Sunday, 17 January 2016

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....







ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು ಒಮ್ಮೆ  ನೋಡಬೇಕು ನೀವು.. ಅಬ್ಬಾ ಪ್ರಪಂಚದ ಎಲ್ಲಾ ಭೂಖಂಡಗಳನ್ನೂ ಇಲ್ಲೆ ಕೊರೆದಿದ್ದಾರೆ. ಎಲ್ಲಿ ಕಾಲಿಟ್ಟರೂ ವಿವಿಧ ಆಕಾರದ ಹೊಂಡಗಳು. ಮಧ್ಯೆ ಅಲ್ಲಲ್ಲಿ ಸಪಾಟು ಜಾಗ.. ಇಂಥ ರಸ್ತೆ ಅನ್ನೋ ಮೈದಾನದಲ್ಲಿ ನಮ್ಮ ಬೀದಿಯ ಮಕ್ಕಳು ಕ್ರಿಕೆಟ್ ಆಡುತ್ತಾ  ಇದ್ದರು. ಆಟದ ಹುಮ್ಮಸ್ಸಿನಲ್ಲಿ ಎಲ್ಲಾದರು ಬಿದ್ದು ಕೈ-ಕಾಲು ಮುರಿದುಕೊಂಡರೆ ಕಷ್ಟ ಅಂದುಕೊಂಡು ನಾನು ಆ ಹುಡುಗರಿಗೆ  “ಹುಷಾರು ಕಣ್ರೋ.. ರಸ್ತೆ ಸರಿಯಿಲ್ಲ. ಬಿದ್ದರೆ ಏಟಾದೀತು.. ಅಲ್ಲೊಂದು ಖಾಲಿ ಸೈಟಿದೆ ನೋಡಿ. ಅಲ್ಲಿ ಆಡಿ” ಅಂದೆ. ಎಲ್ಲವೂ ಒಂದು ಕ್ಷಣ ಆಟ ನಿಲ್ಲಿಸಿದರು. ಚೆಂಡು ಹಿಡಿದಿದ್ದ ಆ ಮೂಲೆಮನೆ ಪ್ರಿಯಾಳ ಮಗ ಸಂತೋಷ ನನ್ನಕಡೆ ಕಣ್ಣು ಹಾಯಿಸಿದ. ತನ್ನೆಲ್ಲಾ ಗೆಳೆಯರ ಕಡೆಗೊಂದು ದೃಷ್ಟಿ ಬೀರಿ “ ಆಂಟಿ.. ಈ ರಸ್ತೆ ನಮಗೆ ಆಟ ಆಡಕ್ಕೆ ಸರಿಯಿಲ್ಲ ಅಂತೀರಲ್ಲಾ.. ನೀವು ಮಾತ್ರ ವಾಕಿಂಗ್ ಹೋಗೋದಕ್ಕೆ ಚೆನ್ನಾಗಿದ್ಯಾ... ನೀವು ಹುಷಾರಾಗಿ ನೋಡ್ಕೊಂಡು ನಡೀರಿ...” ಅಂತ ಮಾತಿನ ಚಾಟಿ ಬೀಸಿದ.ಆ ದುರಹಂಕಾರಿ ಸಾಫ಼ಟ್ ವೇರ್ ಅಮ್ಮನಿಗೆ ಸರಿಯಾದ ಮಗ ಅಂದುಕೊಂಡು ಏನೂ ಆಗದವಳಂತೆ ಮನೆ ಕಡೆ ಹೆಜ್ಜೆ ಹಾಕಿದೆ.

ನೀವೇನೇ ಹೇಳಿ.. ಮಕ್ಕಳು ದೇವರ ಪ್ರತಿರೂಪ.. ಅವರ ಮನಸ್ಸು ನಿಷ್ಕಲ್ಮಶ.. ಅನ್ನುವ ಮಾತಿನ ಮೇಲೆ ನನಗೆ ಇತ್ತೀಚೆಗೆ ನಂಬಿಕೆ ಹೊರಟುಹೋಗಿದೆ.ನನ್ನ ಚಿಕ್ಕಮ್ಮನ ಮಗಳು ಸುಧಾಳ ಮೂರುವರ್ಷದ ಮಗಳನ್ನು ನೋಡಬೇಕು ನೀವು. ಕಳೆದ ಶುಕ್ರವಾರ ರಜೆ ಇತ್ತಲ್ಲ ಯಾವುದೋ ಬಂದ್ ಅಂತ ಅವತ್ತು ಮನೆಯಲ್ಲಿ ಬೇಜಾರು ಅಂದುಕೊಂಡು ಅವಳ ಮನೆಗೆ ಹೋದೆ.ಈ ಪುಟ್ಟಿನೇ ಬಾಗಿಲು ತೆಗೆದಳು.ಅವಳ ತುಟಿಯ ಮೇಲೆ ಸುಳಿದ ಕುಟಿಲನಗೆಯನ್ನು ನೋಡಿ ಯಾಕೋ ಬಂದ ಗಳಿಗೆ ಸರಿಯಿಲ್ಲ ಅನಿಸಿತು. ಆದ್ರೂ ಅಂಥ ಮುದ್ದುಮಗುವನ್ನು ನೋಡಿ ಮಾತನಾಡಿಸದೇ ಇರಲು ಸಾಧ್ಯವಾಗದೇ “ಏನೇ ಪುಟ್ಟಿ ಏನ್ಮಾಡ್ತಾ ಇದ್ದೀಯಾ?” ಅಂದೆ. ತಟಕ್ಕನೆ ಉತ್ತರ ಬಂತು “ ನಿಮ್ಮಜೊತೆ ಮಾತಾಡ್ತಾ ಇದ್ದೀನಿ!” ಸುತ್ತಮುತ್ತ ನೋಡಿದೆ.ಸದ್ಯ ಯಾರೂ ಕೇಳಿಸ್ಕೊಂಡಿಲ್ಲ ಸಮಾಧಾನವಾಯ್ತು. ಸುಧಾ ಒಳಗಡೆಯಿಂದ ಬಂದವಳು ಓ.. ಬಾರೇ... ಅಂತ ಆದರ ತೋರಿಸಿದಳು.ಎಲ್ಲ ಸಮಾಚಾರ ಮಾತಾಡಿದ್ದಾಯ್ತು.ಸುಧಾ ಕಾಫಿ ತರಲು ಅಡಿಗೆಮನೆಗೆ ಹೋದಳು. ನಾನು ಚಿಂಟೂ ಟಿ.ವಿ ನೋಡುತ್ತಿದ್ದ ಆ ಮಗುವಿಗೆ  “ಏನೇ ಸುಬ್ಬಿಎಷ್ಟನೇ ಕ್ಲಾಸು” ಅಂದೆ. ಎಲ್ ಕೆಜಿ.. ಅಂದವಳೇ ಮಾಕ್ಸ್ ಚಾನೆಲ್ ಹಾಕಿದಳು. ಅದೇನೋ “ಮೈಮೇಲೆ ಇರುವೆ ಬಿಟ್ಟುಕೊಂಡರಂತೆ” ಅನ್ನೋ ಗಾದೆ ಥರ ನಾನು ಸುಮ್ಮನಿರಲಾರದೇ “ಸ್ಕೂಲಿಗೆ ಹೇಗೆ ಹೋಗ್ತೀಯಾ?” ಅಂದೆ.ನನ್ನನ್ನೊಮ್ಮೆ ಗುರ್ರಂತ ನೋಡಿ ಸೋಫಾದಿಂದ ಛಂಗನೆ ನೆಗೆದು “ನೋಡಿ... ಹೀಗೆ ನಡಕೊಂಡು ಹೋಗ್ತೀನಿ.... ನಡಕೊಂಡು ಬರ್ತೀನಿ ..” ಅಂದವಳೇ ಇಪ್ಪತ್ತು ಹೆಜ್ಜೆ ಗೇಟಿನವರೆಗೆ ಹೋಗಿ ಶಿಸ್ತಾಗಿ ವಾಪಸ್ ಬಂದು ಕುಳಿತಳು. ಈ ಸಾರಿ ಮರ್ಯಾದೆ ಹೋಯ್ತು. ಸುಧಾ ಕಾಫಿ ತೆಗೆದುಕೊಂಡು ಬಂದವಳು ಕಿಸಕ್ ಅಂತ ನಕ್ಕು “ ತುಂಬಾ ಚೂಟಿ ಕಣೇ... ಟೀಚರ್ಸ್ ಎಲ್ಲ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ ಇವಳ ಬಗ್ಗೆ” ಅಂದಳು. ಹೂಂ... ಹೋಪ್ಸ್ ಇಟ್ಟುಕೊಳ್ಳಬೇಕಾದ್ದೇ ಈ ಪಟಾಕಿಯ ಮೇಲೆ ಅಂದುಕೊಂಡು ದೇಶಾವರಿ ನಕ್ಕು ಸುಮ್ಮನಾದೆ. ಇವಳಾದರೂ ವಾಸಿ, ಕಳೆದ ವಾರ ಪಕ್ಕದ ಬೀದಿಯಲ್ಲಿ ಕಟ್ಟಿರೋ ಹೊಸಮನೆಯ ಗೃಹಪ್ರವೇಶಕ್ಕೆ  ನಾನು, ಮುಂದುಗಡೆ ಮನೆಯ ವಾಣಿ -ಅವಳ ಮಗ ನಿಪುಣ್ ಹೋಗಿದ್ದೆವು. ತುಂಬಾ ಜನ ಬಂದಿದ್ದರು. ಅಲ್ಲೊಬ್ಬರು ತಮ್ಮ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಕುಳಿತಿದ್ದರು. ಆ ಮಗುವಿಗೆ ಗಲ್ಲ, ಗದ್ದ, ಹಣೆ, ಕೈ,ಪಾದ  ಹೀಗೆ ದೇಹದ  ಮೇಲೆಲ್ಲ ಕಪ್ಪುಕಾಡಿಗೆಯ ಬೊಟ್ಟುಗಳನ್ನಿಟ್ಟಿದ್ದರು.ಮಗುವಿನ ಹಾಲುಬಿಳುಪು ಮೈಯಲ್ಲಿ ಈ ದೃಷ್ಟಿಬೊಟ್ಟುಗಳು ಕಣ್ಣಿಗೆ ರಾಚುತ್ತಿದ್ದವು. ನಿಪುಣ್ ಆ ಮಗುವನ್ನು ಅರೆಕ್ಷಣ ನೋಡಿದವನೇ ಜೋರಾಗಿ “ಅಮ್ಮ ಮಗು ನಮ್ಮ ಟಾಮಿನಾಯಿಯ ಥರಾನೇ ಇದೆ ಅಲ್ವಾ?ಬಿಳಿ ಮೈ ಕಪ್ಪು ಚುಕ್ಕೆ!” ಅನ್ನೋದೇ. ಅಯ್ಯೋ! ನಮಗಂತೂ ತಗ್ಗಿಸಿದ ತಲೆ ಮೇಲೆತ್ತಲಾಗಲಿಲ್ಲ.

ಹಿಂದೆ ಮಹಾಭಾರತದ ಅಭಿಮನ್ಯುವು ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಶಸ್ತ್ರವಿದ್ಯೆಯ ಮಂತ್ರಗಳನ್ನು ಅರಗಿಸಿಕೊಂಡಿದ್ದನು ಎಂದು ಓದಿದ ನೆನಪು. ಗರ್ಭಿಣಿ ಹೆಂಗಸರು ಮನಸ್ಸಿಗೆ ಹಿತಕರವಾದ ವಾತಾವರಣದಲ್ಲಿದ್ದರೆ ಹುಟ್ಟುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂಬುದು ವೈಜ್ಞಾನಿಕವಾಗಿಯೇ ನಿರೂಪಿತವಾಗಿದೆ. ಹಾಗೇ ಈಗಿನ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಹೊರಪ್ರಪಂಚದ ಮಾತುಕತೆಗಳನ್ನು ಕೇಳಿಸಿಕೊಂಡು ಜೀರ್ಣಿಸಿಕೊಂಡಿರುತ್ತಾರೆ. ಹುಟ್ಟಿ ಮಾತು ಬರುತ್ತಿದ್ದಂತೆಯೇ ಚುರುಕು ಉತ್ತರಗಳನ್ನು ನಿರಾಯಾಸವಾಗಿ ನೀಡುತ್ತಾರೆ ಅನ್ನುವುದು ನನ್ನ ಭಾವನೆ. ನನ್ನ ಗೆಳತಿ ರೂಪಾಳ ಮಗಳು ನಾಲ್ಕುವರ್ಷದ ಅದಿತಿ ಇದ್ದಾಳೆ ನೋಡಿ . ಅವಳನ್ನು ಕಂಡರೆ ಒಂಥರಾ ಭಯಮಿಶ್ರಿತ ಗೌರವ ನನಗೆ.ಒಮ್ಮೆ ನಾನು-ರೂಪಾ ಗಾಂಧಿಬಜಾರಿನಲ್ಲಿ ಗಣೇಶಹಬ್ಬಕ್ಕೆಶಾಪಿಂಗ್ ಮುಗಿಸಿ ಮನೆ ಕಡೆ ಹೋಗ್ತಾ ಇದ್ದೆವು. ನಮ್ಮ ಜೊತೆ ನಡೆದು ಬಳಲಿದ್ದ ಈ ಪುಟಾಣಿ ಅಮ್ಮಾ... ಎತ್ಕೋ ...ಕಾಲುನೋವು.. ಹೊಟ್ಟೆನೋವು... ಅಂತೆಲ್ಲಾ ಪಿರಿಪಿರಿ ಶುರುಮಾಡಿದಳು. ಅಂಗಡಿಗಳನ್ನು ಸುತ್ತಿ ಸುಸ್ತಾಗಿದ್ದ ನಮಗೆ ಕೈಯಲ್ಲಿ ಸಾಮಾನಿನ ಚೀಲಗಳು ಬೇರೆ. ಎಷ್ಟು ಸಮಾಧಾನ ಹೇಳಿದರೂ ಇವಳು ಕೇಳುತ್ತಿಲ್ಲ. ರೂಪಾ ರೇಗಿ “ ನೋಡು ನೀನು ಹೀಗೆ ಹಠ ಮಾಡ್ತಾ ಇದ್ದರೆ ಅಲ್ಲಿ ಮೂಲೆಯಲ್ಲಿ ನಿಂತಿದ್ದಾನಲ್ಲ ಅವನಿಗೆ ನಿನ್ನ ಕೊಟ್ಬಿಡ್ತೀನಿ... ಸುಮ್ನೆ ನಡಿ” ಅಂದಳು. ಆ ಮೂಲೆಯಲ್ಲಿ ನಿಂತಿದ್ದ  ವಯಸ್ಸಾದ,ಕೊಳಕುಬಟ್ಟೆಯ, ಆ ರೋಗಿಷ್ಟ ಮುದುಕನನ್ನು ಎರಡು ಕ್ಷಣ ದುರುಗುಟ್ಟಿ ನೋಡಿದ ಅದಿತಿ “ ಏ... ಹ..ಹ... ಅವಂಗೇ ನಡೆಯಕಾಗಲ್ಲ.... ನೀನು ಕೊಟ್ರೂ  ನನ್ನ ಅವನು ತಗೊಳೋದೇ ಇಲ್ಲ...ಅಮ್ಮ ನಿಂಗೆ ಅಷ್ಟೂ ಗೊತ್ತಾಗಲ್ಲ... ”ಅಂದಾಗ  ನಾವಿಬ್ಬರೂ ಮುಖ ಮುಖ ನೋಡಿಕೊಂಡು ಮುಂದೆ ನಡೆದೆವು.

ಮಕ್ಕಳ ಈ ಅತಿಬುದ್ಧಿವಂತಿಕೆ ಇತ್ತೀಚಿನ ಕೆಲವರ್ಷಗಳ ಬೆಳವಣಿಗೆ. ಹಿಂದೆ ಮಕ್ಕಳು ಮುಗ್ಧತೆಯ ಪ್ರತಿರೂಪವೇ ಆಗಿದ್ದರು. ಇಲ್ಲದಿದ್ದರೆ ಅತ್ತರೆ ಅಳಲವ್ವ ಈ ಕೂಸು ನನಗಿರಲಿ ..ಕೆಟ್ಟರೆ ಕೆಡಲಿ ಮನೆಗೆಲಸ ....,  ಕೂಸು ಕಂದವ್ವ ಒಳಹೊರಗೆ ಆಡಿದರ ಬೀಸಣಿಗೆ ಗಾಳೀ ಸುಳಿದಾವ..... ಎಂಬ ಜನಪದಗೀತೆಗಳು  ಸೃಷ್ಟಿಯಾಗುತ್ತಿರಲಿಲ್ಲ. ಈಗಿನ ಮಕ್ಕಳು ಬೀಸಣಿಗೆಯಲ್ಲ , ನಾಲಿಗೆಯೆಂಬ ಚಾವಟಿಗೆಯನ್ನು ಎಲ್ಲೆಂದರಲ್ಲಿ ಬೀಸುತ್ತಿದ್ದರೆ ಅದರ ಏಟು ತಿಂದವರಿಗೇ ಗೊತ್ತು ಅದರ ರುಚಿ. ಆಡುವಂತಿಲ್ಲ... ಅನುಭವಿಸುವಂತಿಲ್ಲ... ಪಾಪ ಚಿಕ್ಕಮಕ್ಕಳು ಅವುಗಳಿಗೇನು ಗೊತ್ತಾಗತ್ತೆ ಅಲ್ವೇ!.  ತಮ್ಮ ಮನೆಯಲ್ಲಿ ಪಾಯಸವನ್ನು ಕಣ್ಣೆತ್ತಿ ನೋಡದವು ಪರರ ಮನೆಗೆ ಹೋದಾಗ ಬಟ್ಟಲು ತುಂಬಾ ಕುಡಿದು “ಅವನು ಪಾಯಸ ತಿನ್ನಲ್ಲ” ಎನ್ನುವ ನಮಗೆ ಮಂಗಳಾರತಿ ಮಾಡುತ್ತವೆ. ಆ ಮನೆಯವರ ಬಗ್ಗೆ ಎಂದೋ ಆಡಿದ ಕುಹಕದ ಮಾತನ್ನು ಅಚ್ಚುಕಟ್ಟಾಗಿ ಅವರ ಮುಂದೆ ಒಪ್ಪಿಸಿ ನಾವು ಆಜನ್ಮ ವೈರಿಗಳಾಗುವಂತೆ ಮಾಡುತ್ತವೆ. ನನ್ನ ತಂಗಿಯ ಮಗನೊಮ್ಮೆ ತೋಳಿಲ್ಲದ ರವಿಕೆ ತೊಟ್ಟು ಬಂದ ನನ್ನ ಗೆಳತಿ ಮನೆಗೆ ಕಾಲಿಟ್ಟೊಡನೆ “ಏ.. ಆಂಟಿ ನೋಡಮ್ಮಾ... ನೀ ಮೊನ್ನೆ ಹೇಳ್ತಾ ಇದ್ಯಲ್ಲ... ಮೈ ತೋರಿಸಿಕೊಂಡು ಓಡಾಡ್ತಾರೆ ಅಂತ ... ಇವತ್ತು ಬ್ಲೌಸೇ ಹಾಕಿಲ್ಲಾ... ” ಎಂಬ ಅಣಿಮುತ್ತು ಉದುರಿಸಿ ನಮ್ಮ ಗೆಳೆತನಕ್ಕೆ ಮಂಗಳ ಹಾಡಿದ್ದ . ಇನ್ನೊಮ್ಮೆ ನನ್ನ ಜೀವದ ಗೆಳತಿ ಕವಿತಾ ಮನೆಗೆ ಬಂದಿದ್ದಳು. ಧಡೂತಿದೇಹದ ಆಕೆ ಮನೆಗೆ ಬಂದಾಗಿನಿಂದ ಈ ಮಹಾಶಯ ಅವಳನ್ನೇ ಗಮನಿಸುತ್ತಿದ್ದ. ನಾವು ಅದೂ ಇದೂ ಮಾತನಾಡುತ್ತಿರಬೇಕಾದರೆ ಇವನು “ಆಂಟಿ ನಿಮ್ಮ ಕಣ್ಣೆಲ್ಲಿದೆ? ನಾನು ನಿಮಗೆ ಕಾಣಿಸ್ತಾ ಇದೀನಾ?” ಅಂತ ಮಾತಿನ ಬಾಣ ಬಿಟ್ಟ. ಪಾಪ.. ಕವಿತಾಗೆ..ಒಂಥರಾ ಆಯಿತು. ನಿಜ ಕವಿತಾಳ ಮುಖದಲ್ಲಿ ಉಬ್ಬಿದ ಪೂರಿಯಂತಹ ಗಲ್ಲಗಳ ,ಏಲಕ್ಕಿ ಬಾಳೆಹಣ್ಣಿನಂತಹಾ ಮೂಗಿನ  ಹಿಂದೆ ಕಣ್ಣುಗಳು ಅಡಗಿವೆ. ಹಾಗಂತ ಈ ಕಿಲಾಡಿಗೆ ದೊಡ್ಡವರೆಂದರೆ ಗೌರವ ಬೇಡವೇ? ನನಗಂತೂ ಅವನನ್ನು ಮಚ್ಚಟೆಯಾಗಿ ಬೆಳೆಸಿದ ನನ್ನ ತಂಗಿಯ ಮೇಲೆ  ಬ್ರಹ್ಮಾಂಡದಂಥ ಸಿಟ್ಟು ಬಂದಿತ್ತು.

ನಮ್ಮಿಂದಲೇ ಈ ಜಗತ್ತಿಗೆ ಬರುವ , ನಾವೇ ಕೈಹಿಡಿದು ನಡೆಯಲು ಕಲಿಸಿದ ನಮ್ಮ ಕರುಳಕುಡಿಗಳು ನಮ್ಮಿಂದಲೇ ಭಾಷೆಯನ್ನು ಕಲಿತು, ನಮ್ಮ ಆರೈಕೆಯಿಂದಲೇ ರಕ್ತ-ಮಾಂಸಗಳನ್ನು ವರ್ಧಿಸಿಕೊಂಡು , ಸ್ವಲ್ಪ ತಿಳುವಳಿಕೆ ಬರುತ್ತಿದ್ದಂತೆಯೇ ನಮ್ಮನ್ನೇ ಕೂಪಮಂಡೂಕಗಳೆಂದು ಜರಿಯುವುದು ಸೋಜಿಗವೇ ಸರಿ. ಮೂರು -ನಾಲ್ಕು ವರ್ಷದವರೆಗೆ ಕಿವಿಗೆ ಹಿತವಾಗುವ ಮಕ್ಕಳ ವಾಗ್ಬಾಣಗಳು ಕಾಲಕಳೆದಂತೆ ಇರಿಯಲಾರಂಭಿಸುತ್ತವೆ. ಕೆಲವೊಮ್ಮೆ ಜೀವನದ ಸತ್ಯಗಳನ್ನು ತೋರಿಸುತ್ತವೆ. ನಾನೊಮ್ಮೆ ಸಹೋದ್ಯೋಗಿ ಲತಾಳ ಮನೆಗೆ ಹೋಗಿದ್ದೆ. ಆಕೆ ಅವಳ ಬಿಡುವಿಲ್ಲದ ದಿನಚರಿಯನ್ನೆಲ್ಲ ವರ್ಣಿಸಿ “ನೋಡೇ..ಹೊರಗೆ ದುಡಿಯುವುದಲ್ಲದೆ ಮನೆಯಲ್ಲಿ ಅತ್ತೆ-ಮಾವ, ಗಂಡ-ಮಕ್ಕಳಿಗೆ ಮೂರು ಹೊತ್ತಿಗೂ ಥರಾವರಿ ಅಡುಗೆ ಮಾಡಿ ಬಡಿಸ್ತೀನಿ.ಕೆಲಸದವಳನ್ನೂ ಇಟ್ಟುಕೊಳ್ಳದೇ ಎಲ್ಲ ಮನೆಕೆಲಸ ಮಾಡ್ತೀನಿ. ಅಲ್ಲದೇ ಈ ಮಕ್ಕಳ ಸ್ಕೂಲು, ಟ್ಯೂಶನ್, ಕ್ಲಾಸುಗಳು... ರಾತ್ರಿಯಾಗುವಷ್ಟರಲ್ಲಿ ಎಂಥ ಸುಸ್ತು ಗೊತ್ತಾ? ಆದ್ರೆ ಒಬ್ಬರಾದರೂ ನನ್ನ ಸಹಾಯಕ್ಕೆ ಬರಲ್ಲ ನೋಡು... ಅಂದಳು. ಮಧ್ಯೆ ಬಾಯಿ ಹಾಕಿದ ಹನ್ನೆರಡರ ಮಗಳು ನಿಧಿ “ ಏನಮ್ಮಾ... ಹೀಗೆಲ್ಲಾ ಒಬ್ಬಳೇ ಮಾಡು ಅಂತ ನಾವೆಲ್ಲಾ ನಿನಗೆ ಹೇಳಿದ್ದೀವಾ?ಯಾರನ್ನೂ ಹತ್ತಿರಕ್ಕೆ ಸೇರಿಸದೇ ನೀನೇ ಮಾಡ್ತೀಯಾ... ಆಮೇಲೆ ನೀನೇ ಅಳ್ತೀಯಲ್ಲಾ... ಸರೀನಾ ಇದು ? ಅನ್ನೋದೇ!!. ಅರೆ! ಹೌದಲ್ಲ ಎಂಥ ಸತ್ಯ ಇದೆಯಲ್ಲ ನಿಧಿಯ ಮಾತಿನಲ್ಲಿ ಅನಿಸಿತು ನನಗೆ. ನಮ್ಮ ಕೈಲಾದಷ್ಟೇ ಕೆಲಸ ಮಾಡಬೇಕು. ಜಗತ್ತನ್ನು ಮೆಚ್ಚಿಸಲು ಹೋಗಿ ಸುಸ್ತಾಗಿ ಅಳುವ ಅವಶ್ಯಕತೆ ಏನಿದೆ ಅಲ್ಲವೇ? ಈ ಮಾತಿಗೇನೂ ತಲೆದೂಗಬಹುದು. ಆದರೆ ಯೌವನದಲ್ಲೇ ಗಂಡನನ್ನು ಕಳಕೊಂಡ ಗಿರಿಜಳ ಮಗಳಾಡಿದ ಮಾತು ಇಷ್ಟು ವರ್ಷಗಳಾದರೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ. ಒಮ್ಮೆ ಆಕೆ ಗಂಡನ ಅನಾರೋಗ್ಯ, ನಡುವೆ ಹುಟ್ಟಿದ ಮಗಳು, ಆರ್ಥಿಕ ಸಂಕಷ್ಟಗಳು, ಸಾಂಸಾರಿಕ ತಾಪತ್ರಯಗಳು,  ಇತ್ಯಾದಿಗಳನ್ನೆಲ್ಲ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಳು. ಅಲ್ಲೇ ಇದ್ದ ಅವಳ ಹದಿನಾರರ ಮಗಳು “ ಏನಮ್ಮಾ.. ನನ್ನ ಹುಟ್ಟಿಸು ಅಂತ ನಾನೇನು ನಿನ್ನ ಬೇಡಿಕೊಂಡೆನಾ?.. ಅಷ್ಟು ಕಷ್ಟಗಳಿದ್ದರೆ ಮಗು ಹುಟ್ಟಿಸಬಾರದಾಗಿತ್ತು.ಮಾಡೋದೆಲ್ಲ ಮಾಡಿ ಈಗ ಅಳೋದು ನೋಡು !” ಎಂಬ ಮಾತಿನೇಟು ಕೊಟ್ಟಳು. ಉತ್ತರವಿಲ್ಲದ ಈ ಪ್ರಶ್ನೆಯನ್ನು, ಒಂಟಿಯಾಗಿ ಬದುಕುತ್ತಿರುವ ಗಿರಿಜಳನ್ನೂ ನೆನೆದರೆ ನನ್ನ ಹೃದಯ ಸ್ತಬ್ಧವಾಗುತ್ತದೆ. ಕಣ್ಣು ಮಂಜಾಗುತ್ತದೆ.

ನಮ್ಮ ಕೂಸುಗಳು ನಮ್ಮದೇ ದೇಹದ ಭಾಗಗಳು. ನಮ್ಮ ವಿಚಾರಗಳ ಪ್ರತಿಬಿಂಬಗಳು. ಮಕ್ಕಳು ದೊಡ್ಡವರ ನಡವಳಿಕೆಗಳನ್ನು, ನಂಬಿಕೆಗಳನ್ನು ಅನುಸರಿಸುತ್ತವೆಯೇ ವಿನ: ಅವರ ಬುದ್ಧಿಮಾತುಗಳನ್ನಲ್ಲ.ನಮ್ಮ ಪ್ರಬುದ್ಧ ಕ್ರಿಯೆಗಳಿಂದ ಬಾಲ್ಯದಿಂದಲೇ ಅವರಲ್ಲಿ ಹಿರಿಯರ ಬಗ್ಗೆ ಗೌರವ, ಕುಟುಂಬದ ಬಗ್ಗೆ ಹೆಮ್ಮೆ, ಕಳಕಳಿಗಳು ಬೆಳೆಯುವಂತೆ ಮಾಡಿದರೆ ಈ ವಾಕ್ ಶರಪಂಜರದಿಂದ ತಕ್ಕಮಟ್ಟಿಗೆ ಪಾರಾಗಬಹುದು ,ಅನ್ಯರನ್ನು ರಕ್ಷಿಸಬಹುದು . ಹಾಗೊಂದು ವೇಳೆ ಪರಿಸರದ ಪ್ರಭಾವದಿಂದಲೋ ಅಥವಾ ಹುಟ್ಟುಸ್ವಭಾವದಿಂದಲೋ ಬಿರುನುಡಿಗಳನ್ನು ಆಡಲಾರಂಭಿಸಿದಾಗ, ಆಗಾಗ ಎಚ್ಚರಿಕೆ ಕೊಟ್ಟು, ತಿಳಿಹೇಳುತ್ತಿದ್ದರೆ, ಸಕಾಲದಲ್ಲಿ ಮೃದುವಾಗಿ ತಿದ್ದಿದರೆ ನಮ್ಮ ಕಂದ ಸಮಾಜಕ್ಕೊಂದು ಆಸ್ತಿಯಾಗಬಹುದು. 

Thursday, 10 December 2015

ವಿದ್ಯಾರ್ಹತೆ - ವೃತ್ತಿ- ಸಂಪಾದನೆ


“ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ ವಿದ್ಯಾರ್ಹತೆ ಯಾವುದು?”
ಎಂದು ಯುದ್ಧರಂಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು  ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ ಜ್ಞಾನಿಗಳಾದ ಶ್ರೀಕೃಷ್ಣ -ಧರ್ಮರಾಜರೆಲ್ಲಿ? ಕಂಠಶೋಷಣೆಯಿಂದ ಹೊಟ್ಟೆಹೊರೆಯವ ಈ ಶಿಕ್ಷಕಿಯೆಲ್ಲಿ? ನನ್ನ ನಾಲಿಗೆ ಬಡಬಡಿಸಿತು- “ಭಾರತವೆಂಬ ಪುಣ್ಯಭೂಮಿಯಲ್ಲಿ ಈ ದಿನಗಳಲ್ಲಿ ಸಾಫ಼ಟ್ ವೇರ್ ಇಂಜನಿಯರ್ ಎಂಬ ವೃತ್ತಿಯಿದೆ.ಅದಕ್ಕಾಗಿ ಕಂಪ್ಯೂಟರ್ ಸೈನ್ಸ್ಇಂಜನಿಯರಿಂಗ್ ಎಂಬ ಡಿಗ್ರಿಯ ಅವಶ್ಯಕತೆಯಿದೆ. ಅದನ್ನು ಕಡಿಮೆ ಖರ್ಚಿನಲ್ಲಿ ಓದಲು ಶಾಲೆ ಮತ್ತು ಕೋಚಿಂಗ್ ಸೆಂಟರ್ ನಲ್ಲಿ ಕಠಿಣ ಪರಿಶ್ರಮದ ಅಗತ್ಯವೂ ಇದೆ .”
ಡಿಸೆಂಬರ್ ಬಂತೆಂದರೆ ಹತ್ತನೇ ತರಗತಿಯ ಮಕ್ಕಳನ್ನು , ಅವರ ಪಾಲಕರನ್ನು ಮುಂದೇನು? ಎಂಬ ಪ್ರಶ್ನೆ ಬಾಧಿಸಲಾರಂಭಿಸುತ್ತದೆ. ಕೆಲ ದಶಕಗಳ ಹಿಂದೆ ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಮಕ್ಕಳ ಅಂಕಗಳ ಬಗ್ಗೆ ,ಭವಿಷ್ಯದ ಬಗ್ಗೆ ಪಾಲಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಓದುವ ಹಂಬಲವಿರುವವರು-ಆರ್ಥಿಕ ಶಕ್ತಿ ಇರುವವರು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸೈನ್ಸ್/ಕಾಮರ್ಸ್/ಆರ್ಟ್ಸ್/ಡಿಪ್ಲೊಮಾ ಓದು, ಇತರರು- ಹುಡುಗರಾದರೆ ಪುರೋಹಿತಿಕೆ, ವ್ಯವಸಾಯ,ವ್ಯಾಪಾರ, ಡ್ರೈವಿಂಗ್ ಕಲಿತು ಪೇಟೆಗೆ ಜೀಪು- ದಿನಕ್ಕೆ ೧೦ ಟ್ರಿಪ್.....ಹುಡುಗಿಯರಾದರೆ ಹೊಲಿಗೆ,ಟೈಪಿಂಗ್, ...೨ ವರ್ಷದಲ್ಲಿ ಮದುವೆ... ಹೀಗೆ ಜೀವನ ಅತಿ ಸರಳವಾಗಿತ್ತು.  ಆದರೆ ಈಗ ಕಾಲ ಬದಲಾಗಿದೆ.ಮೌಲ್ಯಗಳು ಬದಲಾಗಿವೆ. ಎಲ್ಲರಿಗೂ ಮಕ್ಕಳು ಪಿ.ಯು.ಸಿಯಲ್ಲಿ ವಿಜ್ಞಾನವನ್ನೇ ಓದಲಿ. ಡಾಕ್ಟರ್/ಇಂಜನಿಯರ್ ಗಳಾಗಿ ಅತಿ ಹೆಚ್ಚು ಸಂಪಾದಿಸಲಿ,ವಿದೇಶಕ್ಕೆ ಹೋಗಲಿ ಎಂಬಾಸೆ. ಇದರಲ್ಲೇನೂ ತಪ್ಪಿಲ್ಲ. ಸುಖವಾಗಿ ಬದುಕಬೇಕೆನ್ನುವ ಆಸೆ ಸಹಜವೇ.  ಆದರೆ ಜನರ ಆಸೆಗಳಿಗನುಗುಣವಾಗಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ/ತಾಂತ್ರಿಕಶಿಕ್ಷಣವನ್ನು ಕೊಡುವ ಸಂಸ್ಥೆಗಳನ್ನು ನಮ್ಮ ಸರಕಾರಗಳು ಸ್ಥಾಪಿಸಿಲ್ಲ.  ಎಲ್ಲೆಂದರಲ್ಲಿ ಇರುವ ಖಾಸಗಿ ಕಾಲೇಜುಗಳಿಗೆ ಕೋಟಿಗಳನ್ನು ಹೊಂದಿಸುವ ಶಕ್ತಿ ನಮಗಿಲ್ಲ.ಅದಕ್ಕೇ ಮಕ್ಕಳು ೧೦ನೇ ತರಗತಿಗೆ ಬರುತ್ತಿದ್ದಂತೆ ಪಾಲಕರಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನಿಸುತ್ತದೆ.ಮಕ್ಕಳಿಗೆ ಉಸಿರು ಕಟ್ಟಿದಂತಾಗುತ್ತದೆ.
ಪಿ..ಯು.ಸಿ/೧೨ನೇ ತರಗತಿಯ ನಂತರದ ತಾಂತ್ರಿಕ ಶಿಕ್ಷಣಕ್ಕೆ ಇರುವ ಸರಕಾರೀ ವ್ಯವಸ್ಥೆ ದಯನೀಯವಾಗಿದೆ. ಕೇಂದ್ರಸರಕಾರದ ವಿಶೇಷ ಅನುದಾನವನ್ನು ಪಡೆಯುವ, ಉತ್ತಮ ದರ್ಜೆಯ ವ್ಯವಸ್ಥೆಗಳು,ಪರಿಣತ ಅಧ್ಯಾಪಕರಿರುವ ಇಪ್ಪತ್ತು ಎನ್.ಐ.ಟಿಗಳು ರಾಜ್ಯಕ್ಕೊಂದರಂತೆ ಇವೆ[ಕೆಲ ರಾಜ್ಯಗಳಲ್ಲಿ ಇಲ್ಲ].ಇಲ್ಲಿನ ಹತ್ತುಸಾವಿರ ಸೀಟುಗಳಿಗೆ ಹದಿಮೂರು ಲಕ್ಷ ಮಕ್ಕಳು ಪರೀಕ್ಷೆ[ಜೆ.ಇ.ಇ ಮೈನ್] ಬರೆಯುತ್ತಾರೆ.ಇವುಗಳಿಗಿಂತಲೂ ಶ್ರೇಷ್ಠವಾದ, ವಿಶ್ವದರ್ಜೆಯ ವ್ಯವಸ್ಥೆಗಳಿರುವ ಹದಿನೇಳು ಐ.ಐ.ಟಿಗಳು ದೇಶದಲ್ಲಿವೆ[ಹೆಚ್ಚಿನವು ಉತ್ತರಭಾರತದಲ್ಲಿ]. ಇಲ್ಲಿರುವ ಒಂಬತ್ತು ಸಾವಿರ ಸೀಟುಗಳಿಗೆ ಜೆ.ಇ.ಇ ಮೈನ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ[ ಜೆ.ಇ.ಇ ಅಡ್ವಾನ್ಸಡ್] ಬರೆಯುತ್ತಾರೆ. ಮೀಸಲಾತಿಯೆಂಬ ಗೊಂಡಾರಣ್ಯದಿಂದ ಪಾರಾಗಿ ಬಂದು ಇಲ್ಲಿ ಸೀಟು ದಕ್ಕಿಸಿಕೊಳ್ಳುವ ಪುಣ್ಯವಂತ, ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಐ.ಐ.ಟಿ/ಎನ್.ಐ.ಟಿಯಲ್ಲಿ   ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ಸಂಬಳದ ನೌಕರಿ ಪಡೆದು ಪಾಲಕರ ಕನಸುಗಳನ್ನು ನನಸಾಗಿಸುತ್ತಾರೆ. ಆದರೆ ಸ್ವಾಮೀ ... ಉಳಿದ ೧೨ ಲಕ್ಷದ ೮೦ ಸಾವಿರ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಅವರನ್ನು  ಬೀದಿಗೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಇಂಜನಿಯರಿಂಗ್ ಕಾಲೇಜುಗಳು ಕೈಬೀಸಿ ಕರೆಯುತ್ತವೆ. ಇವುಗಳಲ್ಲಿ ಕೆಲವು ಸರಕಾರೀ ಸಂಸ್ಥೆಗಳಿಗಿಂತಲೂ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುತ್ತವೆಂದು ಖ್ಯಾತಿ ಪಡೆದಿವೆ[BITS , PES, RVCE , SRME ಇತ್ಯಾದಿ] ಆದರೆ ಅವುಗಳಿಗೆ ಸರಕಾರೀ ಅನುದಾನ ಇಲ್ಲದಿರುವುದರಿಂದ ಅದಕ್ಕೆ ತಕ್ಕನಾಗಿ ಹಣವನ್ನು ಪಾಲಕರಿಂದ ವಸೂಲಿ ಮಾಡುತ್ತವೆ.ಉಳಿದಂತೆ ಹೆಚ್ಚಿನ ಖಾಸಗೀ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಮಟ್ಟ ಕಳಪೆಯಾಗಿರುತ್ತದೆ. ಇವುಗಳಲ್ಲಿ ಪ್ರವೇಶ ಪಡೆಯಲು ರಾಜ್ಯಸರಕಾರಗಳು ನಡೆಸುವ ಸಿ.ಇ.ಟಿ/ ಖಾಸಗಿಯವರ ಕಾಮೆಡ್ ಕೆ ಪರೀಕ್ಷೆಯನ್ನು ಬರೆಯಬೇಕು.ಈ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಉತ್ತಮ ಅಂಕಗಳನ್ನು ಪಡೆದವರಿಗೆ ಮೀಸಲಿಟ್ಟಿದ್ದಾರಾದರೂ ಅವು ಆನೆಯ ಹೊಟ್ಟೆಗೆ  ಅರೆಕಾಸಿನ ಮಜ್ಜಿಗೆಯಂತಾಗಿವೆ. ನಮ್ಮದೊಡ್ಡಸಂಖ್ಯೆಯ ಆಕಾಂಕ್ಷಿಸಮೂಹಕ್ಕೆ ಇವು ಏನೇನೂ ಸಾಲದು. ಆದ್ದರಿಂದ ಉಳಿದೆಲ್ಲ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳು ನಿಗದಿಪಡಿಸಿದ ದೊಡ್ಡಮೊತ್ತವನ್ನು ಸಲ್ಲಿಸಿ ಇಂಜನಿಯರಿಂಗ್ ಶಿಕ್ಷಣ ಪಡೆಯುವುದು ಅನಿವಾರ್ಯ. ಇನ್ನು ವೈದ್ಯಕೀಯ ಶಿಕ್ಷಣವನ್ನು ನೋಡಿದರೆ ದೇಶದಲ್ಲಿ ಕೇವಲ  ೧೫೦ ಸರ್ಕಾರೀ ಕಾಲೇಜುಗಳಿವೆ. ಅವುಗಳ ಇಪ್ಪತ್ತೊಂದು ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು  ಆರು ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿರುತ್ತಾರೆ. ಇನ್ನುಳಿದ ಎಲ್ಲರೂ ಖಾಸಗಿ ಕಾಲೇಜುಗಳಲ್ಲಿ ಲಕ್ಷಗಳನ್ನು ಸಲ್ಲಿಸಿ ವಿದ್ಯಾಭ್ಯಾಸ ಪಡೆಯಬೇಕು.
ಇಂಥ ವ್ಯವಸ್ಥೆಯಲ್ಲಿ ಸಹಜವಾಗಿಯೇ ಹೆಚ್ಚು ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಇರುತ್ತದೆ. ಈ ಸರಕಾರೀ ಸೀಟುಗಳಿಗಿರುವ ಸ್ಪರ್ಧೆಯಿಂದಾಗಿ  ಪ್ರವೇಶ ಪರೀಕ್ಷೆ ಅತ್ಯಂತ ಕಠಿಣವಾಗಿರುತ್ತದೆ. ಹನ್ನೆರಡನೇ ತರಗತಿಯ/ಪಿ.ಯು.ಸಿ ಯ ನಮ್ಮ ಸರ್ಕಾರೀ ಪಠ್ಯಕ್ರಮ ಈ ಪರೀಕ್ಷೆಯನ್ನು ಭೇದಿಸಲು ಅಸಮರ್ಥವಾಗಿದೆ. ಅದಕ್ಕೆ ಮತ್ತೆ ಖಾಸಗಿ ಟ್ಯೂಶನ್ ಸೆಂಟರ್ ಗಳು ನೆರವಿಗೆ ಬರುತ್ತವೆ.  ಇಲ್ಲಿನ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿಗಳು ಬೇಕು. [ ದೀಕ್ಷಾ ಕಾಲೇಜ್, ಎಕ್ಸಲೆಂಟ್,ಆಕಾಶ್,ಫಿಟ್ ಜೀ, ರಾಜಸ್ತಾನದ ಕೋಟಾ ಇತ್ಯಾದಿ]. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಇಲ್ಲಿನ ತರಬೇತಿ ಆರಂಭವಾಗುತ್ತದೆ .  ದಿನಕ್ಕೆ ೨೦೦-೪೦೦ [ಫಿಸಿಕ್ಸ್, ಕೆಮಿಸ್ಟ್ರಿ, ಮಾತ್ಸ್] ಲೆಕ್ಕಗಳನ್ನು ಅತಿ ಕಡಿಮೆ ನಿಮಿಷಗಳಲ್ಲಿ ಬಿಡಿಸುವ ಕಲೆಯನ್ನು ಇಲ್ಲಿ ಕಲಿಸುತ್ತಾರೆ..  ಆದರೆ ನೆನಪಿಡಿ ...ಇಷ್ಟೊಂದು ಶ್ರಮವಹಿಸಲು ವಿದ್ಯಾರ್ಥಿಗೆ ವಿಜ್ಞಾನದಲ್ಲಿ ಆಸಕ್ತಿ ಇರಬೇಕು. ತರ್ಕಬದ್ಧವಾಗಿ ಯೋಚಿಸುವ ಬುದ್ಧಿವಂತಿಕೆ ಬೇಕು. ಇದಲ್ಲದೇ ಮನೆಗೆ ಬಂದು ಮತ್ತೆ ೫-೬ ಗಂಟೆಗಳ .ಕಾಲ ಅಧ್ಯಯನವನ್ನೂ ಮಾಡಬೇಕು .ಒಟ್ಟಾರೆ ಎರಡು ವರ್ಷ ಅಸಾಮಾನ್ಯ ತಪಸ್ಸನ್ನೇ ಆಚರಿಸಬೇಕು..ಆದರೆ ಮಕ್ಕಳೇ ಯೋಚಿಸಿ ನಿಮಗೆ ಇದನ್ನು ಭರಿಸುವ ಶಕ್ತಿ ಇದೆಯೇ ?ಸಾಮಾನ್ಯ ಬುದ್ಧಿಮತ್ತೆಯ ನಿಮಗೆ - ಕಷ್ಟಪಟ್ಟು ಹಣ ಹೊಂದಿಸಿ ಮಗು ಒಳ್ಳೆಯ ಅಂಕಗಳನ್ನು ಪಡೆಯಲಿ ಎಂದು ನಿರೀಕ್ಷಿಸುವ ಪಾಲಕರಿಂದ, ಒಳ್ಳೆಯ ಅಂಕಗಳನ್ನು ಪಡೆಯುವ ಸಹಪಾಠಿಗಳಿಂದ, ಯಶಸ್ಸನ್ನು ಮಾತ್ರ ಗೌರವಿಸುವ ನಮ್ಮ ಸಮಾಜದಿಂದ ನಿಮ್ಮ ಮೇಲೆ ಹೇರಲ್ಪಡುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಬಹುದೇ? ಪಾಲಕರೇ... ನಿಮ್ಮ ಮಗುವನ್ನು ಗಮನಿಸಿ .ಹತ್ತನೇ ತರಗತಿಯವರೆಗೆ ಸರಿಯಾಗಿ ಎರಡು ಗಂಟೆಗಳ ಏಕಾಗ್ರತೆಯಿಲ್ಲದ ಮಗು ಮುಂದಿನ ೨ ವರ್ಷ ೧೨ ಗಂಟೆಗಳ ಕಾಲ ಓದಲು ಸಾಧ್ಯವೇ? ಗಣಿತ- ವಿಜ್ಞಾನವೆಂದರೆ ಚಳಿಜ್ವರ ಬರುವ ನಿಮ್ಮ ಮಗು ಈ ಕಡಲಿನಲ್ಲಿ ಈಜಬಲ್ಲನೇ? ಕಷ್ಟಪಟ್ಟು ಓದಿದರೆ ಎಲ್ಲವೂ ಸಾಧ್ಯ ಎಂಬ ಮಾತಿದೆ .ಆದರೆ ಓದಲು ಆ ವಿಷಯದ ಮೇಲೆ ಆಸಕ್ತಿ ಇರಬೇಕಲ್ಲವೇ?   
  ಬಡಬಡಿಸುತ್ತಿದ್ದ ನಾಲಿಗೆಯನ್ನೂ, ಓಡುತ್ತಿದ್ದ ಮನಸ್ಸನ್ನೂ ನಿಯಂತ್ರಿಸಿ ನಾನು ಆದಿತ್ಯನಿಗೆ ಹೇಳಿದೆ “ ಮಗೂ ಈ ಪ್ರಪಂಚದಲ್ಲಿ ಭವಿಷ್ಯದಲ್ಲಿ ಯಶಸ್ಸೇ ಸಿಗಬಹುದು ಎಂದು ಖಚಿತವಾಗಿ ಹೇಳುವಂಥ ವೃತ್ತಿ ಯಾವುದೂ ಇಲ್ಲ. ಆದರೆ ಸ್ವಲ್ಪ ಸಹನೆ, ಶ್ರದ್ಧೆ ಗಳಿದ್ದರೆ ಸಾಕಷ್ಟು ಹಣ ಸಂಪಾದಿಸಬಹುದಾದ ಅನೇಕ ವೃತ್ತಿಗಳಿವೆ. ಪ್ರಾಮಾಣಿಕವಾಗಿ ದುಡಿದು ಸಂಪಾದಿಸಲು ಸಾಧ್ಯವಿರುವ ಎಲ್ಲ ವೃತ್ತಿಗಳೂ ಶ್ರೇಷ್ಠವೇ. ಆತುರಪಡಬೇಡ. ಮೋದಿಯೆಂಬ ಮೋಡಿಗಾರನಿಂದಾಗಿ ಮುಂದಿನ ವರ್ಷಗಳಲ್ಲಿ ನಮ್ಮ ದೇಶದಲ್ಲೇ ಉದ್ಯೋಗರಂಗದಲ್ಲಿ ಅಗಾಧ ಬದಲಾವಣೆಗಳಾಗುವ ನಿರೀಕ್ಷೆ ಇದೆ. ನಮ್ಮ ಬದುಕು ನಮಗೆ ಮಾತ್ರ ಸೇರಿದ್ದು. ಅನ್ಯರನ್ನು ಮೆಚ್ಚಿಸಲು ಬದುಕಬೇಡ.ನಿನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನಿನ್ನಿಷ್ಟದ ವಿಷಯವನ್ನು ಆರಿಸಿ ಓದು.ಅಲ್ಲದೇ ಹಣವನ್ನೂ ಮೀರಿದ ಎಷ್ಟೋ ವಿಷಯಗಳು ಬದುಕಿನಲ್ಲಿವೆ... .ಧನಸಂಪತ್ತು ಖಂಡಿತವಾಗಿಯೂ ಹಿರಿದು ಆದರೆ ನೆಮ್ಮದಿಯೆಂಬ ಸಂಪತ್ತು ಎಲ್ಲಕ್ಕಿಂತ ಮಿಗಿಲು ”        


Friday, 20 November 2015

RESPECTFUL childhood

A scene from ‘Sa Re Ga Ma lil champs Kannada’ two Sundays ago --
Anchor- Oh you are so skinny. How many Idllis do you eat for breakfast?
Participant (a little girl) - One or two… [ Looks painfully at her]
Judge- Oh, one Idlly! That’s too much. Now onwards don’t eat idlies at all. Just take in the smell of Idlies. Ha! Ha!Ha! [Sarcastically]
And a big round of applause from the audience for his VALUABLE comments……
As far as we know judges for such reality shows have an authority to comment on the voice quality of the singers. But I would like to know who gave them the authority to pass degrading comments on the physical shape of the singers especially to a little girl?
Mostly a child’s physical features are decided by hereditary. Is it right to humiliate a child in public for none of his/her mistake? Is it correct to prick the tender heart which may already be crying from inside for its ugly looks? Please remember for a child the joy of success is temporary and pain of humiliation can be permanent.
In this day and age, a child is a precious commodity and there is an industry that thrives under the claim of providing a bright future, great exposure and so on. But can we allow the market to kill our child’s self-esteem, self -confidence, innocence and his/his invaluable childhood? Should we allow the apple of our eye to become an easy tool for someone’s money making scheme?
Knowingly or otherwise, most of us tend to pass comments at little ones like “you are fat /skinny/ dwarf /a coconut tree/a soda buddy / kaddi pailwan / charcoal and what not…. But just think once: what do we achieve by hurting that little soul? Can our comment change his/her body shape?
I feel children are the angels on this earth and they deserve a RESPECTFUL childhood. What do you say?

ಚೀನಾದ ನೆನಪುಗಳು

ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ, ಸ್ನೇಹಿತರೂ ಕೂಡಾ ಚೀನಾಕ್ಕೆ ಯಾಕೆ ಹೋಗುತ್ತೀರಿ? ಎಂದು ಪ್ರಶ್ನಾರ್ಥಕ ನೋಟ ಬೀರಿದರು. ಏನೇ ಇರಲಿ, ನನ್ನ ಕೌಟುಂಬಿಕ ಮಿತ್ರ, ಸುಜ್ಹೋ ನಗರದಲ್ಲಿ ಡೆಲ್ಫೈ ಎಲೆಕ್ಟ್ರಾನಿಕ್ ಕಂಪನಿಯ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ ಶ್ರೀ ರವಿ ಫಡ್ಕೆಯವರ ಆಹ್ವಾನದ ಮೇರೆಗೆ ಎಪ್ರಿಲ್ ಕೊನೆಯ ವಾರದ ಚೀನಾ ಮತ್ತು ಹಾಂಕಾಂಗ್ ಪ್ರವಾಸಕ್ಕೆ ನಮ್ಮಲ್ಲಿದ್ದ ಅಲ್ಪ- ಸ್ವಲ್ಪ ಉಳಿತಾಯದ ಹಣವನ್ನು ತೊಡಗಿಸಿ ತಯಾರಿ ಆರಂಭಿಸಿಯೇ ಬಿಟ್ಟೆವು.
ಚೀನಾದ ಬಗ್ಗೆ ನನಗೆ ಮೊದಲಿನಿಂದಲೂ ಅತೀವ ಕುತೂಹಲ. ನಮ್ಮ ಭಾರತದಂತೆಯೇ ಅಗಾಧ ಜನಸಂಖ್ಯೆಯ, ಶ್ರೀಮಂತ ಪರಂಪರೆಯ ನಾಡಿನ ಇಂದಿನ ಯಶೋಗಾಥೆಯ ಬಗ್ಗೆ ತಿಳಿಯುವ ಹಂಬಲ. ಹಿಂದೆ ನಾನು ಓದಿದ ‘ಸ್ಮೋಕ್ಸ್ ಅಂಡ್ ಮಿರರ್ಸ್ – ಪಲ್ಲವಿ ಅಯ್ಯರ್’ ಹಾಗೂ ‘ಮಾವೋನ ಕೊನೆಯ ನರ್ತಕ – ಲೀ ಕುನ್ ಕ್ಸಿಂಗ್ [ಕನ್ನಡಕ್ಕೆ ಜಯಶ್ರೀ ಭಟ್]’ ಎಂಬ ಎರಡು ಅತ್ಯುತ್ತಮ ಕೃತಿಗಳಿಂದ ಅಲ್ಲಿನ ಜನಜೀವನದ ಸ್ಥೂಲ ಪರಿಚಯವಾಗಿತ್ತಾದರೂ ಈ ರೀತಿಯ ಅಭಿವೃದ್ಧಿ ಹೇಗೆ ಸಾಧ್ಯ? ಸರ್ಕಾರವೆಂಬ ವ್ಯವಸ್ಥೆ ಈ ಮಟ್ಟದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವೇ? ಇದರಲ್ಲಿ ಉತ್ಪೇಕ್ಷೆ ಎಷ್ಟು? ನೈಜತೆ ಏನು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಬೆಂಗಳೂರಿನಿಂದ ಹಾಂಕಾಂಗ್ ಮೂಲಕ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಿಕ್ಕ ಕಣ್ಣಿನ ಬಿಗಿ ಮುಖದ ಇಮಿಗ್ರೇಷನ್ ಅಧಿಕಾರಿಯಿಂದ ಅನುಮತಿ ಪಡೆದು ಹೊರಬಂದಾಗ ,ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ ರವಿ ಫಡ್ಕೆಯವರಿಂದ ಪ್ರಶ್ನೆಗಳು ಸೂಕ್ತ ಉತ್ತರ ಪಡೆಯಲಾರಂಭಿಸಿದವು.
ಅಬಿವೃದ್ಧಿ , ಮೂಲಸೌಕರ್ಯಗಳ ವಿಚಾರದಲ್ಲಿ ನಮ್ಮ ದೇಶಕ್ಕೂ , ಚೀನಾಗೂ ಹೋಲಿಸಲು ಸಾಧ್ಯವೇ ಇಲ್ಲ. ಅಥವಾ ಯಾವ ದೇಶವನ್ನೂ ಇನ್ನೊಂದು ದೇಶದ ಜೊತೆ ಹೋಲಿಸಬಾರದು. ಪ್ರತಿಯೊಂದು ದೇಶವೂ ಭಿನ್ನ, ಅದರ ಜನಜೀವನ , ಸಂಸ್ಕೃತಿ, ಚರಿತ್ರೆ, ಸಮಸ್ಯೆಗಳೂ ಭಿನ್ನವಾಗಿರುತ್ತವೆ. ಆದರೆ ನಾನು ಅಲ್ಲಿ ಕಂಡ ಕೆಲ ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ನನ್ನ ಉದ್ದೇಶ.
ಇಲ್ಲಿ ಗಿಡವಲ್ಲ, ಮರ ನೆಡುವುದು!
ಇಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ , ಎಲ್ಲ ಕಟ್ಟಡಗಳ ಮುಂಭಾಗದಲ್ಲಿ ಎತ್ತರವಾದ ಮರಗಳು ಗಮನ ಸೆಳೆಯುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಒಂದೇ ಎತ್ತರ, ದಪ್ಪ. ಅರೆ… ಮರಗಳೂ ಇಲ್ಲಿ ಶಿಸ್ತು ಪಾಲಿಸುತ್ತವೆಯೇ ಎಂದು ಉದ್ಗರಿಸಿದ ನನಗೆ ಸಿಕ್ಕ ಉತ್ತರ ‘ಇಲ್ಲಿ ಗಿಡವಲ್ಲ.. ಮರ ನೆಡುತ್ತಾರೆ!’ ಸಾಮಾನ್ಯವಾಗಿ ಚೀನಾದಲ್ಲಿ ಹೊಸ ರಸ್ತೆ , ಕಟ್ಟಡಗಳ ಉದ್ಘಾಟನೆಗೂ ಮುನ್ನವೇ ಪೂರ್ಣಪ್ರಮಾಣದ ಉದ್ಯಾನಗಳ ನಿರ್ಮಾಣವಾಗುತ್ತದೆ. ಸಮೀಪದ ಹಳ್ಳಿಗಳಲ್ಲಿ ಈ ಉದ್ದೇಶಕ್ಕೆಂದೇ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದ ಮರಗಳನ್ನು ಬೇರುಸಮೇತ , ಲಾರಿಗಳಲ್ಲಿ ತಂದು ಹೊಸ ಸ್ಥಳಗಳಲ್ಲಿ ಮೊದಲೇ ತೋಡಿಟ್ಟ ಆಳವಾದ ಗುಂಡಿಗಳಲ್ಲಿ ನೆಡುತ್ತಾರೆ. ಮರಕ್ಕೆ ನಾಲ್ಕೂ ಕಡೆಗಳಿಂದ ಲೋಹದ /ಬಿದಿರಿನ ಕಂಬಗಳ ಆಧಾರವನ್ನು ನಿರ್ಮಿಸುತ್ತಾರೆ. ಒಂದು ವರ್ಷದ ನಂತರ ಮರ ಬೇರು ಬಿಟ್ಟಿರುವುದನ್ನು ಖಚಿತಪಡಿಸಿಕೊಂಡು ಆಧಾರಸ್ತಂಭಗಳನ್ನು ತೆಗೆಯುತ್ತಾರೆ. ಇಂಥ ಸಾವಿರಾರು ಮರಗಳನ್ನು ರಸ್ತೆ ಗಳ ಇಕ್ಕೆಲಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ ನೋಡಿ ಅಚ್ಚರಿಯಾಯಿತು.
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರ ನೆಟ್ಟ ರಸ್ತೆ
ಮರ ನೆಟ್ಟ ರಸ್ತೆ
ಸ್ವಚ್ಛತೆಯೆಂಬ ಉದ್ಯಮ
ವಿದೇಶಗಳಲ್ಲಿನ ಸ್ವಚ್ಛತೆಯ ಬಗ್ಗೆ ನಾವೆಲ್ಲಾ ಕಿವಿ ತೂತಾಗುವಷ್ಟು ಕೇಳಿರುತ್ತೇವೆ. ಈ ವಿದೇಶೀಯರೂ ನಮ್ಮಂತೆಯೇ ಹುಲುಮಾನವರಲ್ಲವೇ? ಅವರು ಅಪ್ಪಿತಪ್ಪಿಯೂ ದಾರಿಯಲ್ಲಿ ಕಸ ಹಾಕುವುದೇ ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿ ಸಿಗುವವರೆಗೂ ಕಸ ಕೈಯಲ್ಲಿ ಹಿಡಿದುಕೊಂಡೇ ಇರಲು ಹೇಗೆ ಸಾಧ್ಯ? ಎಂದೆಲ್ಲ ನನಗೆ ಅನೇಕ ಬಾರಿ ಅನಿಸುತ್ತಿತ್ತು. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿತು. ಅವರೂ ನಮ್ಮಂತೆಯೇ ಕಠಿಣ ಕಾನೂನಿಗೆ ಮಾತ್ರ ಹೆದರುವ ಜನ. ಚೀನಾದಲ್ಲೂ ನಾನು ಹಣ್ಣಿನ ಸಿಪ್ಪೆ, ಖಾಲಿ ನೀರಿನ ಬಾಟಲ್, ಚಿಪ್ಸ್ ನ ಲಕೋಟೆಗಳನ್ನು,ಉರಿದ ಸಿಗರೇಟ್ ತುಂಡುಗಳನ್ನು ದಾರಿಯಲ್ಲಿ ಎಸೆಯುವವರನ್ನು, ಮಕ್ಕಳಿಗೆ ತೀರಾ ಅವಸರವಾದಾಗ ಬೀದಿ ಬದಿಯಲ್ಲಿ ಉಚ್ಚೆ ಹೊಯ್ಯಿಸುವವರನ್ನು, ಬೀದಿಯಲ್ಲಿ ಉಗುಳುವವರನ್ನು ಕಂಡೆ. [ಇವರ ಸಂಖ್ಯೆ ನಮ್ಮಲ್ಲಿಗಿಂತ ಕಡಿಮೆ ] ಆದರೆ ಇದರ ಸ್ವಚ್ಛತೆಗೆ ಉತ್ತಮ ವ್ಯವಸ್ಥೆ ಇದೆ. ದೊಡ್ಡ ಸಂಖ್ಯೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಎಲ್ಲೆಲ್ಲಿಯೂ ಕಂಡರು. ಶುಭ್ರವಾದ ಸಮವಸ್ತ್ರ ತೊಟ್ಟ ಇವರ ಒಂದು ಕೈಯಲ್ಲಿ ತುದಿಯಲ್ಲಿ ಇಕ್ಕಳವಿರುವ ಕೋಲು ಇದೆ. ಇನ್ನೊದು ಕೈಯಲ್ಲಿ ಬಕೇಟು. [ ಚಿತ್ರ ನೋಡಿ] ಬಿಡುವಿಲ್ಲದೇ ತಮಗೆ ಗೊತ್ತುಪಡಿಸಿದ ಜಾಗದಲ್ಲಿ ಇವರು ಸುತ್ತಾಡುತ್ತ ಕಸ ಎತ್ತುತ್ತಲೇ ಇರುತ್ತಾರೆ. ಹಸಿ ಹಾಗೂ ಒಣ ಕಸವನ್ನು ತಕ್ಷಣ ವಿಂಗಡಿಸುತ್ತಾರೆ. ನಗರದ ತ್ಯಾಜ್ಯ ವಿಂಗಡನಾ ಘಟಕಗಳು ಕಸವನ್ನು 100% ಸಂಸ್ಕರಿಸುತ್ತವೆ.ಹಸಿ ಕಸದ ಗೊಬ್ಬರ ರಸ್ತೆಬದಿಯ ಹೂಗಿಡಗಳಿಗೆ ಉಪಯೋಗವಾಗುತ್ತದೆ. ಯಾಂಜ್ ಜಿ ನದಿಯನ್ನು ಜೋಪಾನವಾಗಿ ರಕ್ಷಿಸಿರುವುದರಿಂದ ನೀರಿಗೆ ಬರವಿಲ್ಲ. ಆದ್ದರಿಂದ ವಾರಕ್ಕೊಮ್ಮೆ ನಗರದ ಬೀದಿಗಳನ್ನು ತೊಳೆಯಲಾಗುತ್ತದೆ.[ಚಿತ್ರ ನೋಡಿ] . ನಗರದಲ್ಲಿ ಅಲ್ಲಲ್ಲಿ ಶೌಚಾಲಯಗಳು ಕಂಡವು. ಪ್ರೇಕ್ಷಣೀಯ ಸ್ಥಳಗಳಲ್ಲಿ 30-60 ಶೌಚಾಲಯಗಳಿವೆ. ವಿಶೇಷವೆಂದರೆ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನವು ನಮ್ಮ ಭಾರತೀಯ ಮಾದರಿಯ ಪಾಯಿಖಾನೆಗಳು! ನಮ್ಮ ನಗರಗಳಲ್ಲಿ ಬೀದಿ ತೊಳೆಯುವುದು ಸಾಧ್ಯವಾಗದಿರಬಹುದು.
ಆದರೆ ಈ ರೀತಿಯ ಸಶಸ್ತ್ರ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿ ನಮ್ಮ ಬೀದಿಗಳನ್ನು, ಪ್ರೇಕ್ಷಣೀಯಸ್ಥಳಗಳನ್ನು ಸ್ವಚ್ಛವಾಗಿ ಇರಿಸಬಹುದಲ್ಲ ಅನಿಸಿತು. ಇದಕ್ಕೆ ದೊಡ್ಡ ಖರ್ಚೂ ಇಲ್ಲ . ಉದ್ಯೋಗ ಸೃಷ್ಟಿಯೂ ಆಯಿತು.
ರಸ್ತೆ ತೊಳೆಯುವುದು ಸಶಸ್ತ್ರ ಪೌರಕರ್ಮಚಾರಿ
ರಸ್ತೆ ತೊಳೆಯುವುದು
ರಸ್ತೆ ತೊಳೆಯುವುದು
ಸಶಸ್ತ್ರ ಪೌರಕರ್ಮಚಾರಿ
ಸಶಸ್ತ್ರ ಪೌರಕರ್ಮಚಾರಿ
ನಾರೀಶಕ್ತಿ
ಚೀನಾದಲ್ಲಿ ನನಗೆ ನಾರೀಶಕ್ತಿಯ ವಿರಾಟ್ ರೂಪದ ದರ್ಶನವಾಯಿತು. ಹೆಚ್ಚಿನ ಎಲ್ಲ ಸೇವಾ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು. ವಾಹನ ಚಾಲಕರು, ರಸ್ತೆ ಸುಂಕದ ವಸೂಲಿಗರು, ಪ್ರವಾಸೀ ಗೈಡ್ ಗಳು, ಪೌರಕಾರ್ಮಿಕರು, ರೈಲು, ಬಸ್ಸುಗಳ ಸಿಬ್ಬಂದಿ, ಹೋಟೇಲಿನ ಎಲ್ಲ ವಿಭಾಗಗಳ ಸಿಬ್ಬಂದಿ .. ಎಲ್ಲವೂ ಮಹಿಳೆಯರೇ! ಈ ನಗುಮೊಗದ ,ಚುರುಕು ನಡಿಗೆಯ ವನಿತೆಯರು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ. ಒಮ್ಮೆ ಶಾಂಘೈ ನಿಂದ ನಾವು ಸುಜೋನಲ್ಲಿರುವ ಮನೆಗೆ ಮರಳುವಾಗ ರಾತ್ರಿ 1 ಗಂಟೆ ದಾಟಿತ್ತು. ಆ ರಾತ್ರಿಯಲ್ಲೂ ಆ ನಿರ್ಜನ ಹೆದ್ದಾರಿಯಲ್ಲಿ ಇಬ್ಬರು ಸುಂದರವಾದ ಯುವತಿಯರು ರಸ್ತೆ ಸುಂಕ ವಸೂಲಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಹೃದಯ ತುಂಬಿ ಬಂತು.ನಮ್ಮ ವಾಹನ ಚಾಲಕಿ 50ವಯಸ್ಸಿನ ತರುಣಿ! ಯೂ ಪಿಂಗ್ ಕೂಡಾ ನಮ್ಮನ್ನು 2 ಗಂಟೆಗೆ ಮನೆ ತಲುಪಿಸಿ ನಿರ್ಭಯವಾಗಿ ತನ್ನ ಮನೆಗೆ ಹೋದಳು. ಬಹುಶ: ನಮ್ಮಲ್ಲೂ ಎಲ್ಲ ಮಹಿಳೆಯರೂ ಧೈರ್ಯ ವಹಿಸಿ ರಾತ್ರಿಯಲ್ಲೂ ಓಡಾಡಲೂ ಪ್ರಾರಂಭಿಸಿದರೆ ಮಹಿಳೆಯೆಂಬ ಸಂಪನ್ಮೂಲದ ಸದ್ಬಳಕೆ ಆಗಬಹುದು.ಮೌಲ್ಯಯುತ,ನಿರ್ಭೀತ ಸಮಾಜದ ಸೃಷ್ಟಿಯಾಗಬಹುದು.
ದೇವ್ರಾ……. ಹಾಗಂದ್ರೇನು?
ದೇವರ ಅಸ್ತಿತ್ತ್ವದ ಬಗ್ಗೆ ಮನುಕುಲ ಶತಮಾನಗಳಿಂದ ಜಿಜ್ಞಾಸೆ ನಡೆಸಿದೆ, ನಡೆಸುತ್ತಲೇ ಇದೆ. ನಾವು ಭಾರತೀಯರಂತೂ ದೇವನನ್ನು ಕೋಟ್ಯಾಂತರ ರೂಪಗಳಲ್ಲಿ ಕಂಡವರು. ಒಂದರ್ಥದಲ್ಲಿ ನಮ್ಮ ಜೀವನದ ಕೇಂದ್ರಬಿಂದುವೇ ದೇವರು. ನಮ್ಮ ಪ್ರವಾಸದಲ್ಲಿ ಜನಜೀವನದಲ್ಲಿ ದೇವನೆಂಬ ಕಲ್ಪನೆಯ ಅನುಪಸ್ಥಿತಿ ನನಗೆ ಕಂಡಿತು.ಸರಕಾರದ ಕಮ್ಯುನಿಸ್ಟ್ ಚಿಂತನೆಗಳಿಂದ ಇಂದಿನ ತಲೆಮಾರು ದೇವರ ಬಗ್ಗೆ ವಿಶಿಷ್ಟ ತೀರ್ಮಾನಕ್ಕೆ ಬಂದಿದೆ. ಹಾಗೇ ಕುತೂಹಲದಿಂದ ನಮ್ಮ ಗೈಡ್ ವಾಂಗ್ ಳನ್ನು ಕೇಳಿದೆ, ನೀನು ಯಾವ ದೇವರನ್ನು ಆರಾಧಿಸುತ್ತೀಯೆ? . ತಟಕ್ಕನೆ ಉತ್ತರ ಬಂತು- ದೇವ್ರಾ……. ಆರಾಧಿಸುವುದಾ….. ಹಾಗಂದ್ರೇನು?. ನಾನು – “ಅದೇ ಬುದ್ಧ ಅಥವಾ ಬೇರೆ ಯಾವುದಾದರೂ ದೇವರನ್ನು ದಿನವೂ ಪ್ರಾರ್ಥಿಸುತ್ತೀಯಾ?” ಎಂದೆ. ಅವಳು ಅರೆಕ್ಷಣ ಯೋಚಿಸಿ, “ನೋಡಿ , ನನಗೆ ಯಾವ ದೇವ್ರೂ ಇಲ್ಲ. ಆದರೆ ಇಲ್ಲಿನ ಕೆಲವು ಮತಗಳ ತತ್ತ್ವಗಳನ್ನು ನಂಬುತ್ತೇನೆ. ನಾನು ಚಿಕ್ಕವಳಿರುವಾಗ ಕನ್ ಫ಼ಯೂಜಿಸ್ ಮತವನ್ನು ಪಾಲಿಸುತ್ತಿದ್ದೆ . ಅದು ಕುಟುಂಬವನ್ನು ಪ್ರೀತಿಸು, ಆದರ್ಶಗಳಿಗೆ ,ಜೀವನ ಮೌಲ್ಯಗಳಿಗೆ ಬೆಲೆ ಕೊಡು ಅನ್ನುತ್ತದೆ. ಈಗ ಯುವತಿಯಾಗಿದ್ದೇನೆ ಆದ್ದರಿಂದ ಟಾವಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ನಿನಗೆ ಅನುಕೂಲವಾದ ಆದರ್ಶಗಳನ್ನು ಮಾತ್ರ ಪಾಲಿಸು , ಜೀವನದಲ್ಲಿ ಅದೃಷ್ಟ ಬರುತ್ತದೆ ಕಾಯುತ್ತಿರು, ಅನ್ನುತ್ತದೆ. ಇನ್ನು ವಯಸ್ಸಾದ ಮೇಲೆ ಬುದ್ಧಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ಕಷ್ಟಗಳನ್ನೆಲ್ಲಾ ಸಹಿಸಿಕೋ, ಪರರಿಗೆ ಉಪಕಾರ ಮಾಡು, ಶಾಂತಿಯಿಂದಿರು ಅನ್ನುತ್ತದೆ. ನೀವೇ ಹೇಳಿ ಬುದ್ಧಿಸಂ ನ್ನು ಯೌವನದಲ್ಲಿ ಅನುಸರಿಸಲು ಸಾಧ್ಯವೇ? ಅನುಸರಿಸಿ ದುಡ್ಡು ಸಂಪಾದನೆ ಮಾಡಲು ಸಾಧ್ಯವೇ? ಅಥವಾ ಟಾವಿಸಂ ನ್ನು ಮುದುಕರಾದ ಮೇಲೆ ಹೇಗೆ ಅನುಸರಿಸಲಿ? ಅದಕ್ಕೇನೇ ಯಾವ ದಿನ ಹೇಗೆ ಬರುತ್ತದೋ ಹಾಗೆ ನನ್ನ ನಂಬಿಕೆಗಳನ್ನು ಬದಲಾಯಿಸುತ್ತೇನೆ” ಎಂದಳು. ಬಾಯಿತೆರೆದುಕೊಂಡು ಕೇಳುತ್ತಲೇ ಇದ್ದ ನಾನು ’ವಾಂಗ್ ಜಗದ್ಗುರು’ವಿಗೆ ಮನಸಾರೆ ವಂದಿಸಿದೆ!!
ಯಶಸ್ಸಿನ ಆರಾಧನೆ
ಒಂದು ಸಾಯಂಕಾಲ ನಮ್ಮ ಮಿತ್ರರೊಡನೆ ಸಮೀಪದ ಮಾರ್ಕೆಟ್ ಗೆ ಹೋದೆವು. ಅಲ್ಲಿ ರಸ್ತೆ ಬದಿಯಲ್ಲಿ ಒಂದು ಬೃಹತ್ ಗಾತ್ರದ ಟಿ.ವಿ. ಅದರಲ್ಲಿ ಜನರ ಭಾವಚಿತ್ರದೊಡನೆ ಚೀನೀ ಭಾಷೆಯಲ್ಲಿ ಅನೇಕ ವಿವರಗಳು ಪ್ರದರ್ಶಿತವಾಗುತ್ತಿದ್ದವು. ಬಹುಶ: ಎಲ್ಲೋ ಅಪರಾಧಿಗಳ ಪತ್ತೆಗೆ ಈ ಕ್ರಮ ಇರಬಹುದು ಎಂದುಕೊಂಡು ರವಿ ಫಡ್ಕೆಯವರನ್ನು ಕೇಳಿದೆ. ಅವರು ನಕ್ಕು –“ಅವರು ಅಪರಾಧಿಗಳಲ್ಲ. ಸಮಾಜದ ಯಶಸ್ವೀ ವ್ಯಕ್ತಿಗಳು. ವೈದ್ಯರು, ಶಿಕ್ಷಕರು, ಇಂಜನಿಯರ್ ಗಳು, ರೈತರು, ಸೈನಿಕರು ಹೀಗೆ ವಿಶೇಷ ಸಾಧನೆ ಮಾಡಿದ ಯಾರೇ ಇದ್ದರೂ ಅವರ ವಿವರಗಳನ್ನು ಫೋಟೋದ ಜೊತೆ ಹೀಗೆ ಪ್ರದರ್ಶಿಸುತ್ತಾರೆ. ಮಕ್ಕಳಿಗೆ ಅವರು ಸ್ಫೂರ್ತಿಯಾಗಲಿ ಎಂದು ಸರಕಾರದ ಉದ್ದೇಶ” ಎಂದರು. ಸಾಮಾನ್ಯವಾಗಿ ಇಂಥ ಯಶಸ್ವೀ ವ್ಯಕ್ತಿಗಳೇ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು. ಚೀನಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವುದಿಲ್ಲ. ಆಯಾ ರಾಜ್ಯದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರೇ ತಮ್ಮ ನಾಯಕರನ್ನು ಆರಿಸುತ್ತಾರೆ. ಬುದ್ಧಿವಂತರೇ ಮತದಾನ ಮಾಡುವುದರಿಂದ ಒಳ್ಳೆಯ ವ್ಯಕ್ತಿಗಳೇ ಆಯ್ಕೆಯಾಗಿ ಬರುತ್ತಾರೆ. ಹಾಗಾದರೆ ಇಲ್ಲಿ ಭ್ರಷ್ಟಾಚಾರವೇ ಇಲ್ಲ ಅಂದುಕೊಳ್ಳಬೇಡಿ. ಚೀನಾ ಭ್ರಷ್ಟಾಚಾರದಲ್ಲೂ ನಂಬರ್ ೧. ವ್ಯಕ್ತಿ ತಾನು ಮಾಡಿಸುವ ರಸ್ತೆ, ನೀರು, ಪಾರ್ಕ್ ಇತ್ಯಾದಿ ಕೆಲಸಗಳನ್ನು ಉತ್ತಮವಾಗೇ ಮಾಡುತ್ತಾನೆ. ಇಲ್ಲದಿದ್ದರೆ ಅವನನ್ನು ಆ ಸ್ಥಾನದಿಂದ ಕಿತ್ತುಹಾಕುತ್ತಾರೆ ಎಂಬ ಭಯವಿರುತ್ತದೆ.ಆದರೆ ತನಗೆ ಬೇಕಾದವರಿಗೆ ಗುತ್ತಿಗೆ ಕೊಡುತ್ತಾನೆ. ಒಂದಷ್ಟು ಹಣ ಹೊಡೆಯುತ್ತಾನೆ ಅಷ್ಟೇ!. ಯಾಕೋ ನನಗೆ ನಮ್ಮ ಮಹಾನಗರದ ರಸ್ತೆಗಳಲ್ಲಿ ಕಾಣುವ ರಾಜಕಾರಿಣಿಗಳ, ಅವರ ಹಿಂಬಾಲಕರ ಪೋಸ್ಟರ್ ಗಳು ನೆನಪಾದವು. ಇವರೇನಾ ನಮ್ಮ ಮಕ್ಕಳಿಗೆ ನಾವು ತೋರಿಸುತ್ತಿರುವ ಆದರ್ಶವ್ಯಕ್ತಿಗಳು ? ಎನಿಸಿತು.
ನಮ್ಮ ಭಾರತೀಯತೆಯ ಒಂದು ಪ್ರಮುಖ [ಅವ]ಲಕ್ಷಣವೆಂದರೆ ಎಲ್ಲಿ ಏನೇ ನೋಡಿದರೂ, ಇದೇನ್ ಮಹಾ…? ನಮ್ಮಲ್ಲಿಲ್ಲದ್ದು ಇಲ್ಲೇನಿದೆ? ನಮ್ಮ ಪರಂಪರೆಗೆ ಸರಿಸಾಟಿ ಯಾರು? ಎಂಬ ಅನಿಸಿಕೆ. ನಿಜ.. ನಮ್ಮ ಬೇಲೂರು, ಹಳೇಬೀಡು, ತಮಿಳುನಾಡಿನ ದೇವಾಲಯಗಳ ಶಿಲ್ಪವೈಭವಕ್ಕೆ, ಮಹಾಬಲಿಪುರಂ, ಕೋನಾರ್ಕ, ಅಜಂತಾ- ಎಲ್ಲೋರಾ, ಮೌಂಟ್ ಅಬುಗಳ ಬೆರಗಿಗೆ ಸರಿಸಾಟಿ ಇನ್ನೊಂದಿಲ್ಲ.ಆದರೆ ನಮ್ಮ ಸಂಪತ್ತನ್ನು ಜೋಪಾನವಾಗಿ ಕಾಪಿಡುವಲ್ಲಿ ,ಸೂಕ್ತವಾಗಿ ಪ್ರಸ್ತುತಪಡಿಸುವಲ್ಲಿ ನಾವು ಸೋತಿದ್ದೇವೆ ಎಂಬ ಕಹಿಭಾವನೆ ಮನಸ್ಸಿನಲ್ಲಿ ಸುಳಿಯಿತು. ಇರಲಿ.. ಪ್ರಾಚೀನತೆ , ತಾಂತ್ರಿಕತೆ ಹಾಗೂ ಆಧುನಿಕತೆಯ ಅಪೂರ್ವ ಸಂಗಮವಾದ ಈ ದೇಶ ನಮ್ಮ ನಗರ ನಿರ್ಮಾತೃಗಳಿಗೂ ಮಾದರಿಯಾಗಬಲ್ಲುದು.
Birds Nest Olympic Stadium

Monday, 16 November 2015

ಉಡುಪೆಂಬ ಆತ್ಮವಿಶ್ವಾಸ


ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ, ಕೀರ್ತಿಯನ್ನೂ ಗಳಿಸಬಹುದು. ಯಾರಿಗುಂಟು... ಯಾರಿಗಿಲ್ಲ ಇಂಥ ಸೌಭಾಗ್ಯ!!

ನನಗೆ ಹೀಗೆನನ್ನಿಸಿದ್ದು ಹುಚ್ಚನೆಂದು ಘೋಷಿಸಿಕೊಂಡ ಚಾಣಾಕ್ಷ ವ್ಯಕ್ತಿಯೊಬ್ಬ ಮಹಿಳೆಯ ಅತ್ಯಂತ ವೈಯಕ್ತಿಕ ವಿಷಯವಾದ ಅವಳ ಮೈಮೇಲಿನ ಬಟ್ಟೆಯ ಬಗ್ಗೆ ಪುಂಖಾನುಪುಂಖವಾಗಿ ಉಪದೇಶ ಕೊಡುತ್ತಿದ್ದುದು, ಅದರಲ್ಲೂ ದೇಹಸಿರಿ , ಸೌಂದರ್ಯ, ನಟನಾ ಕೌಶಲವೇ ಬಂಡವಾಳವಾಗಿರುವ ಮಾಧ್ಯಮದಲ್ಲಿ! ಹಾಗೂ ಅದನ್ನು ಕೇಳಿ , ನೋಡಿ ಮೆಚ್ಚಿ-ತಲೆದೂಗುತ್ತಿದ್ದ ನಾಗರಿಕರನ್ನು ಕಂಡು. ಮಹಿಳೆಗೆ ಎಷ್ಟು ವಿದ್ಯಾಭ್ಯಾಸ ಬೇಕು? ಎಂಥ ಗಂಡ ? ಮದುವೆ ಯಾವಾಗ? ಎಷ್ಟು ಮಕ್ಕಳು? ಅವಳು ಯಾವ ಕೆಲಸಗಳನ್ನು ಮಾಡಬೇಕು? ಎಷ್ಟು ಹೊತ್ತಿಗೆ ಮನೆ ಬಿಡಬೇಕು- ಎಷ್ಟು ಗಂಟೆಗೆ ಮನೆ ತಲುಪಬೇಕು? ಯಾವ ಬಟ್ಟೆ ತೊಡಬೇಕು? ಹೀಗೆ ಎಲ್ಲವನ್ನೂ ಸಾರ್ವಜನಿಕರೇ ನಿರ್ಧರಿಸಿ ಘೋಷಿಸುತ್ತಿರಬೇಕು! ಅವಳು ಮಾತ್ರ ಎಲ್ಲವನ್ನೂ ಕೇಳುತ್ತಾ ತನ್ನ ಪಾಡಿಗೆ ಕೆಲಸ ಮಾಡುತ್ತಾ ಇರಬೇಕು! ಹೇಗಿದೆ ನ್ಯಾಯ??

ಹಾಗೆ ನೋಡಿದರೆ ನನ್ನನ್ನೂ ಈ ಉಡುಪಿನ ಮಾಯೆ ಬಹಳ ವರ್ಷ ಕಾಡಿತ್ತು. ಕರಾವಳಿಯ ಕುಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನನಗೆ ಮಿನಿ ಮೈಕೆಲ್ ಎಂಬ ಪ್ರಾಣಸ್ನೇಹಿತೆಯೊಬ್ಬಳಿದ್ದಳು.ಉದ್ದಲಂಗ ಹಾಕಿಕೊಂಡು, ತಲೆಗೆ ಎಣ್ಣೆ ಹಚ್ಚಿ ಕಟ್ಟಿದ ಬಿಗಿಯಾದ ಎರಡು ಜಡೆಯ ಮೇಲೆ ಅಬ್ಬಲಿಗೆ ಹೂವು ಮುಡಿದುಕೊಂಡು ಶಾಲೆಗೆ ಹೋಗುತ್ತಿದ್ದ ನಮಗೆ, ಸ್ಕರ್ಟ್/ ಪಾಂಟ್ , ಟಿಶರ್ಟ್ ಹಾಕಿಕೊಂಡು ಬಾಬ್ ಕಟ್ ನಲ್ಲಿ ಕಂಗೊಳಿಸುವ ಅವಳೆಂದರೆ ಅನ್ಯಲೋಕದ ಜೀವಿ. ಸೈಕಲ್ ನಲ್ಲಿ ಅವಳ ಓಡಾಟ.. ಭಾನುವಾರಗಳಂದು ಚರ್ಚಿಗೆ ಅವಳ ಪಯಣ...ಅಲ್ಲಿ ಆಕೆ ಹಾಡುವ ಕ್ರಿಸ್ತನ ಇಂಗ್ಲೀಷ್ ಗೀತೆಗಳು.... ಪ್ರಸಾದವೆಂದು ತಿನ್ನುವ ಕೇಕ್ ...ಓಹ್..... ಎಂಥ ಮಧುರ ಜೀವನ. ಬೆಳಗ್ಗೆ ಎದ್ದು ಹೂ ಕೊಯ್ದು, ಮಾಲೆ ಮಾಡಿ,ದೇವರಮನೆ ಒರೆಸಿ, ರಂಗೋಲಿ ಹಾಕಿ...ಅಯ್ಯೋ.... ಸ್ವಲ್ಪ ದೊಡ್ಡವರಾದ ಮೇಲೆ ಮೂರು ದಿನ ಹೊರಗೆ ಕೂರುವ ಶಿಕ್ಷ...ಇನ್ನು ದೇವಸ್ಥಾನದಲ್ಲಿ ಅದೇ ಪುರಂದರ ಭಜನೆ...... ತಣ್ಣನೆಯ ತೀರ್ಥ ...ಥೂ...ನಮ್ಮದೂ ಒಂದು ಜೀವನವಾ....ಅಂತೆಲ್ಲ ನಮಗೆ ಅನಿಸುತ್ತಿತ್ತು. ನನಗಂತೂ ಒಮ್ಮೊಮ್ಮೆ ಅವಳ ಜಾತಿಗೆ ಸೇರಿದರೆ ಹೇಗೆ?ಎಂಬ ಭಂಡ ಆಲೋಚನೆಯೂ ಬರುತ್ತಿತ್ತು .ಆದರೆ ಹಿರಿಯರ ಮಾತು ಮೀರಿದರೆ ರಕ್ತ ಕಾರುವಂತೆ ಮಾಡುವ ಸಾಮರ್ಥವಿರುವ ನಮ್ಮ ಮನೆಯ ಪಂಜುರ್ಲಿ-ಕಲ್ಲುರ್ಟಿಯರೆಂಬ ದೈವಗಳು ಹಾಗೂ ಮನೆಯ ಸುತ್ತ ಆಗಾಗ ಕಾಣಿಸುತ್ತಿದ್ದ ನಾಗಪ್ಪನಿಂದ ನನ್ನ ಯೋಜನೆ ಕಾರ್ಯರೂಪಕ್ಕೆ ಇಳಿಯಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಪಾಂಟ್ ಧರಿಸುವ ನನ್ನ ಕನಸು ನೆರವೇರಲೇ ಇಲ್ಲ. ಮುಂದೆ ಮದುವೆಯಾದ ಮೇಲೆ ಆರಂಭಿಕ ಸಂಸಾರತಾಪತ್ರಯಗಳೆಲ್ಲ ಕಳೆದು ಕೆಲವರ್ಷಗಳ ನಂತರ ಕೊನೆಗೂ ಒಂದುದಿನ ಪಾಂಟ್- ಟಾಪ್ ಧರಿಸಿಯೇ ಬಿಟ್ಟೆ. ಆದರೆ ಸತ್ಯವಾಗಿ ಹೇಳುತ್ತೇನೆ.ದೀರ್ಘಕಾಲದ ನಿರೀಕ್ಷೆಯಿಂದಲೋ ಅಥವಾ ವಯಸ್ಸಿನಿಂದಲೋ ಗೊತ್ತಿಲ್ಲ ನನಗೆ ಬಹಳ ನಿರಾಸೆಯಾಯಿತು... “ ಇದು ಇಷ್ಟೇನಾ!” ಅನ್ನಿಸಿತು.

ಈಗ ಕನಿಷ್ಟ ಉಡುಗೆ ತೊಡುವುದು ಆಧುನಿಕತೆಯ ಸಂಕೇತ ಎನಿಸಿದೆ. ಪಾಲಕರಿಗೂ ತಮ್ಮ ಮಕ್ಕಳು ಆಧುನಿಕರಾಗಿ ಕಾಣಲಿ ಎಂಬಾಸೆಯೂ ಇರುತ್ತದೆ.ತಮಗಿಷ್ಟ ಬಂದ ಉಡುಗೆ ತೊಟ್ಟು ನಿರ್ಭಯವಾಗಿ, ಲವಲವಿಕೆಯಿಂದ ತುಳುಕುವ ನನ್ನ ವಿದ್ಯಾರ್ಥಿನಿಯರನ್ನು ಕಂಡಾಗ ನನಗೆ ಆನಂದವಾಗುತ್ತದೆ. ನನ್ನ ವಿದ್ಯಾರ್ಥಿನಿಯೊಬ್ಬಳು ನನಗೆ ಹೇಳಿದ ಪ್ರಕಾರ ಒಳ ಉಡುಪುಗಳು ಕಾಣಿಸುವಂತಹ ಬಟ್ಟೆ ತೊಟ್ಟರೆ ಆತ್ಮವಿಶ್ವಾಸ ವರ್ಧಿಸುತ್ತದೆ. ಅಲ್ಲದೇ ಎಲ್ಲರ ಗಮನವನ್ನೂ ಸೆಳೆಯುವುದರಿಂದ ಮನಸ್ಸಿಗೆ ಖುಷಿಯೂ ಆಗುತ್ತದೆ. ಇರಲಿ... ಇದೆಲ್ಲ ಅವರವರ ವೈಯಕ್ತಿಕ ಅಭಿಪ್ರಾಯ.

ಏನೇ ಇರಲಿ. ಉಡುಗೆ - ತೊಡುಗೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅಲ್ಲದೇ ಇತಿಹಾಸವನ್ನು ಗಮನಿಸಿದರೂ ಕಾಲನ ದಾಳಿಯಲ್ಲಿ ಹೆಚ್ಚು ಬದಲಾವಣೆಗೆ ಒಳಪಟ್ಟದ್ದೆಂದರೆ ಬಟ್ಟೆಗಳೇ. ಹೊಸದರ ಬಗ್ಗೆ ಆಸೆಪಡುವುದು ಕ್ರಿಯಾಶೀಲ ವ್ಯಕ್ತಿಯ ಸಹಜಗುಣ. ಸಂದರ್ಭಕ್ಕೆ , ಹೊಟ್ಟೆಪಾಡಿಗೆ, ಮನಸ್ಸಂತೋಷಕ್ಕೆ ಅನುಗುಣವಾಗಿ ಅನುಕೂಲಕರವಾದ ಬಟ್ಟೆಯನ್ನು ತೊಡುವ ಹಕ್ಕನ್ನು ಮಹಿಳೆಯಿಂದ ಯಾರೂ ಕಿತ್ತುಕೊಳ್ಳಬಾರದು. ಆಕೆ ಅದಕ್ಕೆ ಅವಕಾಶ ಮಾಡಿಕೊಡಲೂಬಾರದು.ನಮ್ಮ ಸಂಸ್ಕೃತಿಯು ಹಾಡಿ ಹೊಗಳುವ ಸೀರೆಗಿಂತ ಪಾಶ್ಚಾತ್ಯ ಉಡುಪುಗಳು ಯಾವುದೇ ರೀತಿಯಲ್ಲಿ ಅಸಭ್ಯವಲ್ಲವೇ ಅಲ್ಲ. ಇನ್ನು ಮಹಿಳೆಯರ ಬಟ್ಟೆಯಿಂದ ಸಂಸ್ಕೃತಿ ನಾಶ, ಅತ್ಯಾಚಾರವಾಗುವುದೇ ನಿಜವಾದರೆ ಅಂಥಾ ಸಮಾಜವನ್ನು ನಿರ್ಮಿಸಿದ ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

Sunday, 4 October 2015

ಬೀಜಿಂಗ್ ಎಂಬ‌ ಬೆರಗು ....

“ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....”  ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವೇಶಿಸುವಾಗ ಸೋಮವಾರದ ಬೆಳಗಿನ ಏಳು ಘಂಟೆ. ಹಾಗೇ ಕಣ್ಣಾಡಿಸಿದೆ. ಇಲ್ಲಿಂದ ೧೨೦೦ ಕಿ.ಮೀ ದೂರದ ಬೀಜಿಂಗ್ ಗೆ ಹೋಗಲು ಪ್ರಯಾಣಿಕರ ದಂಡೇ ನೆರೆದಿತ್ತು. ಹೆಚ್ಚಿನವರು ವಾರಾಂತ್ಯದಲ್ಲಿ ಇಲ್ಲಿನ ತಮ್ಮ ಮನೆಗಳಿಗೆ ಬಂದವರು  ಕಚೇರಿಗಳಿಗೆ ಮಧ್ಯಾಹ್ನ ಹೋಗುವವರು. ೭.೪೦ರ ರೈಲು ಬರಲು ಮೂರು ನಿಮಿಷಗಳಿಗೆ ಮುಂಚೆ ಪ್ಲಾಟ್ ಫಾರ್ಮ್ ಗೇಟುಗಳನ್ನು ತೆರೆದರು.ಜನ ಶಿಸ್ತಾಗಿ ತಮ್ಮ ಬೋಗಿ ಸಂಖ್ಯೆಯ ಎದುರು ನೇರ ಸಾಲುಗಳಲ್ಲಿ ನಿಲ್ಲುತ್ತಿದ್ದಂತೆಯೇ ಅಗೋ...... ಆ ಪವನಪುತ್ರ ಮಿಂಚಿನ ವೇಗದಲ್ಲಿ ಬಂದು ನನ್ನೆದುರು ನಿಂತೇಬಿಟ್ಟ. ಪ್ರತಿ ನಿಲ್ದಾಣದಲ್ಲೂ ಮೂರುನಿಮಿಷ ಮಾತ್ರ ನಿಲ್ಲುವ ಈ ವೇಗಿಯನ್ನು ಲಗುಬಗನೆ ಹತ್ತಿದೆವು. ರೈಲು ಹೊರಟಿತು. ಹೊರಗಿನ ಪ್ರಕೃತಿ ನಿಚ್ಚಳವಾಗೇ ಕಾಣಲಾರಂಭಿಸಿದಾಗ ನನ್ನ ಮೂರ್ಖತನಕ್ಕೆ ಒಳಗೊಳಗೇ ನಗು ಬಂತು. ಚೀನಾದ ಇತರ ಸೇವಾಕ್ಷೇತ್ರಗಳಲ್ಲಿರುವಂತೆಯೇ ಇಲ್ಲಿಯೂ ಮಹಿಳೆಯರದ್ದೇ ರಾಜ್ಯಭಾರ. ಎಲ್ಲಿ ನೋಡಿದರೂ ನೀಲಿ ಸಮವಸ್ತ್ರದ ಚುರುಕಾಗಿ ಓಡಾಡುವ ತರುಣಿಯರು. ಜನ ತಮ್ಮ ಕಂಪ್ಯೂಟರ್ ಗಳನ್ನು ತೆರೆದು ಕಚೇರಿ ಕೆಲಸ ಆರಂಭಿಸಿಯೇ ಬಿಟ್ಟರು. ಅನೇಕಾನೇಕ ಹಳ್ಳಿ, ಪಟ್ಟಣ, ನಗರಗಳನ್ನು ಕ್ಷಣಮಾತ್ರದಲ್ಲಿ ಹಿಂದಿಕ್ಕುತ್ತಾ , ಬೀಜಿಂಗ್ ಗೆ ಇನ್ನೂ ೧೦೦ ಕಿ. ಮೀ ಇರುವಂತೆಯೇ ವಿಶಾಲವಾದ ರಸ್ತೆಗಳು, ಗಗನಚುಂಬಿ ಕಟ್ಟಡಗಳು ರಾಜಧಾನಿ ಸಮೀಪಿಸುತ್ತಿರುವುದನ್ನು ಸಾರಿ ಹೇಳಲಾರಂಭಿಸಿದವು.  ರೈಲು ಸರಿಯಾಗಿ ೧೨.೪೦ಕ್ಕೆ ಬೀಜಿಂಗ್ ನಿಲ್ದಾಣವನ್ನು ತಲುಪಿತು.. ಅತ್ಯಂತ ಉಲ್ಲಾಸದಿಂದ ರೈಲಿನಿಂದ ಇಳಿಯುತ್ತಿದ್ದಂತೆಯೇ, ಬೆಂಗಳೂರಿನಿಂದ  ದೆಹಲಿಗೆ ರೈಲಿನಲ್ಲಿ ಒಮ್ಮೆ ನಾನು ನಲವತ್ತು ಘಂಟೆ ಪ್ರಯಾಣಿಸಿ , ಬಳಲಿ ಬೆಂಡಾಗಿ ಇಳಿದದ್ದು ನೆನಪಾಗಿ ಯಾಕೋ ನನಗೆ ಕೊಂಚ ದು:ಖವಾಯಿತು.
ಬೀಜಿಂಗ್ ಎಂದರೆ ಉತ್ತರದ ರಾಜಧಾನಿ ಎಂದರ್ಥ. ಮಿಂಗ್ ಅರಸರಿಂದ ನಿರ್ಮಾಣವಾದ ಇಲ್ಲಿನ ಇಂದಿನ ಜನಸಂಖ್ಯೆ ಎರಡು ಕೋಟಿಗೂ ಅಧಿಕ. ೩ ವಿಮಾನನಿಲ್ದಾಣಗಳೂ, ೬ ವರ್ತುಲ ರಸ್ತೆಗಳೂ ಇರುವ ಬೀಜಿಂಗ್ ಪ್ರಪಂಚದ ಅತಿ ದಟ್ಟನೆಯ ನಗರಗಳಲ್ಲೊಂದು. ಶತಮಾನಗಳ ಚರಿತ್ರೆಯಿರುವ ಇಲ್ಲಿ ಏಳು ವಿಶ್ವಪರಂಪರೆಯ ತಾಣಗಳನ್ನು ಯುನೆಸ್ಕೋ ಗುರುತಿಸಿದೆ. ಅನೇಕ ವರ್ಷಗಳ ಕಾಲ ಜಪಾನೀಯರ ಆಳ್ವಿಕೆಯಲ್ಲಿ ನಲುಗಿದ್ದ ಬೀಜಿಂಗ್ ೧೯೪೯ ರಲ್ಲಿ ಮಾವೋ ರವರು ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದ ನಂತರ ರಾಷ್ಟ್ರದ ರಾಜಧಾನಿಯೆಂದು ಘೋಷಿತವಾಯಿತು.ಅತ್ಯಂತ ಸುಸಜ್ಜಿತವಾಗಿ ನಗರವನ್ನು ಕಟ್ಟಲಾಯಿತು. ಎಲ್ಲಿ ನೋಡಿದರೂ ಕಾಣುವ ವಿಶಾಲವಾದ , ನುಣುಪಾದ  ರಸ್ತೆಗಳು, ರಸ್ತೆಬದಿಯ ಸುಂದರವಾದ ಹೂಗಳು, ಗಗನಚುಂಬೀ ಕಟ್ಟಡಗಳು ಅಭಿವೃದ್ಧಿಯನ್ನು ಸಾರಿ ಹೇಳುತ್ತವೆ. ಆದರೆ ನಗರೀಕರಣದ ಭರದಲ್ಲಿ  ಪರಿಸರ ಸಂರಕ್ಷಣೆಯನ್ನು ಕಡೆಗಣಿಸಿದ್ದರ ಫಲವಾಗಿ ವಾಯುಮಾಲಿನ್ಯ  ಬಳುವಳಿಯಾಗಿ ಬಂದಿದೆ. ಗಾಳಿಯಲ್ಲಿರುವ ಧೂಳಿನ ಕಣಗಳು ಬರಿಗಣ್ಣಿಗೆ ಕಾಣುತ್ತವೆ. ಆಗಾಗ್ಗೆ ಇಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಿ ವಾತಾವರಣವನ್ನು ಶುದ್ಧಗೊಳಿಸಲಾಗುತ್ತದೆಯಂತೆ.
ಚೀನಾದಲ್ಲಿ ಮಾಂಡರಿನ್ ಬಿಟ್ಟು ಬೇರೆ ಭಾಷೆ ನಡೆಯುವುದೇ ಇಲ್ಲ. ಇಲ್ಲವೆಂದರೆ ಇಲ್ಲವೇ ಇಲ್ಲ!!. “ಇಂಗ್ಲೀಷ್ ಬಲ್ಲ ನನಗೆ ಯಾವ ದೇಶವಾದರೇನು” ಎಂಬ ನನ್ನ ಒಣಜಂಭ ಚೀನಾದಲ್ಲಿ ನುಚ್ಚುನೂರಾಯಿತು. ಇಲ್ಲಿ ಇಂಗ್ಲೀಷ್ ಬಲ್ಲ ಮಾರ್ಗದರ್ಶಿಯನ್ನು ಮೊದಲೇ ಗೊತ್ತುಪಡಿಸಿದ್ದೆವು. ಇನ್ನು ಜನರಜೊತೆ  ನಾನು ಮಾತಾಡಬೇಕಾಗಿ ಬಂದಾಗ ನಾನು ಕನ್ನಡದಲ್ಲೇ ಮಾತನಾಡಲಾರಂಭಿಸಿದೆ. ಹೇಗೂ ನನ್ನ ಭಾಷೆ ನನ್ನ ಸಮಾಧಾನಕ್ಕೆ. ಅವರಿಗೆ ನನ್ನ ಕೈಸನ್ನೆ ಮಾತ್ರವೇ ತಿಳಿಯುವುದು. ಹಾಗಿದ್ದಾಗ ಭಾಷೆಯ ಹಂಗೇಕೆ ನನಗೆ? ನಮ್ಮ ಗೈಡ್ ವಾಂಗ್ ಎಂಬ ೨೫ರ ತರುಣಿ. ಆರುತಿಂಗಳು ದಕ್ಷಿಣಚೀನಾದ ತನ್ನೂರಲ್ಲಿ ಟೈಪಿಸ್ಟ್ ಆಗಿ ಕೆಲಸಮಾಡುವ ಇವಳು ಮಾರ್ಚ್ ನಿಂದ ಆಗಸ್ಟ್ ವರೆಗಿನ ಪ್ರವಾಸೀ ಋತುವಿನಲ್ಲಿ ಇಲ್ಲಿ ಗೈಡ್ ಆಗಿ ಒಳ್ಳೆಯ ಸಂಪಾದನೆ ಮಾಡುತ್ತಾಳೆ.

ವಾಂಗ್ ಮೊದಲು ನಮ್ಮನ್ನು ಕಾರಿನಲ್ಲಿ ಸ್ವರ್ಗದೇಗುಲಕ್ಕೆ [ಟೆಂಪಲ್ ಆಫ಼ ಹೆವನ್] ಕರಕೊಂಡು ಬಂದಳು. ೧೫ನೇ ಶತಮಾನದಲ್ಲಿ ಕಟ್ಟಿರುವ ಈ ದೇಗುಲ ೧೮ನೇ ಶತಮಾನದಲ್ಲಿ ಪರದೇಶೀಯರ ಆಕ್ರಮಣಕ್ಕೆ ತುತ್ತಾಗಿ ಹಾಳಾಗಿತ್ತು. ಮುಂದೆ ೧೯೧೮ರಲ್ಲಿ ಪುನರ್ನಿರ್ಮಾಣಗೊಂಡು ಪ್ರವಾಸೀ ತಾಣವಾಯಿತು. ಸುಮಾರು ೩ ಚ. ಕಿ ಮೀ ವಿಸ್ತೀರ್ಣವಿರುವ ಇದು ಮೂರು ಹಂತಗಳಲ್ಲಿದೆ. ಮೊದಲ ಹಂತದ ಪ್ರಾರ್ಥನಾಮಂದಿರ ವಿಶಾಲವಾಗಿದ್ದು ಮಧ್ಯದಲ್ಲೊಂದು ವೇದಿಕೆಯ ಸುತ್ತ  ೯ ವೃತ್ತಾಕಾರದ  ಓಣಿಗಳಿವೆ. ಪ್ರತಿಯೊಂದು ವೃತ್ತದ ನಡುವೆಯೂ ಕೆಲ ಮೆಟ್ಟಲುಗಳಿವೆ. ಕೊನೆಯ ವೃತ್ತದ   ಮಧ್ಯದಲ್ಲಿ ಪ್ರಾರ್ಥನೆ ಸಲ್ಲಿಸುವ ವೇದಿಕೆಯಿದೆ. ಒಳ್ಳೆಯ ಬೆಳೆಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮುಂದಿನ ಹಂತ ಸ್ವರ್ಗದ ಗೋಳ. ಈ ಕಟ್ಟಡವೇ ಗೋಳಾಕೃತಿಯಲ್ಲಿದ್ದೆ .ಇದರ ಸುತ್ತಲ ವೃತ್ತದಲ್ಲಿ ’ಪ್ರತಿಧ್ವನಿಯ ಗೋಡ” ಯಿದೆ. ಹಿಂದೆ ಇಲ್ಲಿನ ಪ್ರತಿಧ್ವನಿ ನೂರು ಕಿ. ಮೀ ವರೆಗೂ ಕೇಳುತ್ತಿತ್ತು. ಆದರೆ ಈಗ ಗೋಡೆ ತನ್ನ ವೈಭವವನ್ನು ಕಳಕೊಂಡಿದೆ. ಮೂರನೆಯ ಹಂತವೇ ಸ್ವರ್ಗದ ಹೃದಯ. ಚೀನೀಯರ ಪ್ರಕಾರ ರಾಜನೆಂದರೆ ಸ್ವರ್ಗದೇವತೆಯ ಮಗ. ಅವನು ವರ್ಷಕ್ಕೆರಡು ಇಲ್ಲಿ ಒಳ್ಳೆಯ ಮಳೆ- ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದನು. ಇಲ್ಲಿರುವ ಬೃಹತ್ ಕಂಬಗಳ ಪ್ರಾರ್ಥನಾ ಮಂದಿರ ಭವ್ಯವಾಗಿದೆ. ಒಳವೃತ್ತದಲ್ಲಿರುವ ೪ ಕಂಬಗಳು ೪ ಚೀನೀ ಋತುಗಳನ್ನು, ಮಧ್ಯದ ೧೨ ಕಂಬಗಳು ೧೨ ತಿಂಗಳುಗಳನ್ನೂ, ಹೊರಗಣ ೧೨ ಕಂಬಗಳು ದಿನದ ೧೨ ಗಂಟೆಗಳನ್ನೂ ಪ್ರತಿನಿಧಿಸುತ್ತವೆ. ಇದರ ನಡುವೆ ಆಯತಾಕಾರದ ನೀಲಿಬಣ್ಣದ ಬೃಹತ್ ಫಲಕವೇ ಸ್ವರ್ಗ ದೇವತೆ! ಸ್ವರ್ಗದ ಬಣ್ಣವಾದ ನೀಲಿ ಹಾಗೂ ಭೂಮಿಯ ಬಣ್ಣವಾದ ಹಸಿರು ಇಡೀ ದೇಗುಲದಲ್ಲಿ ವ್ಯಾಪಿಸಿದೆ. ಇಂಥ ಭವ್ಯವಾದ ದೇಗುಲ, ದೇವರ ಅಸ್ತಿತ್ವವನ್ನು ನಂಬದ ಕಮ್ಯನಿಸ್ಟ್ ಚೀನಾದಲ್ಲಿ ಕೇವಲ ಒಂದು ಪ್ರವಾಸೀ ಸ್ಥಳ.

ಮರುದಿನ ಬೀಜಿಂಗ್ ಅರಮನೆಯನ್ನು ನೋಡಿದೆವು. ಇದಕ್ಕೆ ’ ಫಾರ್ಬಿಡನ್ ಸಿಟಿ’ ಅಥವಾ ನಿಷೇಧಿತ ನಗರ ಎಂಬ ಪ್ರಸಿದ್ಧ ಅನ್ವರ್ಥನಾಮವಿದೆ. ಇಲ್ಲಿಗೆ ರಾಜರ ಕಾಲದಲ್ಲಿ ಜನಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ೧೮೦ ಎಕರೆಯಲ್ಲಿ ಹರಡಿರುವ ೯೮೦ ಕಟ್ಟಡಗಳಿರುವ ಇದೊಂದು ನಗರವೇ ಸರಿ. ೧೪೦೬ರಲ್ಲಿ ನಾನ್ ಜಿಂಗ್ ನಿಂದ ಬೀಜಿಂಗ್ ಗೆ ರಾಜಧಾನಿಯು ಸ್ಥಳಾಂತರಗೊಂಡಾಗ ಇದನ್ನು ಕಟ್ಟಲಾಯಿತು. ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿರುವ ಈ ವಿಶಾಲ ಅರಮನೆಗೆ ೪ ಪ್ರವೇಶದ್ವಾರಗಳಿವೆ. ತಿಯಾನ್ ಆಂಗ್ ಮೆನ್ ವೃತ್ತದಲ್ಲಿ ಚೀನಾದ ಸಂಸತ್ ಭವನ ಇದಕ್ಕೆ ಮುಖಾಮುಖಿಯಾಗಿ ನಿಂತಿದೆ .ಇಡೀ ಅರಮನೆಯನ್ನು ನೋಡಲು ೩-೪ ದಿನಗಳು ಬೇಕು. ಅರಮನೆಯ ತುಂಬ ಅಲ್ಲಲ್ಲಿ ಸ್ಥಾಪಿಸಿರುವ ಹಿತ್ತಾಳೆಯ ದೊಡ್ಡ ಹಂಡೆಗಳು ಇಲ್ಲಿನ ಅಗ್ನಿಶಾಮಕಗಳಂತೆ. ಮರದ ಅರಮನೆಯಾದ ಕಾರಣ ಇದರ ತುಂಬ ನೀರು ತುಂಬಿಸಿ ಇಡುತ್ತಿದ್ದರಂತೆ. ಎಂಥ ದೂರದೃಷ್ಟಿ!. ರಾಜನ ದರ್ಬಾರ್ ನಡೆಯುವ ಸ್ಥಳ, ಮಂತ್ರಿವರ್ಗದ ವಾಸದ ಮನೆಗಳು, ರಾಣೀವಾಸ, ಸೈನ್ಯದ ವಿಭಾಗ ಮುಂತಾದವು ಅಚ್ಚರಿ ಮೂಡಿಸುತ್ತವೆ. ನಮ್ಮಲ್ಲಿರುವಂತೆ ಅಭೂತಪೂರ್ವ ಶಿಲ್ಪಕಲೆ ಕಾಣದಿದ್ದರೂ ವಿಶಾಲತೆ ಹಾಗೂ ಅಚ್ಚುಕಟ್ಟುತನವನ್ನು ನೋಡಿ ಭಲೇ ಎನ್ನಬೇಕೆನಿಸುತ್ತದೆ. ಅರಮನೆಯ ವನ್ತುಸಂಗ್ರಹಾಲಯದಲ್ಲಿ ೧೦ ಲಕ್ಷಕ್ಕಿಂತಲೂ ಅಧಿಕ ವಸ್ತುಗಳನ್ನು ಒಪ್ಪವಾಗಿ ಜೋಡಿಸಿದ್ದಾರೆ. ಆಗಿನ ಚಿತ್ರಗಳು, ಪಿಂಗಾಣಿವಸ್ತುಗಳು, ಚಿನ್ನ –ಬೆಳ್ಳಿಯ ಆಭರಣಗಳು , ಹವಳದ ಪಾತ್ರೆಗಳು ಇತ್ಯಾದಿಗಳಿವೆ. ಚೀನೀಯರಿಗೆ ಜೇಡ್ ಎಂಬೋ ಹಸುರು ಕಲ್ಲು ಅಮೂಲ್ಯವಾದದ್ದು. ಅದರಿಂದ ಮಾಡಿದ ತರಹೇವಾರಿ ವಸ್ತುಗಳಿವೆ.

ಹಾಗೇ ಬೀಜಿಂಗ್ ಬೀದಿಗಳಲ್ಲಿ ಸುತ್ತಾಡಿದೆವು. ವಾಯುಮಾಲಿನ್ಯದಿಂದ ಅಕ್ಷರಶ: ನರಳುವ ಈ ನಗರದಲ್ಲಿ ಸೈಕಲ್ ಗಳಿಗೆ ಇನ್ನಿಲ್ಲದ ಮಹತ್ತ್ವ. ರಸ್ತೆಗಳಲ್ಲಿ ಸೈಕಲ್ ಸವಾರರಿಗಾಗೇ ವಿಶೇಷಪಥಗಳಿವೆ. ರಸ್ತೆ ಬದಿಗಳಲ್ಲೂ ಸಾಲಾಗಿ ಸೈಕಲ್ ಗಳನ್ನು ನಿಲ್ಲಿಸಿದ್ದಾರೆ. ಸಂಪೂರ್ಣ ಉಚಿತವಾಗಿ ಯಾರು ಬೇಕಾದರೂ ಬಳಸಬಹುದು. ತಮ್ಮ ಕೆಲಸ ಮುಗಿದ ನಂತರ ಸಮೀಪದ ರಸ್ತೆಯಲ್ಲಿ ಬಿಟ್ಟರಾಯಿತು. ಚೀನೀಯರು ಮನುಷ್ಯನೊಬ್ಬನನ್ನು ಬಿಟ್ಟು ಪ್ರಕೃತಿಯ ಎಲ್ಲ ಜೀವಿಗಳನ್ನು ತಿನ್ನುತ್ತಾರೆ.  ಬೆಕ್ಕಿನ ಬೋಂಡಾಗೆ ಜಿರಲೆಯ ಚಟ್ನಿ. ಕರಿದ ಕಪ್ಪೆಗಳನ್ನು-  ಹುರಿದ ಏಡಿಗಳನ್ನು ಉದ್ದದ ಕಡ್ಡಿಗೆ ಸಿಕ್ಕಿಸಿ ಇಡುತ್ತಾರೆ. ಹಾವಿನ ದೇಹವೇ ರುಚಿಯಾದ ಸಾಂಡ್ ವಿಚ್! ಸಮುದ್ರದ ಎಲ್ಲಾ ಜಲಚರಗಳು ಅವರ ಪ್ರಿಯವಾದ ತಿಂಡಿಗಳು. ಹಕ್ಕಿಗಳನ್ನು ಮಾತ್ರವಲ್ಲ ಅವುಗಳ ಗೂಡುಗಳನ್ನೂ ಪಲ್ಯ ಮಾಡಿ ಮುಕ್ಕುವ ಭಂಡರಿವರು! ದಿನವಿಡೀ ಸುತ್ತಾಡಿ ಹಸಿದ ನಮಗೆ ಎಲ್ಲೆಲ್ಲೂ ಆಹಾರ ಕಾಣುತ್ತಿತ್ತು ಆದರೆ ಶುದ್ಧ ಸಸ್ಯಾಹಾರಿಗಳಾದ ನಮಗೆ ಏನೂ ಸೇರದು! ನಮ್ಮ ಪುಣ್ಯಕ್ಕೆ ಹಣ್ಣುಗಳ ಅದ್ಭುತ ಲೋಕವೇ ಇಲ್ಲಿತ್ತು. ನಾವು ಕಂಡರಿಯದ ಅನೇಕ ಸಿಹಿಯಾದ ಹಣ್ಣುಗಳಿಂದಲೇ ಹೊಟ್ಟೆ ತುಂಬಿಸಿಕೊಂಡೆವು. ಅಲ್ಲದೇ ಎಲ್ಲೆಲ್ಲೂ ಮೊಸರು ಸಿಗುತ್ತದೆ. ಬಿಳಿಪಿಂಗಾಣಿಯ ಪುಟ್ಟ ಮಡಿಕೆಯಲ್ಲಿ ಸಿಹಿ ಮೊಸರು. ಜೊತೆಗೆ ನಾವು ಒಯ್ದಿದ್ದ ಅಂಟಿನುಂಡೆ, ಗೊಜ್ಜವಲಕ್ಕಿ, ಕಾಕ್ರಾ, ಚಕ್ಕುಲಿ, ರವೆಉಂಡೆಗಳೇ ನಮ್ಮ ಆಪದ್ಬಾಂಧವರು.

ನಂತರ ನಾವು ನೋಡಿದ್ದು ಪ್ರಪಂಚದ ಅದ್ಭುತಗಳಲ್ಲೊಂದಾದ ಮಹಾ ಗೋಡೆ. ಚೀನಾದ ಉತ್ತರದ ಗಡಿಯುದ್ದಕ್ಕೂ ಹರಡಿರುವ ಇದು ೨೧, ೧೯೬ ಕಿ.ಮೀ ಉದ್ದವಿದೆ.ಶತ್ರುಗಳಿಂದ ರಕ್ಷಣೆಗಾಗಿ ೨ನೇ ಶತಮಾನದಿಂದಲೇ ಗೋಡೆಯ ನಿರ್ಮಾಣ ಆರಂಭವಾಯಿತು. ಕೈದಿಗಳು ಹಾಗೂ ಸೈನಿಕರ ಕಠಿಣ ದುಡಿಮೆಯ ಫಲವಿದು. ಪ್ರತಿರಾಜನೂ ತನ್ನ ಪಾಲನ್ನು ಇದಕ್ಕೆ ಸೇರಿಸುತ್ತ ಹೋಗಿದ್ದಾನೆ. ಇಂದು ಅನೇಕ ಕಡೆ ನಾಶವಾಗಿದ್ದರೂ ಹೆಚ್ಚಿನ ಭಾಗವನ್ನು ಸರಕಾರ ಸುಸ್ಥಿತಿಯಲ್ಲಿರಿಸಿದೆ. ಪರ್ವತಗಳ ಮೇಲೆ ಸುಮಾರು೯ಮೀ ಅಗಲ, ೮ ಮೀ ಎತ್ತರದ ಗೋಡೆಯ ಮೇಲೆ ನಡೆಯುತ್ತಿದ್ದರೆ ನಿಜವಾಗಿಯೂ ಅಚ್ಚರಿಯ ಜೊತೆಗೆ ಸಂತೋಷವಾಗುತ್ತದೆ.ಪರ್ವತದ ಆಕಾರಕ್ಕನುಗುಣವಾಗಿ ಗೋಡೆ ಕೆಲವೆಡೆ ಕಡಿದಾಗಿದೆ, ಕೆಲವೆಡೆ ಇಳಿಜಾರು, ಕೆಲವೊಮ್ಮೆ ಸಪಾಟು. ಇಲ್ಲಿನ ಪರಿಸರವನ್ನು ಅತ್ಯಂತ ಸ್ಚಚ್ಛವಾಗಿರಿಸಿದ್ದಾರೆ. ಅಲ್ಲಲ್ಲಿ ಕಸದ ತೊಟ್ಟಿಗಳು, ಶೌಚಾಲಯಗಳನ್ನು ಕಟ್ಟಿಸಿ ಪ್ರವಾಸಿಗಳಿಗೆ ಅನುಕೂಲತೆ ಒದಗಿಸಿದ್ದಾರೆ. ಹಾಂ... ನೆನಪಿಡಿ ಗೋಡೆಯನ್ನು ಒಂದು ಕಡೆಯಿಂದ ಹತ್ತಿ ನಡೆದು ಸುಸ್ತಾದಾಗ ಇನ್ನೊಂದು ಕಡೆ ವಾಪಸ್ ಬರುವ ಅವಕಾಶ ಇಲ್ಲ. ಎಷ್ಟು ದೂರ ಮುಂದೆ ನಡೆಯುತ್ತೇವೋ ಅಷ್ಟೇ ತಿರುಗಿ ನಡೆದು ಹೊರಟಲ್ಲಿಗೇ ವಾಪಸ್ ಬರಬೇಕು. ಆದ್ದರಿಂದ ನಮ್ಮ ಶಕ್ತ್ಯಾನುಸಾರ ಮೊದಲೇ ಇಷ್ಟು ಕಿ. ಮಿ ನಡೆಯುವುದೆಂದು ನಿರ್ಧರಿಸಬೇಕು. ಇದು ಚೀನೀಯರಿಗೊಂದು ಹೆಮ್ಮೆಯ ಪ್ರವಾಸೀ ತಾಣ.ಸಂಸಾರಿಗರು, ಕಾಲೇಜು ತರುಣ-ತರುಣಿಯರ ಜೊತೆ  ಅನೇಕರು ತಮ್ಮ ವೃದ್ಧ ತಂದೆತಾಯಿಯರ ಕೈಹಿಡಿದು ನಡೆಯಲು ಸಹಾಯ ಮಾಡುತ್ತಿದ್ದರೆ ಕೆಲವರು ಹೆಗಲ ಮೇಲೆ ಹೊತ್ತು ತಂದಿದ್ದರು!

ನಂತರ ’ಹುಟಾಂಗ್ ’ ಗಳೆಂಬ ವಠಾರಗಳಿಗೆ ಭೇಟಿಯಿತ್ತೆವು. ನಮ್ಮ ವಠಾರದ ಮನೆಗಳಂತೆಯೇ ಒಂದಕ್ಕೊಂದು ಅಂಟಿಕೊಂಡ ಮನೆಗಳಿವು. ಸಾವಿರಾರು ಬಡವರು ಇಲ್ಲಿ ವಾಸಿಸುತ್ತಾರೆ. ಒಂದು ಕಾಲದಲ್ಲಿ ಜನರೆಲ್ಲಾ ಈ ವಠಾರಗಳಲ್ಲೇ ವಾಸಿಸುತ್ತಿದ್ದರಂತೆ. ಆದರೆ ಈಗಿನ ಚೀನೀ ಆಡಳಿತದಲ್ಲಿ ಭೂಮಿ ಸರಕಾರದ ಸೊತ್ತು . ಆದ್ದರಿಂದ ಹುಟಾಂಗ್ ಗಳನ್ನು ನೆಲಸಮ ಮಾಡಿ ಸರಕಾರವೇ ಜನರಿಗೆ ಮನೆಗಳನ್ನು ಒದಗಿಸಿದ್ದರೂ ಪರಂಪರೆಯ ನೆನಪಾಗಿ ಕೆಲವನ್ನು ಉಳಿಸಿಕೊಂಡಿದ್ದಾರೆ. ಇಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು.
ಹಾಗೆಯೇ ೨೦೦೮ರ ಒಲಂಪಿಕ್ ’ಹಕ್ಕಿ ಗೂಡು’ ಎಂಬ ಕ್ರೀಡಾಗ್ರಾಮಕ್ಕೂ ಒಂದು ಸುತ್ತು ಹಾಕಿ ಬಂದೆವು.ಹಕ್ಕಿಗಳು ತಮ್ಮ ಲಾಲಾರಸ ಹಾಗೂ ಕಡ್ಡಿಗಳಿಂದ ನಿರ್ಮಿಸುವ ಹಕ್ಕಿ ಗೂಡು ಚೀನೀ ವೈದ್ಯಪದ್ಧತಿಯಲ್ಲಿ ಅನೇಕ ರೋಗಗಳಿಗೆ ಔಷಧಿ. ಅದರ ಆಕಾರದಲ್ಲೇ ನಿರ್ಮಿತವಾದ ಈ ಕ್ರೀಡಾಂಗಣ ಒಂದು ವಿಸ್ಮಯವೇ ಸರಿ. ನಮ್ಮ ಬಳ್ಳಾರಿಯ ಅದಿರಿನಲ್ಲೇ ಇದನ್ನು ನಿರ್ಮಿಸಿದ್ದಾರೆಂದು ಎಲ್ಲೋ ಕೇಳಿದ್ದ ನನಗೆ ಅದನ್ನು ನೋಡುವಾಗ ಹೆಮ್ಮೆ ಹಾಗೂ ಸಂಕಟವಾಯಿತು.

ಮುಂದೆ ರಾಣಿಯ ಬೇಸಗೆ ಅರಮನೆಯೆಂಬ ಇನ್ನೊಂದು ವಿಸ್ಮಯವನ್ನುನೋಡಿದೆವು. ೧೭೪೯ರಲ್ಲಿ ಕಿನ್ ಲಾಂಗ್ ರಾಜನು ತನ್ನ ತಾಯಿಯ ೬೦ನೇ ಹುಟ್ಟುಹಬ್ಬದ ನೆನಪಿಗಾಗಿ ಕಟ್ಟಿಸಿದ  ಅರಮನೆಯಿದು. ಇಲ್ಲಿರುವ ಮಣ್ಣನ್ನು ಅಗೆದು  ೨ ಚದರಕಿ. ಮೀ ವಿಸ್ತೀರ್ಣದ ಸರೋವರವನ್ನು ನಿರ್ಮಿಸಿ, ಆ ಮಣ್ಣನ್ನು ಪಕ್ಕದಲ್ಲೇ ಗುಡ್ಡೆ ಹಾಕಿ ಪರ್ವತವೊಂದನ್ನು ಸೃಷ್ಟಿಸಿದನು. ಈ ಸರೋವರದ ಸುತ್ತ ೭೦೦ ಮೀ ಉದ್ದದ  ಪಥವಿದೆ. ಇದು  ಅತಿಉದ್ದದ ಮಾನವ ನಿರ್ಮಿತಕಾಲುದಾರಿಯೆಂದು  ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದೆ. ಈ ಸರೋವರದಲ್ಲಿರುವ ಅಮೃತಶಿಲೆಯ ಬೃಹತ್ ದೋಣಿ ಮನೋಹರವಾಗಿದೆ. ಅರಮನೆಯ ಉದ್ಯಾನವಂತೂ ಕಣ್ಣಿಗೆ ಹಬ್ಬವೇ ಸರಿ.

ಬಹುಶ: ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುವಲ್ಲಿ ಚೀನಾವನ್ನು ಮೀರಿಸುವುದು ಕಷ್ಟಸಾಧ್ಯ. ಮಾನವಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ರಂಗದಲ್ಲೂ ಮೊದಲಿಗರಾಗಿ ನಿಂತಿರುವ ಚೀನೀಯರಿಂದ ನಮ್ಮ ಸರಕಾರಗಳು  ಕಲಿಯಬೇಕಾದ್ದು ಬಹಳಷ್ಟಿದೆ. ಅಲ್ಲಿನ ಜನರ ಸೌಜನ್ಯಶೀಲತೆ, ಪ್ರವಾಸಿಸ್ನೇಹೀ ಮನೋಭಾವ ಕೂಡಾ ಮೆಚ್ಚತಕ್ಕದ್ದೇ. ನಮ್ಮ ದೇಶದ ಭಿನ್ನತೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವೆಂದಾದರೂ ಅವರನ್ನು ಸರಿಗಟ್ಟುವುದು ಸಾಧ್ಯವೇ ಎಂಬ ಸಂಶಯ ಮಾತ್ರ ಪ್ರವಾಸದ ಕೊನೆಯಲ್ಲಿ ನನ್ನಲ್ಲುಳಿಯಿತು.

ಇರುವುದೆಲ್ಲವ‌ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು....

 ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ  ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.”
ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು. ಏನಪ್ಪಾ… ಯಾರೋ ಭಗವಂತನ ಕಡೆಯವರಾ? ಅಂತ ಹುಬ್ಬೇರಿಸಬೇಡಿ. ನಾನೊಬ್ಬಳು ಸಂಸ್ಕೃತ ಶಿಕ್ಷಕಿ, ಮಿಗಿಲಾಗಿ ಸಂಸ್ಕೃತಪ್ರೇಮಿ! ನಮ್ಮ ದೇಶದಲ್ಲಿ ಏದುಸಿರು ಬಿಡುತ್ತಾ ನಡೆಯುವ ಭಾಷೆಗೆ ಪ್ರಪಂಚದ ಇನ್ನೆಲ್ಲೋ ಮೂಲೆಯಲ್ಲಿ ಪಲ್ಲಕ್ಕಿ ಸೇವೆ. ತನ್ನ ಜನ್ಮಭೂಮಿಯಲ್ಲಿ ಅದರ ಹೆಸರೆತ್ತಲೂ ಉದಾಸೀನ . ಅಲ್ಲೆಲ್ಲೋ  ಅದಕ್ಕೆ  ರಾಜಸನ್ಮಾನ! ಎಂದೆನಿಸಿತು ಅಷ್ಟೇ!
ನಾನು ಕೆಲಸಮಾಡುವ ಶಿಕ್ಷಣಸಂಸ್ಥೆಯಲ್ಲಿ ಮಕ್ಕಳಿಗೆ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ  ತಮ್ಮ ಆಯ್ಕೆಯ ಭಾಷೆಯೊಂದನ್ನು ದ್ವಿತೀಯ/ತೃತೀಯ ಭಾಷೆಯಾಗಿ ಕಲಿಯುವ ಅವಕಾಶವಿದೆ. ಇದಕ್ಕಾಗಿ ನಾಲ್ಕನೇ ತರಗತಿಯ ಮಕ್ಕಳ ಪಾಲಕರಿಗೆ ವರ್ಷದ ಕೊನೆಯಲ್ಲಿ ನಮ್ಮಲ್ಲಿ ಕಲಿಸಲಾಗುವ ವಿವಿಧ ಭಾಷೆಗಳ ಬಗ್ಗೆ ಮಾಹಿತಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಮ್ಮಲ್ಲಿ  ಹಿಂದಿ, ಕನ್ನಡ, ಸಂಸ್ಕೃತ, ಫ಼ರೆಂಚ್ , ಜರ್ಮನ್, ಸ್ಪಾನಿಶ್, ಜಪಾನಿಸ್ ಭಾಷೆಗಳಲ್ಲಿ ಶಿಕ್ಷಣ ಲಭ್ಯವಿದೆ. ಅಂದು ಸಹಜವಾಗಿಯೇ ಭಾಷಾಶಿಕ್ಷಕರು ತಮ್ಮ ಸರಕನ್ನು ಉತ್ಸಾಹದಿಂದ  ಪ್ರಸ್ತುತಪಡಿಸುತ್ತಾರೆ. ಹಿಂದಿ , ಕನ್ನಡಗಳಿಗೆ ರಾಷ್ಟ್ರಭಾಷೆ- ರಾಜ್ಯಭಾಷೆ ಯೆಂಬ ಶ್ರೀರಕ್ಷೆಯಿದೆ. ವಿದೇಶೀ ಭಾಷೆಗಳಿಗೆ ತಮ್ಮದೇ ಆದ ಪ್ರಭಾವಳಿಯಿದೆ. ಆ ಭಾಷೆಯನ್ನು ಕಲಿತರೆ ಮಗುವಿಗೆ ಭವಿಷ್ಯದಲ್ಲಿ ಒದಗಿಬರಬಹುದಾದ ಉದ್ಯೋಗಾವಕಾಶಗಳು, ಸಾಮಾಜಿಕ ಸ್ಥಾನಮಾನಗಳು …. ಓಹ್…. ಒಂದೇ .. ಎರಡೇ… ಅನೇಕಾನೇಕ ಆಮಿಷಗಳಿವೆ. ಆ ಶುಭದಿನದಂದು ನಮ್ಮ ಬಡಪಾಯಿ ಸಂಸ್ಕೃತ ’ಸ್ಕೋರಿಂಗ್ ಸಬ್ಜೆಕ್ಟ್’ ಎಂಬ  ಮಸುಕಾದ ಕಿರೀಟದೊಂದಿಗೆ ಸಭೆಯಲ್ಲಿ ವಿರಾಜಮಾನವಾಗುತ್ತದೆ. ಆದರೆ ಅಲ್ಲಿ ನೆರೆಯುವ ಸುಶಿಕ್ಷಿತ, ವಿದೇಶಗಳ ರುಚಿ ಉಂಡು ಬಂದ , ಉಚ್ಚ ವರ್ಗದ ಪಾಲಕರು ಅದ್ರಿಂದ ಏನ್ರೀ ಯೂಸು?…. ಯಾರ್ರೀ ಮಾತಾಡ್ತಾರೆ ಈಗಿನ ಕಾಲದಲ್ಲಿ? …. ಜಾಬ್ ಅಪರ್ಚನಿಟೀಸ್  ಏನಿದೆ ಅದರಲ್ಲಿ?….. ದುಡ್ಡು?….. ಹೆಸರು?….. ಎಂಬ ತರ್ಕಬದ್ಧ ಪ್ರಶ್ನೆಗಳ ಚೂಪು ಬಾಣಗಳನ್ನು ಪ್ರಯೋಗಿಸಲಾರಂಭಿಸಿದೊಡನೆಯೇ  ನಡುಗುವ ಸರದಿ ಸಂಸ್ಕೃತದ್ದು.  ವೈಜ್ಞಾನಿಕವಾದ ವ್ಯಾಕರಣ, ಅಪಾರ ಶಬ್ದಸಂಪತ್ತು, ಮಗುವಿನ ಉಚ್ಚಾರ ಶುದ್ಧೀಕರಣಗೊಳಿಸುವ ಅದ್ಭುತಶಕ್ತಿ, ಮಗುವಿನಲ್ಲಿ ಸಾತ್ವಿಕಗುಣಗಳನ್ನು ಉದ್ದೀಪನಗೊಳಿಸುವ ನಂದಾದೀಪದಂತಿರುವ ಈ ಸಂಸ್ಕೃತಸರಸ್ವತಿ  ಅಂದು ಲಕ್ಷ್ಮೀಕಟಾಕ್ಷವಿಲ್ಲದೇ ತತ್ತರಿಸುವುದನ್ನು ಕಂಡಾಗ ನನಗೆ ಸಂಕಟವಾಗುತ್ತದೆ. ಅಯ್ಯೋ…ಒಂದು ಕಡೆ ಅಕ್ಷಯನಿಧಿ- ಇನ್ನೊದೆಡೆ ಸಂಸ್ಕಾರದಾರಿದ್ರ್ಯ!! ಬಹುಶ: ಇದೇ ಸಮಾಜದ ನೀತಿ. ಹಿತ್ತಲಗಿಡ ಮದ್ದಲ್ಲ……
ಹಾಗೆ ನೋಡಿದರೆ ಇದು ಉದ್ದನೆಯ ಪಟ್ಟಿ. ನಮ್ಮ ಆಹಾರಕ್ಕೆ ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ- ನಮಗೆ ಕಾರ್ನ್ಫ಼ಲೇಕ್, ಬ್ರೆಡ್ ಸಾಂಡ್ವಿಚ್ ಇಷ್ಟ…. , ಯೋಗ- ಆಯುರ್ವೇದಕ್ಕೆ ವಿಶ್ವಮಾನ್ಯತೆ- ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೇ ಬೇಕು, ನಮ್ಮ ಮನೆಯಲ್ಲಿ ಇಂಗ್ಲೀಷ್ ಮಾತಾಡಿದರೆ ಒಂಥರಾ ನೆಮ್ಮದಿ….. ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಮುರಿಯುವುದರಲ್ಲಿ ಎಲ್ಲಿಲ್ಲದ ಆಸಕ್ತಿ….
ಇವತ್ತು ಬೆಳಗ್ಗೆ  ಹೀಗೆ ಯೋಚಿಸುತ್ತಾ ಶಾಲೆಗೆ ಹೊರಟೆ.  ಗೇಟು ತೆಗೆದು ಹೊರಗೆ ಬಂದರೆ ಮನುವಿನ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಕೆಳಗಿರುವ ನಮ್ಮ ಎದುರುಗಡೆಯ ಮನೆಯಿಂದ ವೇದಮಂತ್ರಗಳು ಕಿವಿಗಪ್ಪಳಿಸಲಾರಂಭಿಸಿದವು. ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ- ಪೂಜೆಗಳನ್ನು ಮುಗಿಸಿದ್ದ ದಂಪತಿ ನನ್ನನ್ನು ನೋಡಿ ಮುಗುಳ್ನಕ್ಕರು. ಯಾಕೋ ಏನೋ…           “ ಸಂಧ್ಯಾವಂದನೆಯಿಂದ ನಮ್ಮ  ದೇಹಕ್ಕೆ ಲಾಭಗಳಿವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ” ಎಂದು ನನ್ನೊಡನೆ ವಾದಕ್ಕಿಳಿಯುವ ನನ್ನ ಮಗನ ನೆನಪು ಮನಸ್ಸಿನಲ್ಲಿ ಹಾದುಹೋಯಿತು.
ಅದಕ್ಕೇ ಅಡಿಗರು ಹೇಳಿದ್ದು- ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು…