ ದೂರವಿರಿ.  ಅವರನ್ನು ಮನೆಯೊಳಗೆ-ಮನದೊಳಗೆ ಕರೆಯಬೇಡಿ. ಅಂಥವರೊಡನೆ ಕಳೆವ ಸಮಯ ವ್ಯರ್ಥ . 

ಏಳನೆಯದು - ಹವ್ಯಾಸ. 
ಒಂದೆರಡು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಓದು, ಬರಹ, ಮಣ್ಣಿನ ಜೊತೆ ಒಡನಾಟ, ಹಾಡು ಹೇಳುವುದು/ ಕೇಳುವುದು ಇತ್ಯಾದಿ. ಸಾದ್ಯವಾದರೆ  ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ.

ಎಂಟನೆಯದು -ಮೌನ .
   ದಿನವೂ ಹತ್ತು ನಿಮಿಷ, [ಬೆಳಗ್ಗೆ ಐದು- ಸಂಜೆ ಐದು ] ಮೌನವಾಗಿ ಕಳೆಯಿರಿ. ಮೌನವೆಂದರೆ ಕೇವಲ ಬಾಯಿ ಮುಚ್ಚುವುದಲ್ಲ, ದೇಹದ- ಮನಸ್ಸಿನ  ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ ಉಸಿರನ್ನು ಮಾತ್ರ ಗಮನಿಸುತ್ತಿರಿ.

ಒಂಬತ್ತನೆಯದು - ತಾಳ್ಮೆ  .  
ಎಂತಹ ಸಂದರ್ಭದಲ್ಲೂ ತಾಳ್ಮೆ ಕಳಕೊಳ್ಳದಿರಿ. ಅನ್ಯರ ಮೇಲೆ ಪ್ರತೀಕಾರದ ಭಾವನೆ ಬೇಡ. ಆದಷ್ಟು ಮಟ್ಟಿಗೆ ನಿಮಗಾಗದವರನ್ನು ಕ್ಷಮಿಸಿ ಅಥವಾ ಅವರಿಂದ ದೂರವಿರಿ.

2 comments: