Friday 20 November 2015

RESPECTFUL childhood

A scene from ‘Sa Re Ga Ma lil champs Kannada’ two Sundays ago --
Anchor- Oh you are so skinny. How many Idllis do you eat for breakfast?
Participant (a little girl) - One or two… [ Looks painfully at her]
Judge- Oh, one Idlly! That’s too much. Now onwards don’t eat idlies at all. Just take in the smell of Idlies. Ha! Ha!Ha! [Sarcastically]
And a big round of applause from the audience for his VALUABLE comments……
As far as we know judges for such reality shows have an authority to comment on the voice quality of the singers. But I would like to know who gave them the authority to pass degrading comments on the physical shape of the singers especially to a little girl?
Mostly a child’s physical features are decided by hereditary. Is it right to humiliate a child in public for none of his/her mistake? Is it correct to prick the tender heart which may already be crying from inside for its ugly looks? Please remember for a child the joy of success is temporary and pain of humiliation can be permanent.
In this day and age, a child is a precious commodity and there is an industry that thrives under the claim of providing a bright future, great exposure and so on. But can we allow the market to kill our child’s self-esteem, self -confidence, innocence and his/his invaluable childhood? Should we allow the apple of our eye to become an easy tool for someone’s money making scheme?
Knowingly or otherwise, most of us tend to pass comments at little ones like “you are fat /skinny/ dwarf /a coconut tree/a soda buddy / kaddi pailwan / charcoal and what not…. But just think once: what do we achieve by hurting that little soul? Can our comment change his/her body shape?
I feel children are the angels on this earth and they deserve a RESPECTFUL childhood. What do you say?

ಚೀನಾದ ನೆನಪುಗಳು

ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ, ಸ್ನೇಹಿತರೂ ಕೂಡಾ ಚೀನಾಕ್ಕೆ ಯಾಕೆ ಹೋಗುತ್ತೀರಿ? ಎಂದು ಪ್ರಶ್ನಾರ್ಥಕ ನೋಟ ಬೀರಿದರು. ಏನೇ ಇರಲಿ, ನನ್ನ ಕೌಟುಂಬಿಕ ಮಿತ್ರ, ಸುಜ್ಹೋ ನಗರದಲ್ಲಿ ಡೆಲ್ಫೈ ಎಲೆಕ್ಟ್ರಾನಿಕ್ ಕಂಪನಿಯ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ ಶ್ರೀ ರವಿ ಫಡ್ಕೆಯವರ ಆಹ್ವಾನದ ಮೇರೆಗೆ ಎಪ್ರಿಲ್ ಕೊನೆಯ ವಾರದ ಚೀನಾ ಮತ್ತು ಹಾಂಕಾಂಗ್ ಪ್ರವಾಸಕ್ಕೆ ನಮ್ಮಲ್ಲಿದ್ದ ಅಲ್ಪ- ಸ್ವಲ್ಪ ಉಳಿತಾಯದ ಹಣವನ್ನು ತೊಡಗಿಸಿ ತಯಾರಿ ಆರಂಭಿಸಿಯೇ ಬಿಟ್ಟೆವು.
ಚೀನಾದ ಬಗ್ಗೆ ನನಗೆ ಮೊದಲಿನಿಂದಲೂ ಅತೀವ ಕುತೂಹಲ. ನಮ್ಮ ಭಾರತದಂತೆಯೇ ಅಗಾಧ ಜನಸಂಖ್ಯೆಯ, ಶ್ರೀಮಂತ ಪರಂಪರೆಯ ನಾಡಿನ ಇಂದಿನ ಯಶೋಗಾಥೆಯ ಬಗ್ಗೆ ತಿಳಿಯುವ ಹಂಬಲ. ಹಿಂದೆ ನಾನು ಓದಿದ ‘ಸ್ಮೋಕ್ಸ್ ಅಂಡ್ ಮಿರರ್ಸ್ – ಪಲ್ಲವಿ ಅಯ್ಯರ್’ ಹಾಗೂ ‘ಮಾವೋನ ಕೊನೆಯ ನರ್ತಕ – ಲೀ ಕುನ್ ಕ್ಸಿಂಗ್ [ಕನ್ನಡಕ್ಕೆ ಜಯಶ್ರೀ ಭಟ್]’ ಎಂಬ ಎರಡು ಅತ್ಯುತ್ತಮ ಕೃತಿಗಳಿಂದ ಅಲ್ಲಿನ ಜನಜೀವನದ ಸ್ಥೂಲ ಪರಿಚಯವಾಗಿತ್ತಾದರೂ ಈ ರೀತಿಯ ಅಭಿವೃದ್ಧಿ ಹೇಗೆ ಸಾಧ್ಯ? ಸರ್ಕಾರವೆಂಬ ವ್ಯವಸ್ಥೆ ಈ ಮಟ್ಟದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವೇ? ಇದರಲ್ಲಿ ಉತ್ಪೇಕ್ಷೆ ಎಷ್ಟು? ನೈಜತೆ ಏನು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಬೆಂಗಳೂರಿನಿಂದ ಹಾಂಕಾಂಗ್ ಮೂಲಕ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಿಕ್ಕ ಕಣ್ಣಿನ ಬಿಗಿ ಮುಖದ ಇಮಿಗ್ರೇಷನ್ ಅಧಿಕಾರಿಯಿಂದ ಅನುಮತಿ ಪಡೆದು ಹೊರಬಂದಾಗ ,ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ ರವಿ ಫಡ್ಕೆಯವರಿಂದ ಪ್ರಶ್ನೆಗಳು ಸೂಕ್ತ ಉತ್ತರ ಪಡೆಯಲಾರಂಭಿಸಿದವು.
ಅಬಿವೃದ್ಧಿ , ಮೂಲಸೌಕರ್ಯಗಳ ವಿಚಾರದಲ್ಲಿ ನಮ್ಮ ದೇಶಕ್ಕೂ , ಚೀನಾಗೂ ಹೋಲಿಸಲು ಸಾಧ್ಯವೇ ಇಲ್ಲ. ಅಥವಾ ಯಾವ ದೇಶವನ್ನೂ ಇನ್ನೊಂದು ದೇಶದ ಜೊತೆ ಹೋಲಿಸಬಾರದು. ಪ್ರತಿಯೊಂದು ದೇಶವೂ ಭಿನ್ನ, ಅದರ ಜನಜೀವನ , ಸಂಸ್ಕೃತಿ, ಚರಿತ್ರೆ, ಸಮಸ್ಯೆಗಳೂ ಭಿನ್ನವಾಗಿರುತ್ತವೆ. ಆದರೆ ನಾನು ಅಲ್ಲಿ ಕಂಡ ಕೆಲ ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ನನ್ನ ಉದ್ದೇಶ.
ಇಲ್ಲಿ ಗಿಡವಲ್ಲ, ಮರ ನೆಡುವುದು!
ಇಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ , ಎಲ್ಲ ಕಟ್ಟಡಗಳ ಮುಂಭಾಗದಲ್ಲಿ ಎತ್ತರವಾದ ಮರಗಳು ಗಮನ ಸೆಳೆಯುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಒಂದೇ ಎತ್ತರ, ದಪ್ಪ. ಅರೆ… ಮರಗಳೂ ಇಲ್ಲಿ ಶಿಸ್ತು ಪಾಲಿಸುತ್ತವೆಯೇ ಎಂದು ಉದ್ಗರಿಸಿದ ನನಗೆ ಸಿಕ್ಕ ಉತ್ತರ ‘ಇಲ್ಲಿ ಗಿಡವಲ್ಲ.. ಮರ ನೆಡುತ್ತಾರೆ!’ ಸಾಮಾನ್ಯವಾಗಿ ಚೀನಾದಲ್ಲಿ ಹೊಸ ರಸ್ತೆ , ಕಟ್ಟಡಗಳ ಉದ್ಘಾಟನೆಗೂ ಮುನ್ನವೇ ಪೂರ್ಣಪ್ರಮಾಣದ ಉದ್ಯಾನಗಳ ನಿರ್ಮಾಣವಾಗುತ್ತದೆ. ಸಮೀಪದ ಹಳ್ಳಿಗಳಲ್ಲಿ ಈ ಉದ್ದೇಶಕ್ಕೆಂದೇ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದ ಮರಗಳನ್ನು ಬೇರುಸಮೇತ , ಲಾರಿಗಳಲ್ಲಿ ತಂದು ಹೊಸ ಸ್ಥಳಗಳಲ್ಲಿ ಮೊದಲೇ ತೋಡಿಟ್ಟ ಆಳವಾದ ಗುಂಡಿಗಳಲ್ಲಿ ನೆಡುತ್ತಾರೆ. ಮರಕ್ಕೆ ನಾಲ್ಕೂ ಕಡೆಗಳಿಂದ ಲೋಹದ /ಬಿದಿರಿನ ಕಂಬಗಳ ಆಧಾರವನ್ನು ನಿರ್ಮಿಸುತ್ತಾರೆ. ಒಂದು ವರ್ಷದ ನಂತರ ಮರ ಬೇರು ಬಿಟ್ಟಿರುವುದನ್ನು ಖಚಿತಪಡಿಸಿಕೊಂಡು ಆಧಾರಸ್ತಂಭಗಳನ್ನು ತೆಗೆಯುತ್ತಾರೆ. ಇಂಥ ಸಾವಿರಾರು ಮರಗಳನ್ನು ರಸ್ತೆ ಗಳ ಇಕ್ಕೆಲಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ ನೋಡಿ ಅಚ್ಚರಿಯಾಯಿತು.
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರ ನೆಟ್ಟ ರಸ್ತೆ
ಮರ ನೆಟ್ಟ ರಸ್ತೆ
ಸ್ವಚ್ಛತೆಯೆಂಬ ಉದ್ಯಮ
ವಿದೇಶಗಳಲ್ಲಿನ ಸ್ವಚ್ಛತೆಯ ಬಗ್ಗೆ ನಾವೆಲ್ಲಾ ಕಿವಿ ತೂತಾಗುವಷ್ಟು ಕೇಳಿರುತ್ತೇವೆ. ಈ ವಿದೇಶೀಯರೂ ನಮ್ಮಂತೆಯೇ ಹುಲುಮಾನವರಲ್ಲವೇ? ಅವರು ಅಪ್ಪಿತಪ್ಪಿಯೂ ದಾರಿಯಲ್ಲಿ ಕಸ ಹಾಕುವುದೇ ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿ ಸಿಗುವವರೆಗೂ ಕಸ ಕೈಯಲ್ಲಿ ಹಿಡಿದುಕೊಂಡೇ ಇರಲು ಹೇಗೆ ಸಾಧ್ಯ? ಎಂದೆಲ್ಲ ನನಗೆ ಅನೇಕ ಬಾರಿ ಅನಿಸುತ್ತಿತ್ತು. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿತು. ಅವರೂ ನಮ್ಮಂತೆಯೇ ಕಠಿಣ ಕಾನೂನಿಗೆ ಮಾತ್ರ ಹೆದರುವ ಜನ. ಚೀನಾದಲ್ಲೂ ನಾನು ಹಣ್ಣಿನ ಸಿಪ್ಪೆ, ಖಾಲಿ ನೀರಿನ ಬಾಟಲ್, ಚಿಪ್ಸ್ ನ ಲಕೋಟೆಗಳನ್ನು,ಉರಿದ ಸಿಗರೇಟ್ ತುಂಡುಗಳನ್ನು ದಾರಿಯಲ್ಲಿ ಎಸೆಯುವವರನ್ನು, ಮಕ್ಕಳಿಗೆ ತೀರಾ ಅವಸರವಾದಾಗ ಬೀದಿ ಬದಿಯಲ್ಲಿ ಉಚ್ಚೆ ಹೊಯ್ಯಿಸುವವರನ್ನು, ಬೀದಿಯಲ್ಲಿ ಉಗುಳುವವರನ್ನು ಕಂಡೆ. [ಇವರ ಸಂಖ್ಯೆ ನಮ್ಮಲ್ಲಿಗಿಂತ ಕಡಿಮೆ ] ಆದರೆ ಇದರ ಸ್ವಚ್ಛತೆಗೆ ಉತ್ತಮ ವ್ಯವಸ್ಥೆ ಇದೆ. ದೊಡ್ಡ ಸಂಖ್ಯೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಎಲ್ಲೆಲ್ಲಿಯೂ ಕಂಡರು. ಶುಭ್ರವಾದ ಸಮವಸ್ತ್ರ ತೊಟ್ಟ ಇವರ ಒಂದು ಕೈಯಲ್ಲಿ ತುದಿಯಲ್ಲಿ ಇಕ್ಕಳವಿರುವ ಕೋಲು ಇದೆ. ಇನ್ನೊದು ಕೈಯಲ್ಲಿ ಬಕೇಟು. [ ಚಿತ್ರ ನೋಡಿ] ಬಿಡುವಿಲ್ಲದೇ ತಮಗೆ ಗೊತ್ತುಪಡಿಸಿದ ಜಾಗದಲ್ಲಿ ಇವರು ಸುತ್ತಾಡುತ್ತ ಕಸ ಎತ್ತುತ್ತಲೇ ಇರುತ್ತಾರೆ. ಹಸಿ ಹಾಗೂ ಒಣ ಕಸವನ್ನು ತಕ್ಷಣ ವಿಂಗಡಿಸುತ್ತಾರೆ. ನಗರದ ತ್ಯಾಜ್ಯ ವಿಂಗಡನಾ ಘಟಕಗಳು ಕಸವನ್ನು 100% ಸಂಸ್ಕರಿಸುತ್ತವೆ.ಹಸಿ ಕಸದ ಗೊಬ್ಬರ ರಸ್ತೆಬದಿಯ ಹೂಗಿಡಗಳಿಗೆ ಉಪಯೋಗವಾಗುತ್ತದೆ. ಯಾಂಜ್ ಜಿ ನದಿಯನ್ನು ಜೋಪಾನವಾಗಿ ರಕ್ಷಿಸಿರುವುದರಿಂದ ನೀರಿಗೆ ಬರವಿಲ್ಲ. ಆದ್ದರಿಂದ ವಾರಕ್ಕೊಮ್ಮೆ ನಗರದ ಬೀದಿಗಳನ್ನು ತೊಳೆಯಲಾಗುತ್ತದೆ.[ಚಿತ್ರ ನೋಡಿ] . ನಗರದಲ್ಲಿ ಅಲ್ಲಲ್ಲಿ ಶೌಚಾಲಯಗಳು ಕಂಡವು. ಪ್ರೇಕ್ಷಣೀಯ ಸ್ಥಳಗಳಲ್ಲಿ 30-60 ಶೌಚಾಲಯಗಳಿವೆ. ವಿಶೇಷವೆಂದರೆ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನವು ನಮ್ಮ ಭಾರತೀಯ ಮಾದರಿಯ ಪಾಯಿಖಾನೆಗಳು! ನಮ್ಮ ನಗರಗಳಲ್ಲಿ ಬೀದಿ ತೊಳೆಯುವುದು ಸಾಧ್ಯವಾಗದಿರಬಹುದು.
ಆದರೆ ಈ ರೀತಿಯ ಸಶಸ್ತ್ರ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿ ನಮ್ಮ ಬೀದಿಗಳನ್ನು, ಪ್ರೇಕ್ಷಣೀಯಸ್ಥಳಗಳನ್ನು ಸ್ವಚ್ಛವಾಗಿ ಇರಿಸಬಹುದಲ್ಲ ಅನಿಸಿತು. ಇದಕ್ಕೆ ದೊಡ್ಡ ಖರ್ಚೂ ಇಲ್ಲ . ಉದ್ಯೋಗ ಸೃಷ್ಟಿಯೂ ಆಯಿತು.
ರಸ್ತೆ ತೊಳೆಯುವುದು ಸಶಸ್ತ್ರ ಪೌರಕರ್ಮಚಾರಿ
ರಸ್ತೆ ತೊಳೆಯುವುದು
ರಸ್ತೆ ತೊಳೆಯುವುದು
ಸಶಸ್ತ್ರ ಪೌರಕರ್ಮಚಾರಿ
ಸಶಸ್ತ್ರ ಪೌರಕರ್ಮಚಾರಿ
ನಾರೀಶಕ್ತಿ
ಚೀನಾದಲ್ಲಿ ನನಗೆ ನಾರೀಶಕ್ತಿಯ ವಿರಾಟ್ ರೂಪದ ದರ್ಶನವಾಯಿತು. ಹೆಚ್ಚಿನ ಎಲ್ಲ ಸೇವಾ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು. ವಾಹನ ಚಾಲಕರು, ರಸ್ತೆ ಸುಂಕದ ವಸೂಲಿಗರು, ಪ್ರವಾಸೀ ಗೈಡ್ ಗಳು, ಪೌರಕಾರ್ಮಿಕರು, ರೈಲು, ಬಸ್ಸುಗಳ ಸಿಬ್ಬಂದಿ, ಹೋಟೇಲಿನ ಎಲ್ಲ ವಿಭಾಗಗಳ ಸಿಬ್ಬಂದಿ .. ಎಲ್ಲವೂ ಮಹಿಳೆಯರೇ! ಈ ನಗುಮೊಗದ ,ಚುರುಕು ನಡಿಗೆಯ ವನಿತೆಯರು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ. ಒಮ್ಮೆ ಶಾಂಘೈ ನಿಂದ ನಾವು ಸುಜೋನಲ್ಲಿರುವ ಮನೆಗೆ ಮರಳುವಾಗ ರಾತ್ರಿ 1 ಗಂಟೆ ದಾಟಿತ್ತು. ಆ ರಾತ್ರಿಯಲ್ಲೂ ಆ ನಿರ್ಜನ ಹೆದ್ದಾರಿಯಲ್ಲಿ ಇಬ್ಬರು ಸುಂದರವಾದ ಯುವತಿಯರು ರಸ್ತೆ ಸುಂಕ ವಸೂಲಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಹೃದಯ ತುಂಬಿ ಬಂತು.ನಮ್ಮ ವಾಹನ ಚಾಲಕಿ 50ವಯಸ್ಸಿನ ತರುಣಿ! ಯೂ ಪಿಂಗ್ ಕೂಡಾ ನಮ್ಮನ್ನು 2 ಗಂಟೆಗೆ ಮನೆ ತಲುಪಿಸಿ ನಿರ್ಭಯವಾಗಿ ತನ್ನ ಮನೆಗೆ ಹೋದಳು. ಬಹುಶ: ನಮ್ಮಲ್ಲೂ ಎಲ್ಲ ಮಹಿಳೆಯರೂ ಧೈರ್ಯ ವಹಿಸಿ ರಾತ್ರಿಯಲ್ಲೂ ಓಡಾಡಲೂ ಪ್ರಾರಂಭಿಸಿದರೆ ಮಹಿಳೆಯೆಂಬ ಸಂಪನ್ಮೂಲದ ಸದ್ಬಳಕೆ ಆಗಬಹುದು.ಮೌಲ್ಯಯುತ,ನಿರ್ಭೀತ ಸಮಾಜದ ಸೃಷ್ಟಿಯಾಗಬಹುದು.
ದೇವ್ರಾ……. ಹಾಗಂದ್ರೇನು?
ದೇವರ ಅಸ್ತಿತ್ತ್ವದ ಬಗ್ಗೆ ಮನುಕುಲ ಶತಮಾನಗಳಿಂದ ಜಿಜ್ಞಾಸೆ ನಡೆಸಿದೆ, ನಡೆಸುತ್ತಲೇ ಇದೆ. ನಾವು ಭಾರತೀಯರಂತೂ ದೇವನನ್ನು ಕೋಟ್ಯಾಂತರ ರೂಪಗಳಲ್ಲಿ ಕಂಡವರು. ಒಂದರ್ಥದಲ್ಲಿ ನಮ್ಮ ಜೀವನದ ಕೇಂದ್ರಬಿಂದುವೇ ದೇವರು. ನಮ್ಮ ಪ್ರವಾಸದಲ್ಲಿ ಜನಜೀವನದಲ್ಲಿ ದೇವನೆಂಬ ಕಲ್ಪನೆಯ ಅನುಪಸ್ಥಿತಿ ನನಗೆ ಕಂಡಿತು.ಸರಕಾರದ ಕಮ್ಯುನಿಸ್ಟ್ ಚಿಂತನೆಗಳಿಂದ ಇಂದಿನ ತಲೆಮಾರು ದೇವರ ಬಗ್ಗೆ ವಿಶಿಷ್ಟ ತೀರ್ಮಾನಕ್ಕೆ ಬಂದಿದೆ. ಹಾಗೇ ಕುತೂಹಲದಿಂದ ನಮ್ಮ ಗೈಡ್ ವಾಂಗ್ ಳನ್ನು ಕೇಳಿದೆ, ನೀನು ಯಾವ ದೇವರನ್ನು ಆರಾಧಿಸುತ್ತೀಯೆ? . ತಟಕ್ಕನೆ ಉತ್ತರ ಬಂತು- ದೇವ್ರಾ……. ಆರಾಧಿಸುವುದಾ….. ಹಾಗಂದ್ರೇನು?. ನಾನು – “ಅದೇ ಬುದ್ಧ ಅಥವಾ ಬೇರೆ ಯಾವುದಾದರೂ ದೇವರನ್ನು ದಿನವೂ ಪ್ರಾರ್ಥಿಸುತ್ತೀಯಾ?” ಎಂದೆ. ಅವಳು ಅರೆಕ್ಷಣ ಯೋಚಿಸಿ, “ನೋಡಿ , ನನಗೆ ಯಾವ ದೇವ್ರೂ ಇಲ್ಲ. ಆದರೆ ಇಲ್ಲಿನ ಕೆಲವು ಮತಗಳ ತತ್ತ್ವಗಳನ್ನು ನಂಬುತ್ತೇನೆ. ನಾನು ಚಿಕ್ಕವಳಿರುವಾಗ ಕನ್ ಫ಼ಯೂಜಿಸ್ ಮತವನ್ನು ಪಾಲಿಸುತ್ತಿದ್ದೆ . ಅದು ಕುಟುಂಬವನ್ನು ಪ್ರೀತಿಸು, ಆದರ್ಶಗಳಿಗೆ ,ಜೀವನ ಮೌಲ್ಯಗಳಿಗೆ ಬೆಲೆ ಕೊಡು ಅನ್ನುತ್ತದೆ. ಈಗ ಯುವತಿಯಾಗಿದ್ದೇನೆ ಆದ್ದರಿಂದ ಟಾವಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ನಿನಗೆ ಅನುಕೂಲವಾದ ಆದರ್ಶಗಳನ್ನು ಮಾತ್ರ ಪಾಲಿಸು , ಜೀವನದಲ್ಲಿ ಅದೃಷ್ಟ ಬರುತ್ತದೆ ಕಾಯುತ್ತಿರು, ಅನ್ನುತ್ತದೆ. ಇನ್ನು ವಯಸ್ಸಾದ ಮೇಲೆ ಬುದ್ಧಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ಕಷ್ಟಗಳನ್ನೆಲ್ಲಾ ಸಹಿಸಿಕೋ, ಪರರಿಗೆ ಉಪಕಾರ ಮಾಡು, ಶಾಂತಿಯಿಂದಿರು ಅನ್ನುತ್ತದೆ. ನೀವೇ ಹೇಳಿ ಬುದ್ಧಿಸಂ ನ್ನು ಯೌವನದಲ್ಲಿ ಅನುಸರಿಸಲು ಸಾಧ್ಯವೇ? ಅನುಸರಿಸಿ ದುಡ್ಡು ಸಂಪಾದನೆ ಮಾಡಲು ಸಾಧ್ಯವೇ? ಅಥವಾ ಟಾವಿಸಂ ನ್ನು ಮುದುಕರಾದ ಮೇಲೆ ಹೇಗೆ ಅನುಸರಿಸಲಿ? ಅದಕ್ಕೇನೇ ಯಾವ ದಿನ ಹೇಗೆ ಬರುತ್ತದೋ ಹಾಗೆ ನನ್ನ ನಂಬಿಕೆಗಳನ್ನು ಬದಲಾಯಿಸುತ್ತೇನೆ” ಎಂದಳು. ಬಾಯಿತೆರೆದುಕೊಂಡು ಕೇಳುತ್ತಲೇ ಇದ್ದ ನಾನು ’ವಾಂಗ್ ಜಗದ್ಗುರು’ವಿಗೆ ಮನಸಾರೆ ವಂದಿಸಿದೆ!!
ಯಶಸ್ಸಿನ ಆರಾಧನೆ
ಒಂದು ಸಾಯಂಕಾಲ ನಮ್ಮ ಮಿತ್ರರೊಡನೆ ಸಮೀಪದ ಮಾರ್ಕೆಟ್ ಗೆ ಹೋದೆವು. ಅಲ್ಲಿ ರಸ್ತೆ ಬದಿಯಲ್ಲಿ ಒಂದು ಬೃಹತ್ ಗಾತ್ರದ ಟಿ.ವಿ. ಅದರಲ್ಲಿ ಜನರ ಭಾವಚಿತ್ರದೊಡನೆ ಚೀನೀ ಭಾಷೆಯಲ್ಲಿ ಅನೇಕ ವಿವರಗಳು ಪ್ರದರ್ಶಿತವಾಗುತ್ತಿದ್ದವು. ಬಹುಶ: ಎಲ್ಲೋ ಅಪರಾಧಿಗಳ ಪತ್ತೆಗೆ ಈ ಕ್ರಮ ಇರಬಹುದು ಎಂದುಕೊಂಡು ರವಿ ಫಡ್ಕೆಯವರನ್ನು ಕೇಳಿದೆ. ಅವರು ನಕ್ಕು –“ಅವರು ಅಪರಾಧಿಗಳಲ್ಲ. ಸಮಾಜದ ಯಶಸ್ವೀ ವ್ಯಕ್ತಿಗಳು. ವೈದ್ಯರು, ಶಿಕ್ಷಕರು, ಇಂಜನಿಯರ್ ಗಳು, ರೈತರು, ಸೈನಿಕರು ಹೀಗೆ ವಿಶೇಷ ಸಾಧನೆ ಮಾಡಿದ ಯಾರೇ ಇದ್ದರೂ ಅವರ ವಿವರಗಳನ್ನು ಫೋಟೋದ ಜೊತೆ ಹೀಗೆ ಪ್ರದರ್ಶಿಸುತ್ತಾರೆ. ಮಕ್ಕಳಿಗೆ ಅವರು ಸ್ಫೂರ್ತಿಯಾಗಲಿ ಎಂದು ಸರಕಾರದ ಉದ್ದೇಶ” ಎಂದರು. ಸಾಮಾನ್ಯವಾಗಿ ಇಂಥ ಯಶಸ್ವೀ ವ್ಯಕ್ತಿಗಳೇ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು. ಚೀನಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವುದಿಲ್ಲ. ಆಯಾ ರಾಜ್ಯದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರೇ ತಮ್ಮ ನಾಯಕರನ್ನು ಆರಿಸುತ್ತಾರೆ. ಬುದ್ಧಿವಂತರೇ ಮತದಾನ ಮಾಡುವುದರಿಂದ ಒಳ್ಳೆಯ ವ್ಯಕ್ತಿಗಳೇ ಆಯ್ಕೆಯಾಗಿ ಬರುತ್ತಾರೆ. ಹಾಗಾದರೆ ಇಲ್ಲಿ ಭ್ರಷ್ಟಾಚಾರವೇ ಇಲ್ಲ ಅಂದುಕೊಳ್ಳಬೇಡಿ. ಚೀನಾ ಭ್ರಷ್ಟಾಚಾರದಲ್ಲೂ ನಂಬರ್ ೧. ವ್ಯಕ್ತಿ ತಾನು ಮಾಡಿಸುವ ರಸ್ತೆ, ನೀರು, ಪಾರ್ಕ್ ಇತ್ಯಾದಿ ಕೆಲಸಗಳನ್ನು ಉತ್ತಮವಾಗೇ ಮಾಡುತ್ತಾನೆ. ಇಲ್ಲದಿದ್ದರೆ ಅವನನ್ನು ಆ ಸ್ಥಾನದಿಂದ ಕಿತ್ತುಹಾಕುತ್ತಾರೆ ಎಂಬ ಭಯವಿರುತ್ತದೆ.ಆದರೆ ತನಗೆ ಬೇಕಾದವರಿಗೆ ಗುತ್ತಿಗೆ ಕೊಡುತ್ತಾನೆ. ಒಂದಷ್ಟು ಹಣ ಹೊಡೆಯುತ್ತಾನೆ ಅಷ್ಟೇ!. ಯಾಕೋ ನನಗೆ ನಮ್ಮ ಮಹಾನಗರದ ರಸ್ತೆಗಳಲ್ಲಿ ಕಾಣುವ ರಾಜಕಾರಿಣಿಗಳ, ಅವರ ಹಿಂಬಾಲಕರ ಪೋಸ್ಟರ್ ಗಳು ನೆನಪಾದವು. ಇವರೇನಾ ನಮ್ಮ ಮಕ್ಕಳಿಗೆ ನಾವು ತೋರಿಸುತ್ತಿರುವ ಆದರ್ಶವ್ಯಕ್ತಿಗಳು ? ಎನಿಸಿತು.
ನಮ್ಮ ಭಾರತೀಯತೆಯ ಒಂದು ಪ್ರಮುಖ [ಅವ]ಲಕ್ಷಣವೆಂದರೆ ಎಲ್ಲಿ ಏನೇ ನೋಡಿದರೂ, ಇದೇನ್ ಮಹಾ…? ನಮ್ಮಲ್ಲಿಲ್ಲದ್ದು ಇಲ್ಲೇನಿದೆ? ನಮ್ಮ ಪರಂಪರೆಗೆ ಸರಿಸಾಟಿ ಯಾರು? ಎಂಬ ಅನಿಸಿಕೆ. ನಿಜ.. ನಮ್ಮ ಬೇಲೂರು, ಹಳೇಬೀಡು, ತಮಿಳುನಾಡಿನ ದೇವಾಲಯಗಳ ಶಿಲ್ಪವೈಭವಕ್ಕೆ, ಮಹಾಬಲಿಪುರಂ, ಕೋನಾರ್ಕ, ಅಜಂತಾ- ಎಲ್ಲೋರಾ, ಮೌಂಟ್ ಅಬುಗಳ ಬೆರಗಿಗೆ ಸರಿಸಾಟಿ ಇನ್ನೊಂದಿಲ್ಲ.ಆದರೆ ನಮ್ಮ ಸಂಪತ್ತನ್ನು ಜೋಪಾನವಾಗಿ ಕಾಪಿಡುವಲ್ಲಿ ,ಸೂಕ್ತವಾಗಿ ಪ್ರಸ್ತುತಪಡಿಸುವಲ್ಲಿ ನಾವು ಸೋತಿದ್ದೇವೆ ಎಂಬ ಕಹಿಭಾವನೆ ಮನಸ್ಸಿನಲ್ಲಿ ಸುಳಿಯಿತು. ಇರಲಿ.. ಪ್ರಾಚೀನತೆ , ತಾಂತ್ರಿಕತೆ ಹಾಗೂ ಆಧುನಿಕತೆಯ ಅಪೂರ್ವ ಸಂಗಮವಾದ ಈ ದೇಶ ನಮ್ಮ ನಗರ ನಿರ್ಮಾತೃಗಳಿಗೂ ಮಾದರಿಯಾಗಬಲ್ಲುದು.
Birds Nest Olympic Stadium

Monday 16 November 2015

ಉಡುಪೆಂಬ ಆತ್ಮವಿಶ್ವಾಸ


ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ, ಕೀರ್ತಿಯನ್ನೂ ಗಳಿಸಬಹುದು. ಯಾರಿಗುಂಟು... ಯಾರಿಗಿಲ್ಲ ಇಂಥ ಸೌಭಾಗ್ಯ!!

ನನಗೆ ಹೀಗೆನನ್ನಿಸಿದ್ದು ಹುಚ್ಚನೆಂದು ಘೋಷಿಸಿಕೊಂಡ ಚಾಣಾಕ್ಷ ವ್ಯಕ್ತಿಯೊಬ್ಬ ಮಹಿಳೆಯ ಅತ್ಯಂತ ವೈಯಕ್ತಿಕ ವಿಷಯವಾದ ಅವಳ ಮೈಮೇಲಿನ ಬಟ್ಟೆಯ ಬಗ್ಗೆ ಪುಂಖಾನುಪುಂಖವಾಗಿ ಉಪದೇಶ ಕೊಡುತ್ತಿದ್ದುದು, ಅದರಲ್ಲೂ ದೇಹಸಿರಿ , ಸೌಂದರ್ಯ, ನಟನಾ ಕೌಶಲವೇ ಬಂಡವಾಳವಾಗಿರುವ ಮಾಧ್ಯಮದಲ್ಲಿ! ಹಾಗೂ ಅದನ್ನು ಕೇಳಿ , ನೋಡಿ ಮೆಚ್ಚಿ-ತಲೆದೂಗುತ್ತಿದ್ದ ನಾಗರಿಕರನ್ನು ಕಂಡು. ಮಹಿಳೆಗೆ ಎಷ್ಟು ವಿದ್ಯಾಭ್ಯಾಸ ಬೇಕು? ಎಂಥ ಗಂಡ ? ಮದುವೆ ಯಾವಾಗ? ಎಷ್ಟು ಮಕ್ಕಳು? ಅವಳು ಯಾವ ಕೆಲಸಗಳನ್ನು ಮಾಡಬೇಕು? ಎಷ್ಟು ಹೊತ್ತಿಗೆ ಮನೆ ಬಿಡಬೇಕು- ಎಷ್ಟು ಗಂಟೆಗೆ ಮನೆ ತಲುಪಬೇಕು? ಯಾವ ಬಟ್ಟೆ ತೊಡಬೇಕು? ಹೀಗೆ ಎಲ್ಲವನ್ನೂ ಸಾರ್ವಜನಿಕರೇ ನಿರ್ಧರಿಸಿ ಘೋಷಿಸುತ್ತಿರಬೇಕು! ಅವಳು ಮಾತ್ರ ಎಲ್ಲವನ್ನೂ ಕೇಳುತ್ತಾ ತನ್ನ ಪಾಡಿಗೆ ಕೆಲಸ ಮಾಡುತ್ತಾ ಇರಬೇಕು! ಹೇಗಿದೆ ನ್ಯಾಯ??

ಹಾಗೆ ನೋಡಿದರೆ ನನ್ನನ್ನೂ ಈ ಉಡುಪಿನ ಮಾಯೆ ಬಹಳ ವರ್ಷ ಕಾಡಿತ್ತು. ಕರಾವಳಿಯ ಕುಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನನಗೆ ಮಿನಿ ಮೈಕೆಲ್ ಎಂಬ ಪ್ರಾಣಸ್ನೇಹಿತೆಯೊಬ್ಬಳಿದ್ದಳು.ಉದ್ದಲಂಗ ಹಾಕಿಕೊಂಡು, ತಲೆಗೆ ಎಣ್ಣೆ ಹಚ್ಚಿ ಕಟ್ಟಿದ ಬಿಗಿಯಾದ ಎರಡು ಜಡೆಯ ಮೇಲೆ ಅಬ್ಬಲಿಗೆ ಹೂವು ಮುಡಿದುಕೊಂಡು ಶಾಲೆಗೆ ಹೋಗುತ್ತಿದ್ದ ನಮಗೆ, ಸ್ಕರ್ಟ್/ ಪಾಂಟ್ , ಟಿಶರ್ಟ್ ಹಾಕಿಕೊಂಡು ಬಾಬ್ ಕಟ್ ನಲ್ಲಿ ಕಂಗೊಳಿಸುವ ಅವಳೆಂದರೆ ಅನ್ಯಲೋಕದ ಜೀವಿ. ಸೈಕಲ್ ನಲ್ಲಿ ಅವಳ ಓಡಾಟ.. ಭಾನುವಾರಗಳಂದು ಚರ್ಚಿಗೆ ಅವಳ ಪಯಣ...ಅಲ್ಲಿ ಆಕೆ ಹಾಡುವ ಕ್ರಿಸ್ತನ ಇಂಗ್ಲೀಷ್ ಗೀತೆಗಳು.... ಪ್ರಸಾದವೆಂದು ತಿನ್ನುವ ಕೇಕ್ ...ಓಹ್..... ಎಂಥ ಮಧುರ ಜೀವನ. ಬೆಳಗ್ಗೆ ಎದ್ದು ಹೂ ಕೊಯ್ದು, ಮಾಲೆ ಮಾಡಿ,ದೇವರಮನೆ ಒರೆಸಿ, ರಂಗೋಲಿ ಹಾಕಿ...ಅಯ್ಯೋ.... ಸ್ವಲ್ಪ ದೊಡ್ಡವರಾದ ಮೇಲೆ ಮೂರು ದಿನ ಹೊರಗೆ ಕೂರುವ ಶಿಕ್ಷ...ಇನ್ನು ದೇವಸ್ಥಾನದಲ್ಲಿ ಅದೇ ಪುರಂದರ ಭಜನೆ...... ತಣ್ಣನೆಯ ತೀರ್ಥ ...ಥೂ...ನಮ್ಮದೂ ಒಂದು ಜೀವನವಾ....ಅಂತೆಲ್ಲ ನಮಗೆ ಅನಿಸುತ್ತಿತ್ತು. ನನಗಂತೂ ಒಮ್ಮೊಮ್ಮೆ ಅವಳ ಜಾತಿಗೆ ಸೇರಿದರೆ ಹೇಗೆ?ಎಂಬ ಭಂಡ ಆಲೋಚನೆಯೂ ಬರುತ್ತಿತ್ತು .ಆದರೆ ಹಿರಿಯರ ಮಾತು ಮೀರಿದರೆ ರಕ್ತ ಕಾರುವಂತೆ ಮಾಡುವ ಸಾಮರ್ಥವಿರುವ ನಮ್ಮ ಮನೆಯ ಪಂಜುರ್ಲಿ-ಕಲ್ಲುರ್ಟಿಯರೆಂಬ ದೈವಗಳು ಹಾಗೂ ಮನೆಯ ಸುತ್ತ ಆಗಾಗ ಕಾಣಿಸುತ್ತಿದ್ದ ನಾಗಪ್ಪನಿಂದ ನನ್ನ ಯೋಜನೆ ಕಾರ್ಯರೂಪಕ್ಕೆ ಇಳಿಯಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಪಾಂಟ್ ಧರಿಸುವ ನನ್ನ ಕನಸು ನೆರವೇರಲೇ ಇಲ್ಲ. ಮುಂದೆ ಮದುವೆಯಾದ ಮೇಲೆ ಆರಂಭಿಕ ಸಂಸಾರತಾಪತ್ರಯಗಳೆಲ್ಲ ಕಳೆದು ಕೆಲವರ್ಷಗಳ ನಂತರ ಕೊನೆಗೂ ಒಂದುದಿನ ಪಾಂಟ್- ಟಾಪ್ ಧರಿಸಿಯೇ ಬಿಟ್ಟೆ. ಆದರೆ ಸತ್ಯವಾಗಿ ಹೇಳುತ್ತೇನೆ.ದೀರ್ಘಕಾಲದ ನಿರೀಕ್ಷೆಯಿಂದಲೋ ಅಥವಾ ವಯಸ್ಸಿನಿಂದಲೋ ಗೊತ್ತಿಲ್ಲ ನನಗೆ ಬಹಳ ನಿರಾಸೆಯಾಯಿತು... “ ಇದು ಇಷ್ಟೇನಾ!” ಅನ್ನಿಸಿತು.

ಈಗ ಕನಿಷ್ಟ ಉಡುಗೆ ತೊಡುವುದು ಆಧುನಿಕತೆಯ ಸಂಕೇತ ಎನಿಸಿದೆ. ಪಾಲಕರಿಗೂ ತಮ್ಮ ಮಕ್ಕಳು ಆಧುನಿಕರಾಗಿ ಕಾಣಲಿ ಎಂಬಾಸೆಯೂ ಇರುತ್ತದೆ.ತಮಗಿಷ್ಟ ಬಂದ ಉಡುಗೆ ತೊಟ್ಟು ನಿರ್ಭಯವಾಗಿ, ಲವಲವಿಕೆಯಿಂದ ತುಳುಕುವ ನನ್ನ ವಿದ್ಯಾರ್ಥಿನಿಯರನ್ನು ಕಂಡಾಗ ನನಗೆ ಆನಂದವಾಗುತ್ತದೆ. ನನ್ನ ವಿದ್ಯಾರ್ಥಿನಿಯೊಬ್ಬಳು ನನಗೆ ಹೇಳಿದ ಪ್ರಕಾರ ಒಳ ಉಡುಪುಗಳು ಕಾಣಿಸುವಂತಹ ಬಟ್ಟೆ ತೊಟ್ಟರೆ ಆತ್ಮವಿಶ್ವಾಸ ವರ್ಧಿಸುತ್ತದೆ. ಅಲ್ಲದೇ ಎಲ್ಲರ ಗಮನವನ್ನೂ ಸೆಳೆಯುವುದರಿಂದ ಮನಸ್ಸಿಗೆ ಖುಷಿಯೂ ಆಗುತ್ತದೆ. ಇರಲಿ... ಇದೆಲ್ಲ ಅವರವರ ವೈಯಕ್ತಿಕ ಅಭಿಪ್ರಾಯ.

ಏನೇ ಇರಲಿ. ಉಡುಗೆ - ತೊಡುಗೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅಲ್ಲದೇ ಇತಿಹಾಸವನ್ನು ಗಮನಿಸಿದರೂ ಕಾಲನ ದಾಳಿಯಲ್ಲಿ ಹೆಚ್ಚು ಬದಲಾವಣೆಗೆ ಒಳಪಟ್ಟದ್ದೆಂದರೆ ಬಟ್ಟೆಗಳೇ. ಹೊಸದರ ಬಗ್ಗೆ ಆಸೆಪಡುವುದು ಕ್ರಿಯಾಶೀಲ ವ್ಯಕ್ತಿಯ ಸಹಜಗುಣ. ಸಂದರ್ಭಕ್ಕೆ , ಹೊಟ್ಟೆಪಾಡಿಗೆ, ಮನಸ್ಸಂತೋಷಕ್ಕೆ ಅನುಗುಣವಾಗಿ ಅನುಕೂಲಕರವಾದ ಬಟ್ಟೆಯನ್ನು ತೊಡುವ ಹಕ್ಕನ್ನು ಮಹಿಳೆಯಿಂದ ಯಾರೂ ಕಿತ್ತುಕೊಳ್ಳಬಾರದು. ಆಕೆ ಅದಕ್ಕೆ ಅವಕಾಶ ಮಾಡಿಕೊಡಲೂಬಾರದು.ನಮ್ಮ ಸಂಸ್ಕೃತಿಯು ಹಾಡಿ ಹೊಗಳುವ ಸೀರೆಗಿಂತ ಪಾಶ್ಚಾತ್ಯ ಉಡುಪುಗಳು ಯಾವುದೇ ರೀತಿಯಲ್ಲಿ ಅಸಭ್ಯವಲ್ಲವೇ ಅಲ್ಲ. ಇನ್ನು ಮಹಿಳೆಯರ ಬಟ್ಟೆಯಿಂದ ಸಂಸ್ಕೃತಿ ನಾಶ, ಅತ್ಯಾಚಾರವಾಗುವುದೇ ನಿಜವಾದರೆ ಅಂಥಾ ಸಮಾಜವನ್ನು ನಿರ್ಮಿಸಿದ ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.