Saturday 26 March 2016

ಸಹಾಯ‌ ‍ಮತ್ತು 108 ವಿಘ್ನ‌


ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ ಕಾರಿಗೆ ಅಪ್ಪಳಿಸಿದ. ಎರಡೂ ವಾಹನಗಳೂ ಕೆಲವು ಪಲ್ಟಿ ಹೊಡೆದು ಅಷ್ಟು ದೂರ ಹೋಗಿ ಬಿದ್ದವು. ನಾವು ಕಾರು ನಿಲ್ಲಿಸಿ , ಹತ್ತಿರ ಹೋದೆವು. ಬೈಕ್ ಯುವಕನ ಹೆಲ್ಮೆಟ್ ಒಡೆದು ಸಾಕಷ್ಟು ಏಟಾಗಿತ್ತು. ಕಾರಿನ ಚಾಲಕನಿಗೂ ಗಾಯಗಳಾಗಿದ್ದವು.. ಹೆದ್ದಾರಿಯಲ್ಲಿ ಓಡುತ್ತಿದ್ದ ಹೆಚ್ಚಿನ ವಾಹನಸವಾರರು ಒಮ್ಮೆ ವೇಗ ತಗ್ಗಿಸಿ ಜೀವ ಹೋಯ್ತಾ....?? ಎಂದು ಕೇಳಿ ಇಲ್ಲ... ಎಂದು ತಿಳಿದೊಡನೆ ಮುಂದೆ ಹೋದರು. ಕೆಲವರು ವಾಹನ ನಿಲ್ಲಿಸಿಬಂದು ಬಿದ್ದವರನ್ನು ಕೂರಿಸಿ ನೀರು ಕುಡಿಸಲು ಸಹಾಯಮಾಡಿದರು. ಸರಿ... ನನ್ನ ಸಮಾಜಮುಖಿ ಪ್ರಜ್ಞೆ ಜಾಗ್ರತಗೊಂಡು[ ವ್ಯವಹಾರಚತುರರಾದ ನನ್ನ ಪತಿಯ ಮಾತನ್ನು ಕೇಳದೇ] ೧೦೮ ಕ್ಕೆ ಕರೆ ಮಾಡಿಯೇ ಬಿಟ್ಟೆ. ಆ ಕಡೆಯಿಂದ ಸ್ಥಳದ ವಿಳಾಸ ಕೇಳಿದರು. ಸುತ್ತಲೂ ನೋಡಿದೆ. ಬಟಾಬಯಲು... ಉರುಬಿಸಿಲು... ಅಲ್ಲಿ ದೂರದಲ್ಲಿ ನಾಲ್ಕು ನಾಯಿಗಳು.. ಒಂದು ಎಮ್ಮೆ.. ಮೂರು ಹಸುಗಳನ್ನು ಬಿಟ್ಟರೆ ಏನಿಲ್ಲ... . ಅಲ್ಲೇ ಯಾರನ್ನೋ ಕೇಳಿ ಸುಮಾರಾಗಿ ವಿಳಾಸವನ್ನು, ಕಾರು ಬೈಕಿನ ಸಂಖ್ಯೆಗಳನ್ನು ಹೇಳಿದೆ. ನಾವು ಇಲ್ಲಿರಲಾಗುವುದಿಲ್ಲ. ಬೇಗನೇ ಬೆಂಗಳೂರ ಸೇರಬೇಕು ಎಂದೆ. “ಸರಿ ನೀವು ಹೋಗಿ ನಾವು ಸ್ವಲ್ಪಹೊತ್ತಲ್ಲಿ ಬರುತ್ತೇವೆ” ಎಂದರು. ಅಷ್ಟು ಹೊತ್ತಿಗೆ ಜನರೂ ಸೇರಿದ್ದರು. ನಾವು ಪ್ರಯಾಣ ಮುಂದುವರೆಸಿದೆವು.
ನನ್ನ ಶನಿದಶೆ ಆರಂಭವಾಯಿತು. ೧೦೮ ಸಿಬ್ಬಂದಿಯಿಂದ ಕರೆಗಳು.. ಎಲ್ಲಿ ಮೇಡಂ ... ಕಾರೂ ಇಲ್ಲ...ಆಕ್ಸಿಡೆಂಟೂ ಇಲ್ಲ. ಅಡ್ರೆಸ್ ಸರಿಯಾಗಿ ಹೇಳಿ.... ವಾಪಸ್ ಬನ್ನಿ ಇತ್ಯಾದಿ... ನನ್ನ ಅಸಹಾಯಕತೆಯನ್ನು ವರ್ಣಿಸಿದೆ. ಮುಂದೆ ಒಂದು ವಾರ ದಿನವೂ ಇದೇ ಕತೆ. ನಿಮ್ಮ ಹೆಸರು, ವಿಳಾಸ, ಅಪಘಾತದ ಸಮಯ... ನೀವು ಅಲ್ಲೇ ಇರಬೇಕಿತ್ತು... ಹಾಗೆ.. ಹೀಗೆ. ಕೊನೆಗೊಮ್ಮೆ ತಾಳ್ಮೆಗೆಟ್ಟು ಕಿರುಚಿದ ಮೇಲೆ ಕರೆಗಳು ನಿಂತವು.
ನೀವೂ ಸಹಾಯಹಸ್ತ ಚಾಚುವ ಪೈಕಿಯವರಾದರೆ ನಾನು ಕಲಿತ ಪಾಠಗಳನ್ನು ಒಮ್ಮೆ ಓದಿ.
೧. ಅಪಘಾತದ ಸ್ಥಳ ಪರಿಚಿತವಾಗಿದ್ದಲ್ಲಿ ಮಾತ್ರ ಸಹಾಯ ಮಾಡುವ ಸಾಹಸಕ್ಕೆ ಕೈಹಾಕಿ.
೨. ಆಂಬುಲೆನ್ಸ್ ಬರುವವರೆಗೂ ಅಲ್ಲೇ ನಿಲ್ಲುವ ತಾಳ್ಮೆ, ಸಮಯ ಇರಬೇಕು. ಅಥವಾ ಬೇರೆ ವ್ಯವಸ್ಥೆ ಮಾಡುವ ಸಾಮರ್ಥ್ಯ ಇರಬೇಕು.
೩. ಈ ಸಲಹೆ ಹೆಂಗಸರಿಗೆ ಮಾತ್ರ- ಆಗಾಗ ನಿಮ್ಮ ಗಂಡನ ಮಾತನ್ನು ಪರಿಪಾಲಿಸುವ ಹವ್ಯಾಸ ಇರಲಿ. ಕೆಲವೊಮ್ಮೆ ಪತಿ ಪರಮೇಶ್ವರರು ಅಮೂಲ್ಯ ಸಲಹೆಗಳನ್ನು ಕೊಡುತ್ತಾರೆ.