Friday, 8 November 2019

ದೇವರ ಕೆಲಸ

ಅಂದು ನನ್ನ ಪರಿಚಿತರೊಬ್ಬರ ಮನೆಯಲ್ಲಿ ಗೃಹಪ್ರವೇಶ, ಮಗನ ಮುಂಜಿ ಇತ್ಯಾದಿ ಅನೇಕ ಶುಭಕಾರ್ಯಗಳು. ನನಗೆ ಯಾವುದೋ ಅನನುಕೂಲದಿಂದಾಗಿ ಹೋಗಲಾಗಲಿಲ್ಲ. ಕೆಲದಿನಗಳ ನಂತರ ಫೋನ್ ಮಾಡಿದೆ. ಬರಲಾಗದ್ದಕ್ಕೆ ಕ್ಷಮೆ ಕೇಳಿ, ಕಾರ್ಯಕ್ರಮ ಚೆನ್ನಾಗಾಯ್ತೇ? ಅಂದೆ. “ಎಲ್ಲವೂ ಚೆನ್ನಾಗಿ ನಡೀತು , ಆದ್ರೆ ಪುರೋಹಿತರಿಗೆ ಇಷ್ಟು ಕೊಡಬೇಕಾಗತ್ತೆ ಅಂತ ಗೊತ್ತಿರಲಿಲ್ಲ ನಂಗೆ. ಅಲ್ಲ.. .....ಐದು ಗಂಟೆ ಕಾರ್ಯಕ್ರಮ ...ಅಷ್ಟಕ್ಕೆ ಇಷ್ಟು ತಗೊಂಡ್ರು.” “ ಅವ್ರೇ ಪೂಜೆ ಸಾಮಾನು ತಂದಿದ್ರಾ?” “ ಹೌದು.. ತಯಾರಿ ಎಲ್ಲ ಅವ್ರದ್ದೆ.. ಆದ್ರೆ ಆ ಬತ್ತಿ-ಕರ್ಪೂರ-ಎಲೆ-ಸೊಪ್ಪು-ಕಡ್ಡಿ... ಗೆ ಇಷ್ಟೊಂದು ಚಾರ್ಜ್ ಮಾಡೋದಾ? ಇಷ್ಟಾಗಿ ಹಣ್ಣು, ತೆಂಗಿನಕಾಯಿ ನಮ್ದೇ ಗೊತ್ತಾ!!” ನಮ್ಮ ಮನೆಯ ಕಾರ್ಯಕ್ರಮ, ನಾವಾಗೇ ಹೋಗಿ ಪುರೋಹಿತರನ್ನು ಕರೀತೀವಿ, ಅದರಿಂದ ಬರಬಹುದಾದ ಶುಭಫಲಗಳೂ ನಮಗೇನೇ. ಆದರೆ ಕೊನೆಗೆ ಪುರೋಹಿತರ ಬಗ್ಗೆ ಕೊಂಕು ಮಾತು!! ಇದ್ಯಾಕೋ ಸರಿ ಇಲ್ಲ ಅನಿಸಿ “ಹೋಗ್ಲಿ ಬಿಡಿ .. ದುಡ್ಡು ಕೊಟ್ಟಾಯ್ತಲ್ಲ” ಅಂತ ಹೇಳಿ ಫೋನ್ ಇಟ್ಟೆ. ಒಂದು ಕಾಲದಲ್ಲಿ ವೈದಿಕ ಜ್ಞಾನ, ಜೀವನಕ್ರಮ ನಮ್ಮ ದಿನಚರಿಯೇ ಆಗಿತ್ತು. ಆದರೆ ಇಂದು ನಾವೆಲ್ಲ ಬೇರೆ ಬೇರೆ ಉದ್ಯೋಗಗಳಲ್ಲಿರುವುದರಿಂದ ಹೆಚ್ಚಿನವರ ಧಾರ್ಮಿಕತೆ ದೇವರ ಫೋಟೋಗೆ ಹೂ- ಸ್ತೋತ್ರ-ನಮಸ್ಕಾರಕ್ಕೆ ಸೀಮಿತವಾಗಿದೆ. ಇರಲಿ ಕಾಲದ ಜೊತೆ ಸಾಗುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ವೃತ್ತಿಯ ಬಗ್ಗೆ ಹೇಗೆ ನಾವು ಹೆಮ್ಮೆ ಪಡುತ್ತೇವೋ ಹಾಗೇ ಪುರೋಹಿತಿಕೆ ವೃತ್ತಿಯ ಬಗ್ಗೆಯೂ ನಾವು ಸಮಾನ ಗೌರವ ತೋರಿಸಬೇಕು ಅಲ್ವೇ? ಸೂಪರ್ ಮಾರ್ಕೆಟ್, ಹೋಟೆಲ್, ಬಾರು, ಬಟ್ಟೆ ಅಂಗಡಿಯವರು ನಮ್ಮ ವ್ಯಾವಹಾರಿಕ-ಲೌಕಿಕ ಆಸೆ, ಅವಶ್ಯಕತೆಗಳನ್ನು ಪೂರೈಸಿದಾಗ ನಾವು ಯಥೇಚ್ಛವಾಗಿ ದುಡ್ಡು ಕೊಡುತ್ತೇವೆ. ಹಾಗೆಯೇ ಪುರೋಹಿತರು ನಮ್ಮ ಧಾರ್ಮಿಕ-ಮಾನಸಿಕ ಅವಶ್ಯಕತೆಯನ್ನು ಪೂರೈಸುತ್ತಾರೆ. ಅಂದ ಮೇಲೆ ಅವರ ಬಗ್ಗೆ ಯಾಕೀ ಅಸಹನೆ? ನನಗನ್ನಿಸುವ ಮಟ್ಟಿಗೆ ಧಾರ್ಮಿಕ ವಿಚಾರಗಳಲ್ಲಿ ನಮ್ಮಲ್ಲಿ ಸ್ಪಷ್ಟತೆ ಇಲ್ಲ. ಆರ್ಥಿಕ ಸ್ಥಿತಿ ಚೆನ್ನಾಗಿರದ ಕೆಲ ಮನೆಗಳು ಹಿಂದಿನವರು ನಡೆಸಿಕೊಂಡು ಬಂದ ಚೌತಿ-ನವರಾತ್ರಿ-ಬೊಡ್ಡಣ ಇತ್ಯಾದಿಗಳನ್ನು ನಡೆಸಲು ಏದುಸಿರು ಬಿಡುತ್ತಾರೆ. ಆದರೆ “ಬೇರೆಯವರು ಏನಂತಾರೋ? ದೇವರು ಶಾಪ ಕೊಟ್ರೆ?” ಇತ್ಯಾದಿ ಮಾನಸಿಕ ತಲ್ಲಣಗಳಿಂದ ಸಾಲ ಮಾಡಿಯಾದ್ರೂ ಕಾರ್ಯಕ್ರಮ ನಡೆಸುತ್ತಾರೆ. ಅವರ ಸಿಟ್ಟಿಗೆ ನಿರಪರಾಧಿ ಪುರೋಹಿತ ಬಲಿಯಾಗ್ತಾನೆ. ಇನ್ನು ಮದುವೆ-ಮುಂಜಿ-ಗೃಹಪ್ರವೇಶಗಳು ನಮ್ಮ ಪ್ರತಿಷ್ಠೆಯ ಸಂಕೇತಗಳು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಕೊನೆಯಲ್ಲಿ ಕೊಡುವ ಪುರೋಹಿತರ ದಕ್ಷಿಣೆ ನಮ್ಮ ಅಸಹನೆಗೆ ಕಾರಣವಾಗುತ್ತದೆ. ಅಲ್ಲದೆ ಕೆಲ ಪುರೋಹಿತರು ತಮ್ಮ ವೃತ್ತಿಯ ಘನತೆಗೆ ತಕ್ಕುದಾಗಿ ನಡೆದುಕೊಳ್ಳುವುದಿಲ್ಲ. ಮಂತ್ರಗಳ ಅರ್ಥ, ಕೈಂಕರ್ಯದ ಮಹತ್ತ್ವ ಗೊತ್ತಿಲ್ಲದ, ಪುರೋಹಿತನ ಆದರ್ಶಗಳಿಲ್ಲದ ಇಂಥವರು ಆ ವೃತ್ತಿಗೆ ಕಪ್ಪು ಚುಕ್ಕೆಗಳಾಗ್ತಾರೆ. ಶಾಲೆಗೆ ಸದಾ ರಜೆ ಹಾಕುವ, ಮಕ್ಕಳಿಗೆ ಹೊಡೆಯುವ, ದುರಭ್ಯಾಸಗಳಿರುವ ಟೀಚರ್ ಗಳನ್ನು ನಾವು ಹೇಗೆ ದ್ವೇಷಿಸುತ್ತೇವೋ ಹಾಗೆಯೇ * ದೈಹಿಕ ಸ್ವಚ್ಛತೆ ಇರದ, ಅಲ್ಲಲ್ಲಿ ಉಗುಳುವ, ಅನಗತ್ಯ ಸುದ್ದಿಗಳನ್ನು ಮಾತಾಡ್ತಾ ನಗುವ , ಮಂತ್ರ ಹೇಳ್ತಾ ಮೊಬೈಲ್ ನಲ್ಲಿ ಮಾತಾಡುವ ಪುರೋಹಿತರನ್ನೂ ಜನ ಇಷ್ಟಪಡುವುದಿಲ್ಲ. ಪುರೋಹಿತಿಕೆ ಕೂಡಾ ಬೇರೆ ಉದ್ಯೋಗಗಳಂತೆ ಒಂದು ಸೀರಿಯಸ್ ಪ್ರೊಫೆಶನ್. *ಪುರೋಹಿತರು ಸ್ವಚ್ಛ-ಇಸ್ತ್ರಿ ಹಾಕಿದ ಪಂಚೆ,ಶಲ್ಯಗಳನ್ನು ಹಾಕಿಕೊಂಡು ಸ್ಮಾರ್ಟ್ ಆಗಿ ಬರಬೇಕು. ಪೂಜೆ ಮುಗಿಯುವವರೆಗೂ ಮೊಬೈಲನ್ನು ಸೈಲೆಂಟ ಇಡಬೇಕು. ಹಿತ ಮಿತವಾಗಿ ಊಟ ಮಾಡಿ ಜನರಿಗೆ ಮಾದರಿ ಆಗಬೇಕು. ಮಂತ್ರಗಳನ್ನು ಸ್ಪಷ್ಟವಾಗಿ ಹೇಳಿ ಪೂಜೆಯ ಮಹತ್ತ್ವವನ್ನೂ , ಹಿತವಚನಗಳನ್ನೂ ಆ ಕುಟುಂಬಕ್ಕೆ ಹೇಳಬೇಕು. ಅದಕ್ಕಾಗಿ ಅವರು ನಿರಂತರ ಅಧ್ಯಯನ ಮಾಡಬೇಕು.[ ನಮ್ಮ ವೈದಿಕ ಸಂಸ್ಕೃತ ಸಾಹಿತ್ಯವನ್ನು ಓದಲು ಒಂದು ಜೀವಮಾನ ಸಾಲದು ಗೊತ್ತೇ? ಅದೊಂದು ಮಹಾಸಮುದ್ರ . ನಾವೇನಿದ್ದರೂ ಒಂದು ಬೊಗಸೆ ನೀರು ಹಿಡಿದು ನಾನು ತುಂಬ ಕಲಿತಿದ್ದೇನೆ ಅನ್ನಬೇಕು ಅಷ್ಟೇ!! ] ಇಂಥ ಪುರೋಹಿತರನ್ನು ನೋಡಿದಾಗ ಜನರೂ ಗೌರವದಿಂದ ದಕ್ಷಿಣೆ ಕೊಡುತ್ತಾರೆ. ಪುರೋಹಿತಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿದ ಮೇಲೆ ಇಂಥ ಕಾರ್ಯಕ್ರಮಕ್ಕೆ ಇಷ್ಟು ದಕ್ಷಿಣೆ ಎಂದು ಸ್ಪಷ್ಟವಾಗಿ ಮೊದಲೇ ಹೇಳಬೇಕು. “ನೋಡಿ.. ನೀವು ಯೋಚಿಸಿ ಕೊಡಿ/ ಆಮೇಲೆ ಹೇಳ್ತೇನೆ/ ನಾನು ದುಡ್ಡಿಗೋಸ್ಕರ ಪುರೋಹಿತಿಕೆ ಮಾಡಲ್ಲ ...” ಇತ್ಯಾದಿಯಾಗಿ ನುಣುಚಿಕೊಳ್ಳುವುದರಿಂದ ತೊಂದರೆಯೇ ಹೆಚ್ಚು . ಆಯಾ ಊರಿನ ಎಲ್ಲ ಪುರೋಹಿತರು ಸೇರಿ ಒಮ್ಮತದ ತೀರ್ಮಾನ ಕೈಗೊಳ್ಳಬಹುದು. ಆಗ ಮನೆ ಯಜಮಾನರು ದುಡ್ಡನ್ನು ಹೊಂದಿಸಲು ಅನುಕೂಲವಾಗುತ್ತದೆ. ಪೂಜೆಗಳನ್ನು ಮಾಡಿಸುವವರು ಕೂಡಾ ಮನ:ಪೂರ್ವಕವಾಗಿ ದಕ್ಷಿಣೆ ಕೊಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪೂಜೆಗಳು ನಮ್ಮ ಜೀವನದ ಭಾಗಗಳು. ಇಷ್ಟವಿಲ್ಲದಿದ್ದರೆ ಮಾಡಬೇಡಿ. ಇದರಲ್ಲೇನೂ ಒತ್ತಾಯವಿಲ್ಲ. ಸ್ವಲ್ಪ ಗಟ್ಟಿ ಮನಸ್ಸು ಬೇಕಷ್ಟೇ. ಅಥವಾ ಆಡಂಬರ ಕಡಿಮೆ ಮಾಡುವ ಬಗ್ಗೆ ಯೋಚಿಸಿ. ನಮ್ಮ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ. ಅವುಗಳನ್ನು ಚೆನ್ನಾಗಿ ನೆರವೇರಿಸಲು ಪುರೋಹಿತರು ಮತ್ತು ಯಜಮಾನರ ಮಧ್ಯೆ ಸಹಯೋಗ ಬೇಕೇ ಬೇಕು. ಪೂಜೆಗಳನ್ನು , ಅನ್ನದಾನವನ್ನು ಮಾಡುತ್ತ ಸನಾತನ ಚಿಂತನೆಗಳನ್ನು ಉಳಿಸೋಣ... *ಪುರೋಹಿತರನ್ನು ಅಥವಾ ಭಕ್ತರನ್ನು ನಿಂದಿಸುವುದು ನನ್ನ ಉದ್ದೇಶ ಅಲ್ಲ. ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ನನ್ನ ಶಬ್ದಗಳ ಬಗ್ಗೆ ಕ್ಷಮೆ ಇರಲಿ..

Friday, 12 April 2019

ಈ ಸುಂದರ ತರುಣಿ ಮಣಿಪಾಲದ ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ. ಹೆಸರು Trinetra Haldar Gummaraju ತ್ರಿನೇತ್ರಾ ಗುಮ್ಮರಾಜು.... So..What ... ಅನ್ಬೇಡಿ. ೪ ವರ್ಶಗಳ ಹಿಂದೆ ಅಂಗದ್ ಗುಮ್ಮರಾಜು ಆಗಿ ಕಾಲೇಜು ಸೇರಿದ್ದ ಹುಡುಗ, ಮುಂದಿನವರ್ಷ ಡಾ. ತ್ರಿನೇತ್ರಾ ಗುಮ್ಮರಾಜು ಅನ್ನೋ ಹೆಸರಲ್ಲಿ ವಿದ್ಯಾಭ್ಯಾಸ ಮುಗಿಸಿ , ಕರ್ನಾಟಕದ ಮೊದಲ ಲಿಂಗಪರಿವರ್ತಿತ ವೈದ್ಯೆ ಎಂಬ ಇತಿಹಾಸ ನಿರ್ಮಿಸಲಿದ್ದಾಳೆ. ಹೌದು.. ಅಂಗದ್ ಗುಮ್ಮರಾಜು ನಮ್ಮ ಶಾಲೆಯ ವಿದ್ಯಾರ್ಥಿ. "ನಾನು ಹುಡುಗ ಅಲ್ಲ... ಹುಡುಗಿ ಕಣ್ರೋ..." ಅಂತ ದಿಟ್ಟತನದಿಂದ ಹೇಳುತ್ತ ಶಾಲೆಯಲ್ಲಿ ಅಡ್ಡಾಡುತ್ತಿದ್ದ ಇವನನ್ನು ಕಂಡಾಗ ನನಗೆ "ಬಾಯಿಗೆ ಬಂದಿದ್ದೆಲ್ಲ ಮಾತಾಡ್ತಾನಲ್ಲ...ಏನಪ್ಪ ಇವ್ನು....". ಅಂತ ಕಸಿವಿಸಿಯಾಗುತ್ತಿತ್ತು. ಮುಂದೆ ಸಿಇಟಿಯಲ್ಲಿ ೧೬೩ನೇ ರಾಂಕ್ ಪಡೆದು ವೈದ್ಯಕೀಯ ಕಾಲೇಜಿಗೆ ಸೇರಿದ ಅಂಗದ್ ಬಾಯಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತಂದ. ಬ್ಯಾಂಕಾಕ್ ನ ಆಸ್ಪತ್ರೆಯಲ್ಲಿ ಹೆಣ್ಣಿನ ಅಂಗಾಂಗಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತ್ರಿನೇತ್ರಾ ಆಗಿಬಿಟ್ಟ. ಆಪರೇಶನ್ ಗೆ ಮೊದಲೇ ವೀರ್ಯ ಬಾಂಕ್ ನಲ್ಲಿ ಸುರಕ್ಷಿತವಾಗಿ ಇಟ್ಟ ತನ್ನದೇ ವೀರ್ಯದಿಂದ ಬಾಡಿಗೆ ತಾಯಿಯ ಮೂಲಕ ತನ್ನ ಮಗುವನ್ನು ಪಡೆಯುವ ಮುಂದಾಲೋಚನೆಯನ್ನು ಮಾಡಿದ್ದಾಗಿದೆ. ನೆಗಡಿಗೆ ಔಷಧಿ ತರಲು ಆಸ್ಪತ್ರೆಗೆ ಹೋಗಿದ್ದೆ ... ಅನ್ನುವಷ್ಟು ಸರಳವಾಗಿ ತನ್ನ ಲಿಂಗಪರಿವರ್ತನೆಯ ಕತೆಯನ್ನು ಅವನು ಹೇಳುವಾಗ ನನಗೆ ಹೆಮ್ಮೆ, ಸಂಕಟ, ದು:ಖ, ಅಚ್ಚರಿ ಎಲ್ಲಾ ಒಟ್ಟೊಟ್ಟಿಗೇ ಆಯಿತು. ಟ್ರಾನ್ಸ್ ಜೆಂಡರ್ಸ್ , ಗೇ , ಲೆಸ್ಬಿಯನ್ ಅನ್ನೋ ಶಬ್ದಗಳನ್ನೆಲ್ಲ ಕೇಳುವಾಗ ನಾವೆಲ್ಲ ಮುಖ ಕಿವಿಚ್ತೀವಿ ಅಲ್ವೇ? ಯಾಕೆಂದ್ರೆ ವಿಕಾರವಾಗಿ ಅಲಂಕಾರ ಮಾಡಿಕೊಂಡು, ಬೀದಿಯಲ್ಲಿ ಚಪ್ಪಾಳೆ ತಟ್ಟುತ್ತ ಜನರನ್ನು ಪೀಡಿಸುವ ಭಿಕ್ಷುಕರು ನಮ್ಮ ಕಣ್ಮಂದೆ ಬರ್ತಾರೆ... ನಮ್ಮ ಸಮಾಜದ ಚೌಕಟ್ಟಿನಲ್ಲಿ ಎಲ್ಲಿಯೂ ಸಲ್ಲದವರು ಇವರು. ಇವರೆಲ್ಲರೂ ನಮ್ಮೆಲ್ಲರ ಥರನೇ ಸಾಮಾನ್ಯ ವ್ಯಕ್ತಿಗಳು. ಆದರೆ ಕೆಲ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಅವರ ದೇಹದಲ್ಲಿನ Sex [ ಲಿಂಗ] ಮತ್ತು ಮನಸ್ಸಿನ Gender [ ಲೈಂಗಿಕ ಭಾವನೆ]ಗಳ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ದೇಹ ಹುಡುಗ ಅನ್ನುತ್ತೆ, ಮನಸ್ಸು ಹುಡುಗಿ ಅನ್ನುತ್ತೆ..... ಒಂದು ಕ್ಷಣ ನಿಮ್ಮ ಮನಸ್ಸಿನಲ್ಲಿ ಈ ಸ್ಥಿತಿ ಕಲ್ಪಿಸಿಕೊಳ್ಳಿ.. ಎಂಥ ನರಕ ಅಲ್ವೇ? ಹಾಗಂತ ಅದು ಅವರ ತಪ್ಪಲ್ಲವಲ್ಲ. ನನಗೆ ಸಿಹಿತಿಂಡಿ ಇಷ್ಟ... ನಿಮಗೆ ಖಾರತಿಂಡಿ ಇಷ್ಟ..ನನಗೆ ಹಸಿರುಬಣ್ಣ ಇಷ್ಟ.. ನಿಮಗೆ ಹಳದಿ ... ಅನ್ನುವಷ್ಟೇ ಸರಳವಾದ ಮನಸ್ಸಿನ ವೈವಿಧ್ಯತೆ ಇದು. ಆದರೆ ನಮ್ಮ ವ್ಯವಸ್ಥೆಯಲ್ಲಿ ಅವರ ಇಷ್ಟಗಳಿಗೆ ಬೆಲೆ ಇಲ್ಲ. ತ್ರಿನೇತ್ರಾಳ ತಂದೆ-ತಾಯಿ, ಕುಟುಂಬದವರು ಇದನ್ನು ಒಪ್ಪಿಕೊಂಡು ಅವಳಿಗೆ ಜೀವನ ಕೊಟ್ಟರು. ಆದರೆ ಎಷ್ಟು ಜನರಿಗೆ ಈ ಭಾಗ್ಯವಿದೆ? ಮನೆಯಲ್ಲಿ ಅವರುಗಳು ಶಾಪಗ್ರಸ್ತರು.. ಶಾಲೆಯಲ್ಲಿ ಹಾಸ್ಯದ ವಸ್ತುಗಳು, ಮುಂದೆ ಅವರ ಜೊತೆ ಅವರ ಹೆಂಡತಿ/ಗಂಡನನ್ನೂ ಮದುವೆ ಎಂಬ ಭೀಕರ ನರಕಕ್ಕೆ ತಳ್ಳುವ ಜನ ನಾವು!! ಇದು ಯಾವುದೇ ರೀತಿಯ ಕಾಯಿಲೆ ಅಲ್ಲ.. ಸದ್ಯಕ್ಕೆ ಇದಕ್ಕೆ ಕಾರಣಗಳು ತಿಳಿದಿಲ್ಲ...ಮಗು ಹುಟ್ಟುವ ಮುಂಚೆ ಸ್ಕಾನಿಂಗ್ ನಲ್ಲಿ ಇದು ತಿಳಿಯುವುದಿಲ್ಲ. ನಮ್ಮ ನಿಮ್ಮಂತೆ ಓದಿ, ಕೆಲಸಕ್ಕೆ ಸೇರಿ, ಅವರ ಮನಸ್ಸಿಗೆ ಸೂಕ್ತವಾದ ಸಂಗಾತಿಯ ಜೊತೆ ಬದುಕುವುದನ್ನು ಮಾತ್ರ ಕೇಳುವ ಅವರಿಗೆ ನಮ್ಮ ದೇಶದ ಕಾನೂನಿನಲ್ಲೂ ರಕ್ಷಣೆ ಇಲ್ಲ!! ಇರಲಿ... ಇವತ್ತಲ್ಲ ನಾಳೆ ನಾವು ಖಂಡಿತ ಬದಲಾಗುತ್ತೇವೆ.. ಯಾಕೆಂದರೆ ಪರಿವರ್ತನೆ ಜಗದ ನಿಯಮ ಅನ್ನೋ ನಿತ್ಯಸತ್ಯದಲ್ಲಿ ನನಗೆ ಇನ್ನಿಲ್ಲದ ನಂಬಿಕೆ. ಈ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ತ್ರಿನೇತ್ರಾಳಲ್ಲಿ ನಿಸ್ಸಂಕೋಚವಾಗಿ ಕೇಳಬಹುದು. ಭಾರತದಲ್ಲಿ ಸದ್ಯಕ್ಕೆ ಡೆಲ್ಲಿ-ಮುಂಬೈನಲ್ಲಿ ಲಿಂಗ ಪರಿವರ್ತನೆಯ ಕೆಲ ಆಸ್ಪತ್ರೆಗಳಿವೆ. ಆದರೆ ಹೊರದೇಶಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳಿವೆ. ಲಿಂಗ ಪರಿವರ್ತನೆಗೆ ವಯಸ್ಸಿನ ನಿರ್ಬಂಧ ಇಲ್ಲ. 18 ತುಂಬಿದ್ದರೆ ಆ ವ್ಯಕ್ತಿಯ ಒಪ್ಪಿಗೆ ಸಾಕು. ಕಿರಿಯರಿಗೆ ತಂದೆ-ತಾಯಿಯ ಸಹಿ ಬೇಕು . You can listen to Ted talk of Trinetraa in this link. https://www.youtube.com/watch?v=VRKiCpcJ-ag&fbclid=IwAR0il0B-kQ7YnzFU2b2KFQnRnT352AMqqkL1Nn2VOx68oQkE__FhpXOUxEU https://timesofindia.indiatimes.com/city/bengaluru/trinetra-set-to-be-ktakas-first-transwoman-medico/articleshow/68768637.cms?fbclid=IwAR0CiJMyDoTI98n6AI7GW28BU7XhLwOQIFA9eGPKDMgi1bOJKsmzfkJoqsE

Tuesday, 2 October 2018

Abolishing Section 497 - Green signal to adultery???

Recently India was ATTACKED by none other than supreme court .. Yes There were few judgments like abolishing article 377, 497 and opening the doors of temple to all females…. OMG!!!… few felt like glorious Indian culture breathed its last!! No problem… each one has the right to have opinions. But when I spoke to my student Sushmitha Viswanathan currently a law student, I was surprised at the way the media interprets the news!! First let us see what does Section 497 in The Indian Penal Code says.. Adultery. —Whoever has sexual intercourse with a person who is and whom he knows or has reason to believe to be the wife of another man, without the consent or connivance of that man, such sexual intercourse not amounting to the offence of rape, is guilty of the offence of adultery, and shall be punished with imprisonment of either description for a term which may extend to five years, or with fine, or with both. In such case the wife shall not be punishable as an abettor. So women are not prosecuted for adultery, only men are. It doesn’t punish women because It treats woman as property of husband . If husband’s possession is used by some random person without his permission, that person shall be punished . i.e. a person having intercourse with someone else’s wife without that person’s consent , will be sent to jail because he has used another man’s property without asking him. But if he takes permission then it is not crime of adultery. So consent of husband is most important here. [ see second line] . However if wife has not consented then it is called as rape. Also it gives permission to the husband to have intercourse with any unmarried woman or a widow. Because adultery is held only against married woman . This law is silent about unmarried woman or a widow, because they are not anyone’s property . women become just possessions when they get married!! So we need a better law which treats men and women alike, punishes them alike or does not punish them alike. But court never said women can happily engage in to multiple relationships .There are other sections to handle the issues which arise due to adultery ….Only this section is invalid now. ಕೆಲ ದಿನಗಳ ಹಿಂದೆ ನಮ್ಮ ದೇಶದಲ್ಲಿ ಆಗಬಾರದ್ದು ಆಗಿ ಹೋಯ್ತು..... “ಸಂಸ್ಕೃತಿ, ವೈವಿಧ್ಯತೆ ಮಣ್ಣುಪಾಲಾಯ್ತು.. ವ್ಯಭಿಚಾರ-ಸಲಿಂಗಕಾಮಕ್ಕೆ ರಾಜಮರ್ಯಾದೆಯ ಸ್ವಾಗತ ಸಿಕ್ತು..ಅದೂ ಯಾರಿಂದ ?? ಸುಪ್ರೀಂ ಕೋರ್ಟ್ ನಿಂದ!!” ಅಂತ ಎಲ್ಲೆಲ್ಲೂ ತಲ್ಲಣ ಸೃಷ್ಟಿಯಾದ್ದು ನಿಮಗಿನ್ನೂ ನೆನಪಿರಬಹುದು ಅಲ್ವೇ....ಪತ್ರಿಕೆಗಳಲ್ಲಿ ಓದಿದಾಗ Section 497 ವಿಚಾರದಲ್ಲಿ ನಂಗೂ ಒಂದು ಕ್ಷಣ ಇದೇನಪ್ಪ ಹೀಗೆ.. ಅಂತ ಅನಿಸಿದಾಗ ಈಗ ಕಾನೂನು ಓದುತ್ತಿರುವ ನನ್ನ ಹಳೆ ಸ್ಟೂಡೆಂಟ್ ಸುಶ್ಮಿತಾಗೆ ಫೋನಾಯಿಸಿದೆ.. ಓ.. ಹೀಗಾ ಇದು ಅಂತ ಸತ್ಯ ಗೊತ್ತಾದ ಅನಿಸಿದ್ದು ಮಾಧ್ಯಮಗಳು ಇಂಥ ಸೂಕ್ಷ್ಮ ವಿಚಾರಗಳನ್ನು ಪ್ರಕಟಿಸುವಾಗ ಸ್ವಲ್ಪ ಹುಷಾರಾಗಿ ಪದಗಳನ್ನು ಬಳಸಬೇಕು. ಜನರ ಗಮನ ಸೆಳೀಬೇಕು ಅಂತ ಸತ್ಯದ ಸಮಾಧಿ ಮೇಲೆ ಸುಳ್ಳಿನ ಅರಮನೆ ಕಟ್ಟೋದನ್ನ ನಿಲ್ಲಿಸಬೇಕು... Section 497 ವ್ಯಭಿಚಾರದ ವ್ಯಾಖ್ಯಾನವನ್ನು ಈ ರೀತಿ ಕೊಡುತ್ತದೆ. “ ಒಬ್ಬ ಹೆಂಗಸು ಇನ್ನೊಬ್ಬನ ಪತ್ನಿ ಎಂದು ತಿಳಿದಿದ್ದರೂ, ಆಕೆಯ ಪತಿಯ ಒಪ್ಪಿಗೆ ಇಲ್ಲದೆ , ಆಕೆಯ ಜೊತೆ ಲೈಂಗಿಕ ಸಂಬಂಧವನ್ನು ಒಬ್ಬ ಗಂಡಸು ಹೊಂದಿದ್ದರೆ ಮತ್ತು ಇದಕ್ಕೆ ಆಕೆಯ ಒಪ್ಪಿಗೆ ಇದ್ದರೆ ಅದನ್ನು ವ್ಯಭಿಚಾರ ಎಂದು ಪರಿಗಣಿಸಲಾಗುವುದು. ಲೈಂಗಿಕ ಸಂಬಂಧವನ್ನು ಹೊಂದಿದ ಗಂಡಸಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ಆದರೆ ಲೈಂಗಿಕ ಸಂಬಂಧವನ್ನು ಹೊಂದಿರುವ ಆ ಹೆಂಗಸನ್ನು ವ್ಯಭಿಚಾರಕ್ಕೆ ಕೇವಲ ಸಹಾಯ ಮಾಡಿದವಳು ಎಂದು ಪರಿಗಣಿಸಲಾಗುವುದು ಮತ್ತು ಆಕೆಗೆ ಯಾವ ಶಿಕ್ಷೆಯೂ ಇರುವುದಿಲ್ಲ” ಅಂದರೆ ವ್ಯಭಿಚಾರದಲ್ಲಿ ಪಾಲ್ಗೊಂಡ ಗಂಡಿಗೆ ಶಿಕ್ಷೆ ಮತ್ತು ಹೆಣ್ಣಿಗೆ ವಿನಾಯಿತಿ! ಇಲ್ಲಿ ಹೆಣ್ಣಿಗೆ ಶಿಕ್ಷೆ ಯಾಕಿಲ್ಲ ಎಂದರೆ ಮದುವೆಯಾದ ಹೆಣ್ಣು ತನ್ನ ಗಂಡನ ಸೊತ್ತು. ಅದು ಹೇಗೆ ಅಂದ್ರೆ ಉದಾಹರಣೆಗೆ ಒಬ್ಬ ಗಂಡಸಿಗೆ ಸೇರಿದ ಒಂದು ವಸ್ತುವನ್ನು ಇನ್ನೊಬ್ಬ ಗಂಡು ಅನುಮತಿಯಿಲ್ಲದೆ ಉಪಯೋಗಿಸುತ್ತಾನೆ. ಆಗ ಆ ಇನ್ನೊಬ್ಬ ಗಂಡಿಗೆ ಶಿಕ್ಷೆಯಾಗಬೇಕು ಸರಿ ತಾನೇ? ಆ ವಸ್ತುವನ್ನು ಉಪಯೋಗಿಸಲು ಅದರ ಮಾಲೀಕನ ಒಪ್ಪಿಗೆ ಬೇಕೇ ಬೇಕು... ಅಲ್ವೇ? ಹಾಗೆಯೇ ಇಲ್ಲಿಯೂ ಒಬ್ಬನ ಪತ್ನಿ ಅವನ ಅನುಮತಿ ಇಲ್ಲದೆ ಇನ್ನೊಬ್ಬ ಗಂಡಿನ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಆ ಗಂಡಿಗೆ Section 497 ಶಿಕ್ಷೆ ವಿಧಿಸುತ್ತದೆ. ಆದರೆ ಆ ಹೆಂಗಸಿಗೆ ಯಾವ ಶಿಕ್ಷೆಯೂ ಇಲ್ಲ !! ಆದರೆ ಈ ಸಂಬಂಧಕ್ಕೆ ಗಂಡನ ಒಪ್ಪಿಗೆ ಇದ್ದರೆ ಅದು ವ್ಯಭಿಚಾರ ಅಲ್ಲ. ಆದ್ದರಿಂದ ಗಂಡನ ಒಪ್ಪಿಗೆ ಅತಿ ಮುಖ್ಯ ಅಂತಾಯ್ತು!! ಜೊತೆಗೆ ಯಾವುದೇ ಗಂಡಸು ಅವಿವಾಹಿತ ಹಾಗು ವಿಧವೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಅವಕಾಶ ಮಾಡಿ ಕೊಡುತ್ತದೆ. ಯಾಕೆ ಹೇಳಿ... ಈ ಮಹಿಳೆಯರಿಗೆ ಒಡೆಯ ಎನಿಸಿಕೊಳ್ಳುವವರು ಇರುವುದಿಲ್ಲ. ಇಂಥ ವಿರೋಧಾಭಾಸಗಳಿದ್ದುದರಿಂದ ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತು. ಯಾಕೆಂದರೆ ನಮಗೆ ಗಂಡು ಹೆಣ್ಣನ್ನು ಸಮಾನವಾಗಿ ಕಾಯುವ-ಶಿಕ್ಷಿಸುವ ಅಥವಾ ಕ್ಷಮಿಸುವ ಕಾನೂನು ಮಾತ್ರ ಬೇಕು ಅಲ್ಲವೇ? ಹಾಗಂತ ನಮ್ಮ ಮಾಧ್ಯಮಗಳು ವರದಿ ಮಾಡಿದಂತೆ ಇನ್ನು ಹೆಂಗಸರೂ ಆರಾಮವಾಗಿ ಯಾರ ಜೊತೆ ಬೇಕಾದರೂ ಲೈಂಗಿಕ ಸಂಬಂಧ ಹೊಂದಬಹುದೇ? ಖಂಡಿತ ಇಲ್ಲ... ಆ ವಿಚಾರಗಳಿಗೆ ಬೇರೆ ಕಾನೂನುಗಳಿವೆ.. ಶಿಕ್ಷೆಯೂ ಇದೆ. ಕೇವಲ Section 497 ಇರುವುದಿಲ್ಲ ಅಷ್ಟೇ... ರೋಚಕ ಸುದ್ದಿಗಳನ್ನು ಬೇಜವಾಬ್ದಾರಿಯಿಂದ ಪ್ರಕಟಿಸುವ ಮಾಧ್ಯಮಗಳ ಬಾಯಿ ಮುಚ್ಚಿಸುವ, ರೋಚಕ ಸುದ್ದಿಗಳನ್ನು ಕಣ್ಣು ಮುಚ್ಚಿ ನಂಬುವ ಜನರ ಕಣ್ ತೆರೆಸುವ ಕಾನೂನು ಎಂದು ಬರುವುದೋ?

Tuesday, 31 July 2018

ಬನ್ರಿ.... ಜರ್ಮನಿಯ ಮನಿಗ ........


                                                          
ನಮ್ ಥರ ಸಂಸ್ಕೃತಿ, ಕುಟುಂಬವ್ಯವಸ್ಥೆ ಪ್ರಪಂಚದಲ್ಲೆಲ್ಲೂ ಇಲ್ಲ ಬಿಡಿ... ಫಾರಿನ್ ನಲ್ಲಿ ಮಾತೆತ್ತಿದರೆ ಡೈವೊರ್ಸು, ಮಕ್ಕಳಂತೂ ಕುಲಗೆಟ್ಟು ಹೋಗಿರ್ತಾರೆ....” ಇಂಥ ಮಾತುಗಳನ್ನು ನಾನು ಕೇಳಿದಾಗೆಲ್ಲ ಒಮ್ಮೆ ಒಂದು ಫಾರಿನ್ ಕುಟುಂಬದ ಜತೆ  ಸ್ವಲ್ಪ ದಿನ ಇದ್ದು ಬರಬೇಕು ...ಇದೆಲ್ಲ ನಿಜವಾ ಅಂತ ನೋಡ್ಬೇಕು.. ಅಂತ ಅನ್ಕೋತಿದ್ದೆ. ಅಂಥ ಅಪೂರ್ವ ಅವಕಾಶ ಕೊನೆಗೂ ನಂಗೆ ಸಿಕ್ತು. ಜರ್ಮನಿಯ ಮ್ಯುನಿಕ್ ನಗರದ ಸಮೀಪದ ಲಾಫ್ ಅನ್ನೋ ಸಣ್ಣ ಊರಿನ ಶಾಲೆಯೊಂದರ ಜೊತೆ ನಮ್ಮ ಶಾಲೆಯವರು ನಡೆಸುವ ಸ್ಟೂಡೆಂಟ್ ಎಕ್ಸ್ ಚೇಂಜ್ ಪ್ರವಾಸಕ್ಕೆ ಹೋಗುವ ೨೯[ ೮,೯,೧೦ನೇ ತರಗತಿಯ] ವಿದ್ಯಾರ್ಥಿಗಳ ಜೊತೆ ಈ ವರ್ಷ ನನ್ನನ್ನು ಕಳಿಸಿದ್ದರು. ಆ ಜರ್ಮನ್ ಶಾಲೆಯಿಂದ ಭಾರತ ಪ್ರವಾಸಕ್ಕೆ ಬರಲಿರುವ ೨೯ ವಿದ್ಯಾರ್ಥಿಗಳ ಮನೆಯಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಜೊತೆ ಬರಲಿರುವ ಶಿಕ್ಷಕರ ಮನೆಯಲ್ಲಿ ನಾನು ೧೫ ದಿನ ಇರಬೇಕು. ಅವರ ಜೊತೆ ನಿತ್ಯಜೀವನದಲ್ಲಿ[ಊಟ-ಅಡುಗೆ-ಶಾಲೆ-ಪಾಠ-ಸುತ್ತಾಟ ಇತ್ಯಾದಿ] ಪಾಲ್ಗೊಳ್ಳಬೇಕು. ಮುಂದೆ ಅಕ್ಟೋಬರ್ ತಿಂಗಳಲ್ಲಿ ಆ ೨೯ ವಿದ್ಯಾರ್ಥಿಗಳು ಮತ್ತವರ ಶಿಕ್ಷಕರು ೧೫ ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಾಗ ನಮ್ಮ ಮನೆಗಳಲ್ಲಿ ಆತಿಥ್ಯ ಕೊಡಬೇಕು. ನಮ್ಮ ಸಂಸ್ಕೃತಿ, ಶಾಲೆಯ ಪರಿಚಯ ಮಾಡಿಕೊಡಬೇಕು. ಪರಸ್ಪರ ಅಪರಿಚಿತ ದೇಶ-ಸಂಸ್ಕೃತಿಗಳನ್ನು ಬೆಸೆಯಲು ಶಾಲೆಗಳು ನಡೆಸುವ ಅತ್ಯುತ್ತಮ ಪ್ರಯತ್ನವಿದು.

’ ತನು-ಮನ-ಆತ್ಮ.... ’ [ Body-Mind-Soul] ಎಂಬುದು ನಮ್ಮ ಈ ಕಲಿಕಾ ಪ್ರವಾಸದ ಮುಖ್ಯ ವಿಷಯವಾಗಿತ್ತು. ಉಪನಿಷತ್ತಿನಲ್ಲಿ ವರ್ಣಿತವಾಗಿರುವ ನಮ್ಮ ದೇಹದ ಪಂಚಕೋಶಗಳ ಪರಿಚಯ[ಅನ್ನ-ಮನೋ-ಜ್ಞಾನ-ವಿಜ್ಞಾನ-ಆನಂದಮಯ ಕೋಶಗಳು]  , ಭಾರತೀಯ ಶಾಸ್ತ್ರೀಯ ಸಂಗೀತ -ನೃತ್ಯಪ್ರಕಾರಗಳು ಮತ್ತು ಭಾರತೀಯ ಶಿಲ್ಪಕಲೆ ಈ ಮೂರು ಶೀರ್ಷಿಕೆಗಳಡಿಯಲ್ಲಿ ಎರಡು ಗಂಟೆಗಳ ಕಾರ್ಯಕ್ರಮವನ್ನು ಆ ಶಾಲೆಯಲ್ಲಿ ನಮ್ಮ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕೊನೆಗೆ ನಾವು ಇಲ್ಲಿಂದ ಒಯ್ದಿದ್ದ ಉಂಡೆ-ಬರ್ಫಿ-ಮೈಸೂರುಪಾಕ್ -ಚಕ್ಕುಲಿ-ಕೋಡುಬಳೆ-ಓಂಪುಡಿಗಳನ್ನು ಪ್ರೇಕ್ಷಕರಿಗೆಲ್ಲ ಹಂಚಿದೆವು. ಅಚ್ಚರಿ-ಮೆಚ್ಚುಗೆಯ ಮಹಾಪೂರವೇ ನಮ್ಮ ಕಡೆಗೆ ಹರಿದು ಬಂತು.
ಆ ಶಾಲೆಯ ಗಣಿತದ ಟೀಚರ್ ಶ್ರೀಮತಿ ಹೈಕೆ ಖ್ರಾಮೆಸ್ ಅವರ ಮನೆಯಲ್ಲಿ ನನ್ನ ವಾಸ. ಗಂಡ-ಹೆಂಡತಿ, ವಯಸ್ಸಿಗೆ ಬಂದ ಮೂರು ಮಕ್ಕಳಿರುವ ಆ ಮನೆಯಲ್ಲಿ ಇದ್ದ ಮೇಲೆ ವಿದೇಶೀ ಸಮಾಜದ ಬಗ್ಗೆ ನಮ್ಮಲ್ಲಿ ಎಷ್ಟು ತಪ್ಪು ಕಲ್ಪನೆಗಳಿವೆ ಅನ್ನೋ ಸತ್ಯ ಗೊತ್ತಾಯ್ತು. ಮನೆಯಲ್ಲಿ ಸಮಾನತೆ - ಪರಸ್ಪರ ಗೌರವ  ಅನ್ನುವುದನ್ನು ಸೊಗಸಾಗಿ ರೂಢಿಸಿಕೊಂಡಿವೆ ಅಲ್ಲಿನ ಹೆಚ್ಚಿನ ಕುಟುಂಬಗಳು. ಹೆಂಡತಿ ಕೆಲಸಕ್ಕೆ ಹೋಗುತ್ತಿರಲಿ-ಬಿಡಲಿ, ಗಂಡ ತನ್ನನ್ನು ತಾನು ನೋಡಿಕೊಳ್ತಾನೆ. ಮಕ್ಕಳು ಬುದ್ಧಿ ಬರುತ್ತಿದ್ದಂತೆಯೇ ತಂದೆ- ತಾಯಿಯ ಜೊತೆ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಮನೆಯ ಎಲ್ಲ ಕೆಲಸಗಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ನಾನಿದ್ದ ಆ ಮನೆಯಲ್ಲಿ ಭಾನುವಾರವೂ ಎಲ್ಲರೂ ಬೇಗನೇ ಎದ್ದರು. ದೊಡ್ಡ ಮಗ ಬಾತ್ರೂಂ- ಟಾಯ್ಲೆಟ್ -ಗಾರ್ಡನ್ ಗಳನ್ನು ಸ್ವಚ್ಛಗೊಳಿಸಿದ, ಎರಡನೆಯವನು ಮನೆ ಮತ್ತು ಎಲ್ಲರ ಕಾರುಗಳನ್ನು ಶುಭ್ರಗೊಳಿಸಿದ. ಮಗಳು ಎಲ್ಲರ ಬಟ್ಟೆಗಳನ್ನು ವಾಶಿಂಗ್ ಮಿಶ್ ನ್ನಿಗೆ ಹಾಕಿ, ತಂದೆಯ ಜೊತೆ ಅಡುಗೆಗೆ ನಿಂತಳು. ಗಂಡ ಪಾತ್ರೆಗಳನ್ನು ಮಿಶನ್ನಿಗೆ ಹಾಕಿ ಬೆಳಗಿನ ತಿಂಡಿ-ಮಧ್ಯಾಹ್ನದ ಊಟವನ್ನು ಸಿದ್ಧಗೊಳಿಸುವ ಹೊತ್ತಿಗೆ ಪಾತ್ರೆಗಳು ತೊಳೆದು ಸಿದ್ಧವಾದವು. ಅವನ್ನೆಲ್ಲ ಒಪ್ಪವಾಗಿ ಆಯಾಯ ಜಾಗದಲ್ಲಿ ಇಟ್ಟ . ನನ್ನ ಶಿಕ್ಷಕಿ ಗೆಳತಿ ಹಿಂದಿನ ದಿನ ತಂದಿಟ್ಟಿದ್ದ ಮನೆ ಸಾಮಾನು ತರಕಾರಿ ಹಣ್ಣುಗಳನ್ನು ಜೋಡಿಸಿ ಇಟ್ಟು ಎಲ್ಲರ ಬಟ್ಟೆಗಳಿಗೆ ಇಸ್ತ್ರಿ ಹಾಕಿದರು. ನಂತರ ಎಲ್ಲರೂ ಸ್ನಾನ ಮಾಡಿ ಒಟ್ಟಿಗೆ ಕೂತು ತಿಂಡಿ ತಿನ್ನುವುದನ್ನು ನೋಡುತ್ತ ನಾನು ಮೂಕಳಾದೆ.

ದಿನವೂ ರಾತ್ರಿಯ ಊಟಕ್ಕೆ ಆ ಊರಿನ ಯಾವುದಾರೊಂದು ಮನೆಯಿಂದ ನನಗೆ ಆಹ್ವಾನ ಇರುತ್ತಿತ್ತು. ರಾತ್ರಿ ಊಟ ಮುಗಿದ ಮೇಲೆ ಹೆಂಡತಿ ಒರೆಸು-ತೊಳೆ-ಬಳಿ...,  ಗಂಡ ಅಡುಗೆಯ ಬಗ್ಗೆ ನಾಲ್ಕು ಕಮೆಂಟ್ ಮಾಡಿ... ,ಕಾಲು ಚಾಚಿ ಟಿ.ವಿ ನೋಡುವ ನಮ್ಮ ಆದರ್ಶ ಸಂಸಾರಗಳು ಎಲ್ಲೂ ಕಾಣಲಿಲ್ಲ. ನಿಮಿಷ ಮಾತ್ರದಲ್ಲಿ ಎಲ್ಲರೂ ಸೇರಿ ಅಡುಗೆಮನೆಯನ್ನು ಓರಣವಾಗಿಸಿ, ಹರಟೆಗೆ ಸಜ್ಜಾಗುತ್ತಿದ್ದರು. ರಾತ್ರಿ ಹತ್ತು ಗಂಟೆಗೆ ಸೂರ್ಯಾಸ್ತವಾಗುತ್ತಿದ್ದುದರಿಂದ ಕೆಲ ಬೀದಿಗಳ ಎಲ್ಲ ಮನೆಗಳವರು ಕುರ್ಚಿಗಳನ್ನು ಹಾಕಿಕೊಂಡು ಒಟ್ಟಾಗಿ ಹರಟುವ ಅದ್ಭುತ ದೃಶ್ಯಗಳೂ ಕಂಡವು. ನಾನು ಹೋದ ಒಂದೆರಡು ಮನೆಗಳವರು ಡೈವೋರ್ಸ್ ಆದ ಏಕಾಂಗಿಗಳು. ಹಾಗಂತ ಗೋಳೋ ಅಂತ ಹಳೆಕತೆ ಹೇಳಿಕೊಳ್ಳದೇ ಮುಂದಿನ ಜೀವನದ ಬಗ್ಗೆ ನನ್ನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ವಯಸ್ಸಾದ ತಂದೆ-ತಾಯಿ ಮಕ್ಕಳ ಜೊತೆ ವಾಸಿಸುವ ಸಂಸ್ಕೃತಿ ಅಲ್ಲಿ ಇಲ್ಲ. ತಮ್ಮ ಕೈಲಾಗುವಷ್ಟು ದಿನ ಸ್ವತಂತ್ರವಾಗಿದ್ದು, ಹಾಸಿಗೆ ಹಿಡಿಯುತ್ತಿದ್ದಂತೆಯೇ ಸರಕಾರವೇ ನಡೆಸುವ ವೃದ್ಧಾಶ್ರಮಗಳಿಗೆ ಸೇರುತ್ತಾರೆ. ನನಗೆ ಇಬ್ಬರು ವೃದ್ಧರು ಸಿಕ್ಕಿದರು. ಅವರಿಗೆ ತಮ್ಮ ಸ್ವತಂತ್ರ ಜೀವನದ ಬಗ್ಗೆ ಸಂತೋಷ-ಹೆಮ್ಮೆ ಕಾಣಿಸಿತು. “ಯಾಕೆ  ಈ ಕಷ್ಟ..ಮಕ್ಕಳ ಮನೆಯಲ್ಲಿ ಇರಬಾರದೇ?” ಅಂತ ಒಬ್ಬರನ್ನು ಮಾತಿಗೆಳೆದೆ. ಹೇ ಲೇಡಿ..ಐ ಆಮ್ ಸ್ಟಿಲ್ ಸ್ಟಾಂಡಿಂಗ್ .. ನಾಟ್ ರೀಚಡ್ ದ ಗ್ರೇವ್ ಯೆಟ್[ ಗೋರಿ ಸೇರಿಲ್ಲ.. ನನ್ನ ಕಾಲ ಮೇಲೆ ನಿಂತಿದೀನಿ.. ಕಾಣ್ತಾ ಇಲ್ವೇನಮ್ಮ....] ಅನ್ನೋ ಉತ್ತರ ರಪ್ಪಂತ ಹೊಡೀತು.  

ಹೆಚ್ಚಿನ ಮನೆಗಳಲ್ಲಿ ಯೋಗಾಭ್ಯಾಸವನ್ನು ಕಂಡು ಅಚ್ಚರಿಯಾಯಿತು. ಸಂಸ್ಕೃತ ಕಲಿಯಲು ಮಾರ್ಗದರ್ಶನ  ಮತ್ತು  ಬಿಕೆ ಎಸ್ ಅಯ್ಯಂಗಾರರ ಜರ್ಮನ್ ಭಾಷೆಯ ಪುಸ್ತಕವನ್ನು ನನಗೆ ತೋರಿಸಿ, ಸಂಸ್ಕೃತ ಪದಗಳ ಉಚ್ಚಾರಣೆಯನ್ನು ಸರಿಪಡಿಸುವಂತೆ ಕೇಳಿಕೊಂಡಾಗ ಹೆಮ್ಮೆಯಿಂದ ಹೃದಯ ತುಂಬಿ ಬಂತು. ಭಾರತೀಯ ನೃತ್ಯ-ಸಂಗೀತ-ಅಡುಗೆಯ ಬಗ್ಗೆ ಕೊನೆಯಿಲ್ಲದ ಪ್ರಶ್ನೆಗಳು. ನಮ್ಮ ಬಹುಭಾಷಾ ಪಾಂಡಿತ್ಯ, ಇಂಗ್ಲೀಷ್ ಜ್ಞಾನವನ್ನು ಎಷ್ಟು ಹೊಗಳಿದರೂ ಸಾಲದು ಅವರಿಗೆ... ಶಬ್ದ ಯೋಗ, ವಿನ್ಯಾಸ ಯೋಗ, ಫ್ಲೋ ಯೋಗ ಹೀಗೆ ಯೋಗದ [ವ್ಯಾಪಾರೀ] ಮುಖಗಳ ದರ್ಶನವೂ ಆಯಿತು. ಈ ಯೋಗ ಶಿಕ್ಷಕರು ಮೆಕ್ಸಿಕೋ, ಹಾಲೆಂಡ್ ಮುಂತಾದೆಡೆ ಕಲಿತವರಂತೆ!!
ಅವರ ನಿತ್ಯಾಹಾರವಾದ ಮೊಟ್ಟೆ,ಮಾಂಸ ತಿನ್ನದ, ಬೀರು,ವೈನು ಕುಡಿಯದ ನಾನೊಬ್ಬಳು ಅವರಿಗೆ  ವಿಚಿತ್ರ ಜೀವಿ! ಹಣ್ಣು-ತರಕಾರಿ, ಮೊಸರು,ಜ್ಯೂಸು, ಸಿರಿಧಾನ್ಯ ಅಡುಗೆಗಳಿಂದ ನನ್ನ ತಟ್ಟೆಯನ್ನು ತುಂಬಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದರು. ಸೂರ್ಯಾಸ್ತವಾಗುತ್ತಿದ್ದಂತೆ ದೀಪ ಹಚ್ಚುವ ಕ್ರಮವನ್ನು ಅನೇಕ ಮನೆಗಳಲ್ಲಿ ನೋಡಿದೆ. ಮನೆಗೆ ಐಶ್ವರ್ಯ-ಸಂತೋಷ ದೇವತೆ ಬರಲಿ ಅಂತ ಅವರ ಉದ್ದೇಶವಂತೆ. ಒಬ್ಬಾಕೆ ಎರಡು ದೀಪ ಹಚ್ಚಿದ್ದಳು . ಯಾಕೆ? ಅಂದೆ. ಒಂದು ಅವರ ಮನೆಗೆ. ಇನ್ನೊಂದು ಅಲ್ಲೆಲ್ಲೋ ದೂರ ಇರುವ ಅವಳ ವಯಸ್ಸಾದ ಅಪ್ಪ ಅಮ್ಮನ ಮನೆಗಂತೆ... ಅವರಿಗೆ ಮೈಯಲ್ಲಿ ಶಕ್ತಿ ಇಲ್ಲ, ಮರೆವು ಬೇರೆ.... ಅದಕ್ಕೆ ಅವರಿಗೋಸ್ಕರ ನಾನೇ ಹಚ್ತೀನಿ ಅಂದ್ಲು. ಏನೇ ಹೇಳಿ... ಎಲ್ಲಿ ಹೋದ್ರೂ ಹೆಣ್ಮಕ್ಕಳ ತವರಿನ ಮೋಹ ಮಾತ್ರ ಒಂದೇ ಥರ ಅನಿಸಿತು.....
ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡಾ ಕುತೂಹಲಕಾರಿ. ೪ನೇ ತರಗತಿಯವರೆಗೆ ಎಲ್ಲ ಮಕ್ಕಳೂ ಒಂದೇ ಶಾಲೆಯಲ್ಲಿ ಓದುತ್ತಾರೆ..ಕೊನೆಯಲ್ಲಿ ಪರೀಕ್ಷೆ ನಡೆಸಿ ಮಕ್ಕಳ ಕೌಶಲಗಳನ್ನು ನಿರ್ಧರಿಸುತ್ತಾರೆ. ಐದರಿಂದ ಹನ್ನೆರಡನೇ ತರಗತಿಯವರೆಗಿನ ಶಿಕ್ಷಣಕ್ಕೆ ಮೂರು ಥರದ ಶಾಲೆಗಳಿವೆ-೧. ಲಾಜಿಕಲ್ ಥಿಂಕಿಂಗ್ ಇರುವವರಿಗೆ ,೨. ಕಲೆ-ಆಟಗಳಲ್ಲಿ ಜಾಣರಿಗೆ ೩. ಕಲಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದವರಿಗೆ. ಮಕ್ಕಳು ಈ ಮೂರು ಶಾಲೆಗಳಲ್ಲಿ ತಮ್ಮ ತಮ್ಮ ಕೌಶಲಕ್ಕೆ ಅನುಗುಣವಾಗಿ ಐದನೇ ತರಗತಿಗೆ ಸೇರುತ್ತಾರೆ. ಅಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ವಿದ್ಯಾಭ್ಯಾಸ ಪಡೆಯುತ್ತಾರೆ. ಮಧ್ಯೆ ಮಕ್ಕಳ ಆಸಕ್ತಿಗಳು ಬದಲಾದರೆ ಶಾಲೆ ಬದಲಿಸುವ ಅವಕಾಶ ಇದೆ. ಕೆಲ ಪಾಲಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರುವುದು, ಆ ನಾಲ್ಕನೇ ಕ್ಲಾಸಿನ ಶಿಕ್ಷಕರ ಜೊತೆ ಮುನಿಸಿಕೊಳ್ಳುವುದು ಮಾಡ್ತಾರಂತೆ. ಆದರೆ ೧೨ನೇ ತರಗತಿವರೆಗಿನ ಸಂಪೂರ್ಣ ಉಚಿತ ಶಿಕ್ಷಣ  ಸರಕಾರದ ಬಿಗಿಮುಷ್ಟಿಯಲ್ಲಿರುವುದರಿಂದ , ಭ್ರಷ್ಟಾಚಾರ ಕಮ್ಮಿ ಇರುವುದರಿಂದ ಹೆಚ್ಚು ಗಲಾಟೆ ಆಗುವುದಿಲ್ಲ ಎಂದರು ಅಲ್ಲಿನವರು. ನಾನು ಹೋದ ಶಾಲೆ ಪುಸ್ತಕ ಬ್ರಹ್ಮರ ಮೊದಲನೇ ವರ್ಗದ್ದು. ಅಲ್ಲಿ ವಿಜ್ಞಾನ-ಗಣಿತಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಗಮನಿಸಿದೆ.

ಹೆಚ್ಚಿನ ಎಲ್ಲ ಪಾಶ್ಚಾತ್ಯ ದೇಶಗಳಂತೆ ಇಲ್ಲೂ ಪಾಲಕರು ಮಕ್ಕಳನ್ನು ಸ್ವತಂತ್ರರನ್ನಾಗಿ ಬೆಳೆಸುತ್ತಾರೆ. ಅರೇಂಜ್ಡ್ ಮದುವೆಯ ಕಲ್ಪನೆಯೇ ಇಲ್ಲದಿರುವುದರಿಂದ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವ ಜವಾಬ್ದರಿಯೂ ಮಕ್ಕಳದ್ದೇ. ಆದ್ದರಿಂದ ಜಾತಕ -ಎತ್ತರ -ಮೈಬಣ್ಣ -ವಯಸ್ಸು ಈ ವಿಚಾರಗಳಿಗಿಂತ ಪರಸ್ಪರರ ವಿದ್ಯಾಭ್ಯಾಸ-ಸಂಪಾದನೆ-ಆಸಕ್ತಿಗಳಿಗೆ ಯುವಜನರು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಕೆಲವೊಮ್ಮೆ ತಪ್ಪು ಆಯ್ಕೆಗಳು ನಡೆಯುವುದು, ಮೋಸ ಹೋಗುವುದು, ದುಶ್ಚಟಗಳು, ಅಹಂಕಾರ ಇತ್ಯಾದಿ ಸಮಸ್ಯೆಗಳು  ಯುವಕುಟುಂಬಗಳನ್ನು ಬಾಧಿಸುತ್ತವೆ. ಆದ್ದರಿಂದ ಡೈವೋರ್ಸ್ ಗೆ ಸಾಮಾಜಿಕವಾಗಿ ಒಪ್ಪಿಗೆ ಇದೆ. ಹೆಚ್ಚು ತಲೆ ಕೆಡಿಸಿಕೊಳ್ಳದೇ ಇನ್ನೊಬ್ಬ ಸಂಗಾತಿಯನ್ನು ಹುಡುಕುತ್ತಾರೆ ಈ ಜನ. ನಿಜ... ಹೀಗಾದಾಗ  ಮಕ್ಕಳು ಜೀವನ ಅತಂತ್ರವಾಗುವುದೂ ಇದೆ. ಈ ಸಮಸ್ಯೆ ಅವರ ಸಮಾಜವನ್ನು ಕಾಡುತ್ತಿರುವುದು ನಿತ್ಯಸತ್ಯ.  


    
ಅಂತೂ ಮನೆ ವಾಸ, ಮ್ಯುನಿಕ್, ಆಲ್ಫ್ಸ್ ಪರ್ವತಗಳ ಪ್ರವಾಸ ಮುಗಿಸುವ ಹೊತ್ತಿಗೆ ಅನೇಕ ಹೊಸ ವಿಚಾರಗಳನ್ನು ಕಲಿತೆ. ನಮ್ಮ ವಿದ್ಯಾರ್ಥಿಗಳಂತೂ ಲೆಕ್ಕವಿಲ್ಲದಷ್ಟು ಅಮೂಲ್ಯ ಜೀವನ ಪಾಠಗಳನ್ನು ಕಲಿತರು. ನಿಜ ಹೇಳ್ಬೇಕು ಅಂದ್ರೆ .....ಫಾರಿನ್ ಟ್ರಿಪ್ ಎನ್ನುತ್ತಾ ಅತ್ಯಂತ ಉತ್ಸಾಹದಿಂದ ಜರ್ಮನಿಗೆ ಹೋದ ನಾವು, “ಧೂಳು-ಅವ್ಯವಸ್ಥೆಯ ನಡುವೆಯೂ ನಮ್ಮ ಭಾರತ ಎಷ್ಟು ಸುಂದರವಾಗಿದೆ !! ನಮ್ಮ ದೇಶ- ಸಂಸ್ಕೃತಿಯಲ್ಲಿ ಇನ್ನೂ ಕಲಿಯೋದು ಎಷ್ಟಿದೆ ಅಲ್ವಾ!!” ಎನ್ನುತ್ತ ಮರಳಿದೆವು.


Thursday, 3 May 2018

ಹೌದು....!! ನಾನೊಂದು ಪುಸ್ತಕ ಪ್ರಕಟಿಸಿದ್ದೇನೆ.
ಹಳ್ಳಿಯ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ನನಗೆ ಚಿಕ್ಕಂದಿನಿಂದಲೂ ನಮ್ಮ ಆಚರಣೆಗಳ ವಿಚಾರದಲ್ಲಿ ನಾನಾ ಪ್ರಶ್ನೆಗಳು ಕಾಡುತ್ತಿದ್ದವು. ಇದಕ್ಕೆಲ್ಲ ಕಾರಣ ತಿಳ್ಕೋಬೇಕು ಅನ್ನೋ ಕುತೂಹಲ - ಕೆಲವನ್ನು ಧಿಕ್ಕರಿಸಬೇಕು ಅನ್ನೋ ರೋಷ ಕೂಡಾ ಸದಾ ಇರುತ್ತಿತ್ತು. ಮುಂದೆ ಬೆಳಿತಾ ಬಂದಂತೆ ಎಲ್ಲವನ್ನೂ ಸಮಭಾವದಲ್ಲಿ ಸ್ವಿಕರಿಸೋ ಪ್ರಬುದ್ಧತೆ ಬೆಳೆಯಿತು. ಹೀಗಿರ್ಬೇಕಾದ್ರೆ ಕಳೆದ ವರ್ಷ ಇದೇ ಸಮಯಕ್ಕೆ ಪತ್ರಕರ್ತ ಶ್ರೀ ಉದಯ್ ಲಾಲ್ ಪೈ ಅವರ “ Why Am I a Hindu “ ಎಂಬ ಪುಸ್ತಕ ಓದಿದೆ. ನಮ್ಮ ಸನಾತನ ಧರ್ಮದ ತಿರುಳನ್ನು ಎಷ್ಟು ಸೊಗಸಾಗಿ ಪೈ ಅವರು ವಿವರಿಸಿದ್ದಾರಲ್ಲ ಅಂತ ಖುಷಿ ಆಗಿ ಇಡೀ ಕೃತಿಯನ್ನು ನನ್ನ ಕನ್ನಡ ಭಾಷೆಗೆ ಅನುವಾದಿಸಿದೆ.
47 ಅಧ್ಯಾಯಗಳ ಈ ಪುಸ್ತಕ “ ನಾನೇಕೆ ಒಬ್ಬ ಹಿಂದೂ?” ಅನ್ನೋ ಹೆಸರಲ್ಲಿ ಈಗ ಪ್ರಕಟವಾಗಿದೆ. ಬಹುರೂಪಿ ದೇವರು- ದೇವಾಲಯಗಳು- ನಮ್ಮ ಅರ್ಥಪೂರ್ಣ ಸಂಪ್ರದಾಯಗಳು– ಗೋತ್ರ- ಜಾತಕ – ಮದುವೆ- ನೈವೇದ್ಯ – ಪ್ರಸಾದ – ಆತ್ಮ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವೈಚಾರಿಕ ವಿವರಣೆ ಇಲ್ಲಿ ನಿಮಗೆ ಸಿಗುತ್ತದೆ. ಪೈ ಮತ್ತು ಅವರ ಓದುಗರ-ಮಿತ್ರರ ನಡುವಣ ಸಂಭಾಷಣೆಯ ರೂಪದಲ್ಲಿರುವ ಬರಹಗಳನ್ನು ಕನ್ನಡತನದ ಸುಗಂಧದೊಂದಿಗೆ ಅನುವಾದಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ನಿಮ್ಮ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇನೆ.
“ ಆಸಿಂಧು ಸಿಂಧು ಪರ್ಯಂತಾ ತಸ್ಯ ಚ ಭಾರತ ಭೂಮಿಕಾ, ಮಾತೃಭೂ ಪಿತೃಭೂಶ್ಚೈವ ಸ ವೈ ಹಿಂದುರಿತಿ ಸ್ಮೃತ:”. ಸಪ್ತ

 ಸಿಂಧುಗಳು ಮತ್ತು ಹಿಂದೂ ಮಹಾಸಾಗರದ ನಡುವೆ ಇರುವ ಭಾರತಭೂಮಿಯನ್ನು ತಂದೆ-ತಾಯ್ನೆಲ ಎಂದು ಯಾರು 

ಭಾವಿಸಿದ್ದಾನೋ ಅವನೇ ಹಿಂದೂ. ‘ಹಿಂದೂ’ ಪ್ರಜ್ಞೆಯನ್ನು ಎಷ್ಟು ಸರಳವಾಗಿದೆ ವಿವರಿಸುತ್ತಿದೆ ನೋಡಿ ಈ ಶ್ಲೋಕ.  

... ಹಿಂದೂ ಅನ್ನೋದು  ಒಂದು ಮಾನಸಿಕ ಸ್ಥಿತಿ- ಜೀವನ ಪದ್ಧತಿ- ಆತ್ಮಪ್ರಜ್ಞೆ- ಸ್ವಾತಂತ್ರ್ಯ, ಆತ್ಮವಿಶ್ವಾಸ  ... ಇನ್ನೂ ಏನೇನೋ..

.ಯಾಕೆಂದರೆ ಹಿಂದೂಧರ್ಮದಲ್ಲಿ ಯಾವುದೇ ನಿಯಮಗಳ ಹಂಗಿಲ್ಲ. ಅದು ಅನುಯಾಯಿಗಳ ಚಿಂತನೆಗಳನ್ನು 

ಕಟ್ಟಿಹಾಕಿಲ್ಲ ಬದಲಾಗಿ ಸ್ವಯಂ ಉತ್ತರಗಳನ್ನು ಹುಡುಕಲು ನಿರಂತರವಾಗಿ ಪ್ರೇರೇಪಿಸಿದೆ. ಒಂದುವೇಳೆ ಅವರು ಧರ್ಮದ 

ಆಚರಣೆಗಳನ್ನು ವಿರೋಧಿಸಿದರೂ ಯಾರೂ ಅವರನ್ನು ಧರ್ಮದಿಂದ ಕಿತ್ತುಹಾಕಲಾರರು. ತಮ್ಮ ಧರ್ಮದ ಬಗ್ಗೆ  

ನಿರ್ಭೀತಿಯಿಂದ ಯೋಚಿಸುತ್ತಾ,  ತಪ್ಪು ಅನಿಸಿದ್ದನ್ನು ಪ್ರಶ್ನಿಸುತ್ತಾ ಬದುಕಬಹುದು. ಹಾಗೆ ನೋಡಿದರೆ ಹಿಂದೂಧರ್ಮ 

ಮತ್ತು ಅದರ ಆಚರಣೆಗಳು ಯಾವೊಬ್ಬ ವ್ಯಕ್ತಿಯಿಂದ ಆರಂಭವಾಗಿಲ್ಲ. ಇತರ ಧರ್ಮಗಳಂತೆ ಹಿಂದೂಗಳು 

ದೇವಾಲಯಗಳ ನಿಯಂತ್ರಣದಲ್ಲಿ ಬಾಳುತ್ತಿಲ್ಲ. ಇಲ್ಲಿ ಯಾರೂ ಶ್ರೇಷ್ಠರಲ್ಲ... ಕನಿಷ್ಠರೂ ಅಲ್ಲ .. ಹಿಂದೂಗಳು ಧರ್ಮದ 

ಹುಳುಕುಗಳ ಬಗ್ಗೆ ಕುರುಡಾಗಿದ್ದು , ಸದ್ವಿಚಾರಗಳನ್ನು ಮಾತ್ರ ಬಡಬಡಿಸುವ ಬದಲು , ನಾನೇಕೆ ಒಬ್ಬ ಹಿಂದೂ ? ಎಂದು 

ಪ್ರಶ್ನಿಸುವ-ಉತ್ತರ ಹುಡುಕುವ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾರೆ . 
ಪ್ರತಿಯೊಂದು ಅಧ್ಯಾಯದಲ್ಲಿ ಒಂದು ವಿಚಾರದ ಬಗ್ಗೆ ಚರ್ಚಿಸಲಾಗಿದೆ. ದೇವರು ಇದ್ದಾನೆಯೇ? , ಪುರಾಣಗಳು ನಿಜವೇ?, ಹಿಂದೂ ಆಚರಣೆಗಳು ಪ್ರಶ್ನಾತೀತವೇ ?, ಹಣೆಬೊಟ್ಟು ಇಂದಿಗೆ ಪ್ರಸ್ತುತವೇ? , ಮನುಷ್ಯ ದೇವರಿಗಿಂತ ಬಲಶಾಲಿಯೇ? , ಮದುವೆಗೆ ಬೇಕೇ ಜಾತಕದ ಅಪ್ಪಣೆ? ಕಲ್ಲು ದೇವರಾಗಬಹುದು ಆದರೆ ದೇವರು ಕಲ್ಲಲ್ಲ , “ ಹಿಂದೂ” - ವಿದೇಶೀ ಶಬ್ದವೇ?, ನಿಮ್ಮ ಜಾತಿ ಯಾವುದು ಸ್ವಾಮೀ? , ಹಿಂದೂಧರ್ಮ ಪ್ರೇಮವಿವಾಹಕ್ಕೆ ವಿರೋಧಿಯೇ? , ಎಂಥ ಅದ್ಭುತ ನಮ್ಮ ದೇಗುಲ ! ಮುಂತಾದ ಲೇಖನಗಳು ಸನಾತನಧರ್ಮದ ಪರಿಚಯ ಮಾಡಿಕೊಡುತ್ತವೆ.
ಪುಸ್ತಕವನ್ನು ಕೊಂಡು ಓದಿ....ಕಾಣಿಕೆ ರೂಪದಲ್ಲಿ ಕೊಡಿ .... ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿ ... ಆತ್ಮವಿಶ್ವಾಸದಿಂದ ಬದುಕಿ...
1. ಪುಸ್ತಕವನ್ನು Flip kart ಮತ್ತು Amazon ತಾಣಗಳಲ್ಲಿ ಕೆಳಗಿನ ಲಿಂಕ್ ನಲ್ಲಿ ಕೊಳ್ಳಬಹುದು .
https://www.flipkart.com/naaneke-obba-h…/p/itmf4ur5eacuhew2…
2.ಪುಸ್ತಕ e - book ರೂಪದಲ್ಲಿ 100 ರೂಪಾಯಿಗಳಿಗೆ ಲಭ್ಯವಿದೆ. ಈ ಕೆಳಗಿನ ಲಿಂಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. https://pothi.com/…/ebook-veda-athavale-%E0%B2%A8%E0%B2%BE%…
3. ಪ್ರಕಾಶನ ಸಂಸ್ಥೆ ಪೋಥಿ.ಕಾಂ ನಲ್ಲಿ ಈ ಕೆಳಗಿನ ಲಿಂಕ್ ನಲ್ಲಿ ಪುಸ್ತಕ ಕೊಳ್ಳಬಹುದು
https://pothi.com/…/veda-athavale-%E0%B2%A8%E0%B2%BE%E0%B2%…

Monday, 19 March 2018

ARE YOU ALONE OR LONELY?



Have you ever been alone at home? A few years back, the answer to this question was “Never!”  We Indians always preferred joint families. Until recently our families included parents. So, people staying alone was unheard of.
But alas! long… long…  ago Lord Shrikrishna has made it very clear in Bhagavadgeeta that “change is the only permanent thing in the world”. So, the wave of change hit the basic unit of the society. We adopted ‘small’ families. No…no…sorry…let me use a technical word, we adopted nuclear family system. Nowadays the answer for my question would be “Yes, often” or “Yes, big deal !!?”
A decade ago, spending days ALONE doing nothing or with a favourite book was one of my most cherished dreams since my life was very hectic, as that of any working woman. I worked at home as well as at school (you might complain what nonsense? Women always work, you aren’t special). My day used to start at 4.30am--cooking, going to school with my kids, cleaning, washing, parenting, guests, attending husband and so on. As the years passed, my children flew away in the pursuit of their career. As our new home was in the city’s outskirts, the number of guests reduced too. So, whenever my husband went out of the city for days together on duty, my dream came true. I was overwhelmed. Yeah…. I was ALONE!!
But the freedom and the free time I had proved worthless. After reading two books I got bored. Cooking? for whom? Too many questions filled my plate. As the night set, I heard unpleasant sounds, and imagined shadows near the windows. Listening to news stories of house robbery, murder of lone ladies frightened me. Life was dull and boring. We humans are never happy with what we have. Soon I was unhappy with my dream world. Now I wanted to return to my old hectic life because I was LONELY not ALONE.
Yes, every thing said and done, this is the reality. With the advent of globalisation, the definition of the family has totally changed. Now we are left with only two important questions to answer-- Are you alone? or Are you lonely? There is no problem if you are alone. There are many around the globe. After all we are born alone and die alone right? But never ever feel lonely. This can spoil your health, wealth, and happiness. Yes… We need to declare a war against loneliness.
This war needs different kinds of weapons and strategies based on whether we live in a city, a town, or a village; an independent house or an apartment. Also, on our personality—introvert, extrovert, rigid or flexible.
 In Agricultural homes there is always one or the other work waiting. In big cities there are enough opportunities (baby care, part time jobs, etc) to help earn money. Finally, the choice is ours.  
These are the few suggestions I would like to give. It is up to you to ponder upon these ‘Punch’s!
1.      If you love to watch the television, there are lots of good shows, movies, serials, and discussions available. However, be careful of the content. Additionally, if you have internet facility I would suggest that you see YouTube videos on various topics--on Indian culture, the Vedas, the Upanishads, the Epics, music, language, and dance. There are talks by scholars in local language and English on YouTube. Try to catch up with them. Social media like Facebook opens the door to an amazing world full of friends. Again, we must be careful about our selection.
2.      If you love the company of children, then tuition classes will keep you engaged. Children are bundles of hope and energy. Teaching those angels will give you immense satisfaction. You can teach online too (E-Vidyaloka is one example). There are many charity organisations who are in search of volunteers. Start a search in your area. If you want to spend your time outside the home you can join one. It will be a wonderful experience.
3.      If you have space and can soil your hands, plants are the best friends. Grow your vegetables at home garden or on terrace. There is nothing compared to be with nature.
4.      We have a rich tradition of Bhakti. There are umpteen number of Vrata- and Upavasas practiced by our ancestors. If you like them, engage yourself with them. Sing bhajans, chant mantras in the morning and evenings. I don’t know whether it pleases God or not. But I am sure it will soak you in joy. If possible, join the Bhajan groups in a nearby temple. Participate in the community festivals and Jatres. Yogabhyasa is the biggest asset we have. Try to learn, adopt and teach.
5.      If you love reading, you are luckiest person under the Sun. This is an easy and satisfying hobby. If available, become a member of nearby library. Identify the people who love reading. You can exchange books with them. If possible, get a kindle reader. You can enjoy reading without worrying about storage space. 
Along with this, change your outlook towards life. Modern life has given us many good facilities but a few challenges too. Stop comparing dead-gone old days with present. Just move with the flow. Don’t worry much about the dying traditions and modern clothing. Culture is like a river. Continuous movement is its very basic nature. We must move with it retaining our level best. 
Being alone has made me strong. It opened up new avenues in front of me. 
Trust me!  Being Alone can be all about Being Happy!

Friday, 1 December 2017

If I were the Bengaluru Mayor - ಬೆಡಗಿನೂರು - ಬೆಂಗಳೂರು


ನಿಮ್ಮೂರಿಗೆ ಈ ಹೆಸರು ಯಾಕೆ ಬಂತಂತೆ ಅಂತ ಪ್ರಪಂಚದ ಯಾರನ್ನೇ ಕೇಳಿ .. ಒಂದು ಸೊಗಸಾದ ಕತೆ ಹೇಳ್ತಾರೆ.. ರೋಚಕ ಘಟನೆ ಹೇಳ್ತಾರೆ.. ಆದ್ರೆ ನಮ್ಮೂರಿಗೆ ಮಾತ್ರ ಆ ಭಾಗ್ಯವಿಲ್ಲ. ಅದೆಂತದೋ  ಕಾಳು ಬೇಯ್ಸಿರೋ ಅಜ್ಜಿಯ ಕತೆನ ಬೆಂಗಳೂರನ್ನೋ ಬಿನ್ನಾಣಗಿತ್ತಿಗೆ ತಗಲ್ಹಾಕಿದಾರೆ.. ನಿಜ ಹೇಳ್ತೀನಿ.. ಬೆಡಗು ಅನ್ನೋ ಶಬ್ದದಿಂದಲೇ ನಮ್ಮೂರಿಗೆ ಬೆಂಗಳೂರು ಅನ್ನೋ ಹೆಸರು ಬಂದಿದೆ…. ಬೆಡಗಿನೂರು - ಬೆಂಗಳೂರು…  ಇಲ್ಲಿ ಹುಟ್ಟೋಕೆ ಜನ್ಮಾಂತರದ ಪುಣ್ಯಫಲವಿರಬೇಕು.ಅಲ್ಪ-ಸ್ವಲ್ಪ ಪುಣ್ಯ ಮಾಡಿದ್ರೆ ಕೊನೇಪಕ್ಷ ಇಲ್ಲಿನ ನಾಗರಿಕನಾಗಬಹುದು. ಇನ್ನು ಈ ಭಾಗ್ಯದೂರಿನ ನಗರಪಾಲಕ ಅಥವಾ ಮೇಯರ್ ಆಗಲಿಕ್ಕೆ ಪುಣ್ಯ ಮಾತ್ರ ಸಾಲದು.. ಯೋಗ್ಯತೆ,ಅರ್ಹತೆ, ದೂರದೃಷ್ಟಿ, ನಿಸ್ವಾರ್ಥತೆ, ನಾಗರಿಕಪ್ರಜ್ಞೆ ಎಲ್ಲವೂ ಇರಲೇಬೇಕು. ಈ ಎಲ್ಲ ಗುಣಗಳೂ ನನ್ನಲ್ಲೇ ಇವೆಯಲ್ಲ.. ನಾನ್ಯಾಕೆ ಒಂದು ಕೈ ನೋಡ್ಬಾರ್ದು ಅನ್ನೋದು ನನ್ನ ಲೆಕ್ಕಾಚಾರ.

ಬೆಂಗಳೂರು ಅಂದ್ರೆ ಅವಕಾಶಗಳ ನಗರ. ಜೀವನ ಕಟ್ಟಿಕೊಂಡು ನೆಮ್ಮದಿಯಾಗಿ ಬಾಳಬೇಕು ಅನ್ನುವ ಸ್ವಾಭಿಮಾನಿಗಳಿಗೆ ಹೇಳಿ ಮಾಡಿಸಿದ ಜಾಗವಿದು. ಆದ್ರೆ ಈ ಸ್ವಾಭಿಮಾನಿಗಳು ಸೃಷ್ಟಿಸುವ ಕಸ ನಮ್ಮ ನಗರದ ಕತ್ತು ಹಿಸುಕ್ತಾ ಇದೆ. ಈ ಕಸ ವಾರ್ಡ್ ಮಟ್ಟದಲ್ಲೇ ವಿಲೇವಾರಿ ಮಾಡುವುದು ನನ್ನ ಮೊಟ್ಟ ಮೊದಲ ಆದ್ಯತೆ. ನನ್ನ ಕಾರ್ಪೋರೇಟರ್ ಗಳ ಸಹಾಯ ಪಡ್ಕೊಂಡು ,ಕಸದ ಲಾರಿಗಳ ಲಾಬಿಯನ್ನೇ ಉಪಯೋಗಿಕೊಂಡು, ಗುತ್ತಿಗೆದಾರರನ್ನು ಈ ಕೆಲಸಕ್ಕೆ ಆಹ್ವಾನಿಸುತ್ತೇನೆ. ಮೊದಲು ಆಯ್ದ ಕೆಲವಾರ್ಡ್ ಗಳಲ್ಲೇ ಜಾಗ ಗುರುತಿಸಿ ಕಸದಿಂದ ಎಷ್ಟು ಸಾಧ್ಯವೋ ಅಷ್ಟು ಉಪಯೋಗ ಪಡೆಯುವ ಯೋಜನೆ ಆರಂಭಿಸುವುದು ನನ್ನ ಬಹುಕಾಲದ ಕನಸು. ಆದ್ರೆ ನಾನೂ ಒಬ್ಬ ರಾಜಕಾರಿಣಿ.. ಓಟು ಮತ್ತೆ ನೋಟು ಇಲ್ದೆ ಯಾವ ಆದರ್ಶಗಳೂ ಸಾಕಾರ ಆಗೋದಿಲ್ಲ ಅಂತ ಗೊತ್ತಿದೆ ನನಗೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡಿದ ಪಕ್ಷವನ್ನು ಜನ ಕೈ ಬಿಡಲ್ಲ ಅನ್ನೋದು ನನ್ನ ದೃಢವಾದ ನಂಬಿಕೆ.

 ಭೌಗೋಳಿಕವಾಗಿ ನೋಡಿದ್ರೆ ನಮ್ಮೂರಿನಷ್ಟು ಅದ್ಭುತವಾದ ಜಾಗ ಇನ್ನೊಂದಿಲ್ಲ. ಕಾಲಕಾಲಕ್ಕೆ ಮಳೆ, ಯಾವಾಗ್ಲೂ ಬೀಸೋ ತಂಗಾಳಿ, ಹಿತವಾದ ಬಿಸಿಲು. ಅದಕ್ಕೇ ಅಲ್ವೇ ಇಲ್ಲಿ ಅಷ್ಟೊಂದು ಉದ್ಯಾನಗಳು. ಖಾಲಿ ಸೈಟ್ ಗಳು, ಮೆಟ್ರೋ ಮಾರ್ಗದ ಕೆಳಗಿನ ಜಾಗ , ಡಿವೈಡರ್ ಗಳು ಇಲ್ಲೆಲ್ಲ ತುಂಬ ಆರೈಕೆ ಬೇಕಾಗೋ ಯಾವುದೋ ಫಾರಿನ್ ಹೂಗಿಡಗಳ ಬದಲು ಸುಲಭವಾಗಿ ಬೆಳೆಯೋ ದಾಸವಾಳ, ಸದಾಪುಷ್ಪ , ಕಣಗಿಲೆ ಇಂಥ ಗಿಡಗಳನ್ನು ಹಾಕಬೇಕು ಅನ್ನೋ ಭಾವನೆ ನಂದು. ಒಂದು ಸಾರಿ ನೆಟ್ಟು ಎರಡು ದಿನ ನೋಡ್ಕೊಂಡ್ರೆ ವರ್ಷಾನುಗಟ್ಟಲೆ ಅರಳ್ತಾವೆ ಈ ಗಿಡಗಳು. ಈ ಕೆಲಸಕ್ಕೆ ಆ ಏರಿಯಾದ ವ್ಯಾಪಾರಿಗಳನ್ನೇ ಹಿಡಿಯೋದು ಒಳ್ಳೇದು. ಅವರ ಜಾಹೀರಾತಿಗೆ ಒಂದು ಅಡಿ ಜಾಗ ಕೊಟ್ರಾಯ್ತು..

ನಗರದ ಪಿಯುಸಿ ವಿದ್ಯಾರ್ಥಿಗಳನ್ನೆಲ್ಲ ಒಮ್ಮೆ ಭೇಟಿಯಾಗ್ಬೇಕು ಅನ್ನೋದು ನನ್ನ ಇನ್ನೊಂದು ಕನಸು. ಈ ದರಿದ್ರ ನಾಯಕರನ್ನು ನೋಡ್ತಾ ಬೆಳೀತಿರೋ ನಮ್ಮ ಮಕ್ಕಳಿಗೆ ನಗರದ ಭವಿಷ್ಯದ ಬಗ್ಗೆ ನಿರಾಸೆಯಾಗ್ತಿದೆ. ಪ್ರತೀ ಶನಿವಾರ ಎರಡು ಕಾಲೇಜುಗಳಿಗೆ ಭೇಟಿ ಕೊಡ್ಬೇಕು [ಗವರ್ನ್ಮೆಂಟು-ಪ್ರೈವೇಟು] ಅಂದ್ಕೊಂಡಿದೀನಿ. ಅಲ್ಲಿಗೆ ಹೋಗಿ ನಮ್ಮ ಸರಕಾರೀ ವ್ಯವಸ್ಥೆ ಬಗ್ಗೆ ವಿವರಿಸಿ , ನಗರ ನಿರ್ವಹಣೆಯ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸ್ಬೇಕು. ನಮ್ಮ ಸಮಸ್ಯೆಗಳ ಸಮಾಧಾನ ನಮ್ಮ ಮನೆಗಳಿಂದ ಶುರು ಆಗ್ಬೇಕು, ಟ್ರಾಫಿಕ್ ರೂಲ್ಸು, ಸ್ವಚ್ಛತೆ, ಮಳೆನೀರು ಸಂಗ್ರಹ ಇವನ್ನೆಲ್ಲ ಪಾಲಿಸಿ ಅಂತ ಹೇಳ್ಬೇಕು. ಪ್ರತೀ ಕಾಲೇಜಿನಿಂದ ಇಬ್ಬರು ಮಕ್ಕ್ಳು ತಿಂಗಳಿಗೊಮ್ಮೆ ಪಾಲಿಕೆ ಸಭೆಯಲ್ಲಿ ಭಾಗವಹಿಸಬಹುದು ಅಂತ ಆಮಿಷನೂ ಒಡ್ತೀನಿ.ಇಲ್ಲಿ ನನ್ನ ಸ್ವಾರ್ಥನೂ ಇದೆ.. ಇವರೇ ಅಲ್ವೆ ನಮ್ಮ ಮುಂದಿನ ಮತದಾರರು...!!  

ಈ ರಸ್ತೆ ಗುಂಡಿಗಳಿಗೆ ಏನಾದ್ರೂ ಮಾಡ್ಲೇಬೇಕ್ರೀ..ಈ ಕೆಲಸ ನನ್ನ ೧ ವರ್ಷದ ಅವಧಿಯಲ್ಲಿ ಆಗೋದಲ್ಲ. ಅದಕ್ಕೆ ಎಲ್ಲ ರಸ್ತೆಗಳ ಕೇಸ್ ಹಿಸ್ಟರಿ ಅಂತ ಒಂದು ರಿಸರ್ಚ್ ಶುರು ಮಾಡಿಸ್ತೀನಿ. ಆಗ ಸರಕಾರದ ದುಡ್ಡು ನುಂಗೋ ಗುತ್ತಿಗೆದಾರರನ್ನು ಹಿಡೀಬಹುದು ಅಂತ ನನ್ನ ಲೆಕ್ಕಾಚಾರ. ಕಾರ್ಪೋರೇಟರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ್ರೆ ದುಡ್ಡು ಸೋರಿಕೆ ನಿಲ್ಲಿಸಬಹುದು. ರಸ್ತೆ ಗುಣಮಟ್ಟನೂ ಹೆಚ್ಚಿಸಬಹುದು. ನಮ್ಮವರು ಕ್ಷಣಿಕ ಲಾಭ ನೋಡ್ತಾರೆ ಸಾರ್.. ಒಳ್ಳೆ ರಸ್ತೆ ಮಾಡಿಸಿದರೆ ಮತ್ತೆ ಮತ್ತೆ ನಮ್ ಪಾರ್ಟಿನೇ ಗೆಲ್ಲಬಹುದು ..ಅಧಿಕಾರ ಶಾಶ್ವತವಾಗಿರುತ್ತದೆ ಅನ್ನೋ ತಿಳುವಳಿಕೆ ಮೂಡಿಸಿದರೆ ಎಲ್ಲರಿಗೂ ಲಾಭ ಅಲ್ವೇ? ಜೊತೆಗೆ ರಸ್ತೆ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಟ್ರೆ ತಲೆನೋವಿಲ್ಲ ಅಂತ ನನ್ನ ಅಭಿಪ್ರಾಯ. ಕೌನ್ಸಿಲ್ ನಲ್ಲಿ ಈ ಬಗ್ಗೆ ಚರ್ಚಿಸಿ ನೋಡುತ್ತೇನೆ. ಖಾಸಗಿಯವರಿದ್ದಲ್ಲಿ ಸ್ಪರ್ಧೆ ಏರ್ಪಡುತ್ತದೆ. ಜಡ್ಡುಗಟ್ಟಿರುವ ಸರಕಾರೀ ವ್ಯವಸ್ಥೆ ಎಚ್ಚೆತ್ತುಕೊಳ್ಳಬಹುದು.

ನನ್ನೂರಲ್ಲಿ ಎಲ್ಲ ಕಡೆ ಗ್ರಂಥಾಲಯಗಳು ಇರಬೇಕು. ಎಲ್ಲ ಸುಪರ್ ಮಾರ್ಕೆಟ್, ಮಾಲ್ ಗಳಲ್ಲಿ  ಕನಿಷ್ಠಪಕ್ಷ ೫ ಚದರ ಜಾಗ ಗ್ರಂಥಾಲಯಕ್ಕೆ ಇರಲೇಬೇಕು. ಇದನ್ನು ಅವರೇ ನಿಭಾಯಿಸಬೇಕು. ಇಲ್ಲಿ ಅರ್ಧದಷ್ಟು ಕನ್ನಡ ಪುಸ್ತಕಗಳನ್ನಿಡಬೇಕು. ಅಲ್ಲಿ ಕೂತು ಹರಟೆ ಹೊಡೆಯುವ , ಕಾಲಹರಣ ಮಾಡುವ ಯುವಜನರು, ಹೆಂಡತಿ ಶಾಪಿಂಗ್ ಮಾಡುತ್ತಿದ್ದರೆ ಕಾಯುತ್ತ ಇರುವ ಗಂಡಂದಿರು , ಗರ್ಲ್-ಬಾಯ್ ಫ್ರೆಂಡ್ ಗೆ ಕಾಯ್ತಾ ಇರುವವರು, ಪುಸ್ತಕ ಓದುವ ಹವ್ಯಾಸ ಬೆಳೆಸ್ಕೊಳ್ಳಬಹುದು. ಬೆಂಗಳೂರಿನವರು ವಿದ್ಯಾವಂತರು. ಅವರಿಗೆ ಇದು ಬೇಕೇ ಬೇಕು.
 
ಬಸ್ ಸ್ಟಾಂಡ್ಗಳಲ್ಲಿ ಅಳವಡಿಸಿರೋ ಟಿ.ವಿ ಗಳಲ್ಲಿ ನಮ್ಮ ರಾಜ್ಯದ ಸಾಧಕರ ಬಗ್ಗೆ ಹಾಕಬೇಕು ಅನ್ನೋ ಕನಸು ನನ್ನದು. ಸಾಧಕರು ಅಂದ್ರೆ ಸಾಹಿತಿಗಳಲ್ಲರೀ... ಒಬ್ಬ ಒಳ್ಳೇ ರೈತ, ವಿಶಿಷ್ಟ ವಿದ್ಯಾರ್ಥಿ, ನಿಷ್ಟಾವಂತ ಪೌರಕಾರ್ಮಿಕ, ಸೊಗಸಾಗಿ ಕನ್ನಡ ಮಾತಾಡುವ ಭಾಷಣಕಾರ, ಸಹೃದಯ ಶಿಕ್ಷಕ, ಕಳಕಳಿಯಿರುವ ವೈದ್ಯ ಇವರೆಲ್ಲ ನಿಜವಾದ ಸಾಧಕರು. ಇವರ ಬಗ್ಗೆ ಜನ ತಿಳ್ಕೊಳ್ಳಬೇಕು. ಇವರ ಥರ ಆಗಲಿಕ್ಕೆ ಪ್ರಯತ್ನ ಮಾಡಬೇಕು.ಈ ಕೆಲಸವನ್ನು ನಮ್ಮ ವಿದ್ಯಾರ್ಥಿಗಳಿಗೆ ವಹಿಸ್ತೇನೆ. ಒಂದು ವೆಬ್ಸೈಟ್ ಮಾಡಿಸುತ್ತೇನೆ. ತಮ್ಮ ಸುತ್ತಲೂ ಕಾಣುವ ಇಂಥ ಸಾಧಕರ ವಿಡಿಯೋ ಮಾಡಿ ಅದರಲ್ಲಿ  ತಮ್ಮ ಕಾಲೇಜಿನ ಪ್ರಿನ್ಸಿಪಾಲರ ಜೊತೆ ಲಾಗಿನ್ ಆಗಿ ವಿಡಿಯೋ ಹಾಕಬೇಕು. ಟಿವಿ ನಲ್ಲಿ ಸಾಮಾನ್ಯರೂ ಬರಬೇಕ್ರೀ..

ಇನ್ನೊಂದ್ ವಿಷ್ಯ ಏನಪ್ಪಾ ಅಂದ್ರೆ ನಮ್ಮೂರಲ್ಲಿ ಚರಂಡಿ ವ್ಯವಸ್ಥೆ ತಕ್ಕಮಟ್ಟಿಗೆ ಇದೆ. ಆದ್ರೆ ಅದು ಕಟ್ಕೊಂಡಿರುತ್ತದೆ. ರಸ್ತೆಯಿಂದ ಚರಂಡಿಗೆ ಮಳೆನೀರು ಹೋಗುವ ತೂಬುಗಳಲ್ಲಿ ಪ್ಲಾಸ್ಟಿಕ್ ಸೇರ್ಕೊಂಡು ರಸ್ತೆನೇ ನದಿಯಾಗುತ್ತದೆ. ಇದರ ನಿವಾರಣೆಗೆ ನನ್ನ ಪ್ರಯತ್ನ ಮಾಡುತ್ತೇನೆ. ಎಪ್ರಿಲ್-ಮೇ ತಿಂಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸುತ್ತೇನೆ. ಇನ್ನು ಈ ರಾಜಕಾಲುವೆದು ಬೆಟ್ಟದಂಥಾ ಸಮಸ್ಯೆ. ಇದರ ತೆರವಿಗೆ ಹಂತಹಂತವಾಗಿ ಕ್ರಮ ಆರಂಭಿಸಿದರೆ ಸಂಪೂರ್ಣ ನಿವಾರಣೆ ಮಾಡಬಹುದು.

ಕೆರೆ ಪುನಶ್ಚೇತನ ನನಗಿರೋ ಇನ್ನೊಂದು ಹೆಬ್ಬಯಕೆ. ಕಾರ್ಪೋರೇಟರ್ ಗಳಿಗೆ ಹೀಗೊಂದು ಸ್ಪರ್ಧೆ ಏರ್ಪಡಿಸಬೇಕು. ಮುಂದಿನ ಚುನಾವಣೆಗೆ ಟಿಕೆಟ್ ಸಿಗೋಕೆ ಕನಿಷ್ಠ ಒಂದು ಉದ್ಯಾನ, ಒಂದು ಕೆರೆಯನ್ನಾದರೂ ಅಭಿವೃದ್ಧಿ ಮಾಡಿರಲೇಬೇಕು ಅನ್ನುವ ನಿಯಮ ತರಬೇಕು. ಲೇಕ್ ವ್ಯೂ ಅಂತ ಹೆಸರು ಹಾಕ್ಕೊಂಡು ಅಪಾರ್ಟ್ಮೆಂಟ್ ಕಟ್ಟಿಸ್ತಾರಲ್ಲ ಅಂಥ ಕಂಪನಿಗಳ ಹೆಗಲಿಗೆ ಕೆರೆ ರಕ್ಷಣೆಯ ಜವಾಬ್ದಾರಿಯನ್ನು ಕಡ್ಡಾಯವಾಗಿ ಹೊರಿಸುತ್ತೇನೆ. ಕೆರೆ ಶುಭ್ರವಾಗಿದ್ರೆ ಯಾವ ಪಕ್ಷ ಅಥವಾ ಯಾವ ಜನ ಇಷ್ಟಪಡಲ್ಲ ಹೇಳಿ. ಆರಂಭದಲ್ಲಿ ವಿರೋಧ ಎದುರಾಗಬಹುದು . ಆದರೆ ಕಟ್ಟುನಿಟ್ಟಾದ ನಿಯಮ ತಂದ್ರೆ ಖಂಡಿತ ಎಲ್ಲರೂ ಪಾಲಿಸ್ತಾರೆ. ನಮ್ಮ ಬೆಂಗಳೂರಿಗೆ ಕಪ್ಪು ಮಚ್ಚೆಯಂತಿರುವ ಬೆಳ್ಳಂದೂರುಕೆರೆಯ ಸಮಸ್ಯೆಯನ್ನು ಬಗೆಹರಿಸಲು ಅಲ್ಲಿನ ಪ್ರದೇಶದ ಕಾರ್ಖಾನೆಗಳ ಮಾಲೀಕರ ಸಭೆ ಕರೆಯುತ್ತೇನೆ. ಸರಕಾರದ-ಕಾರ್ಖಾನೆಗಳ ಸಹಭಾಗಿತ್ವದಲ್ಲಿ ಕೊಳಚೆ ಶುದ್ಧೀಕರಣ ಘಟಕ ಸ್ಥಾಪಿಸುವ ಪ್ರಸ್ತಾವಕ್ಕೆ ಅವರನ್ನು ಒಪ್ಪಿಸುತ್ತೇನೆ. ಕಾರ್ಪೋರೇಟರ್ ಮತ್ತು ಶಾಸಕರು ಮನಸ್ಸು ಮಾಡಿದರೆ ಯಾವ ಕೆಲಸ ಅಸಾಧ್ಯ ಹೇಳಿ?

ನಮ್ಮ ಸಿಟಿ ಬಸ್ ಸರ್ವಿಸ್ ನಲ್ಲಿ ಡೀಸೆಲ್ ಗಾಡಿಗಳ ಬದಲಿಗೆ ಸಿ ಎನ್ ಜಿ ವಾಹನಗಳನ್ನು ಉಪಯೋಗಿಸಿದರೆ ಮಾಲಿನ್ಯ ಕಡಿಮೆಯಾಗುತ್ತದೆ. ಈ ಪ್ರಸ್ತಾವವನ್ನು ಜಾರಿಗೊಳಿಸಲು ಶತಾಯ ಗತಾಯ ಪ್ರಯತ್ನಿಸುತ್ತೇನೆ.ಹಾಗೆಯೇ ಸಿಟಿ ಬಸ್ ವ್ಯವಸ್ಥೆಯಲ್ಲಿ  ಕೆಲವು ಮಾರ್ಗಗಳಲ್ಲಿ ಮಿನಿ ಬಸ್ಸುಗಳನ್ನು ಹಾಕಬೇಕೆಂದು ಸಲಹೆ ಕೊಡುತ್ತೇನೆ. ಚಿಕ್ಕ ರಸ್ತೆಗಳಲ್ಲಿ ಚಿಕ್ಕ ಬಸ್ಸುಗಳಿದ್ದರೆ ಒಳ್ಳೆಯದು. ಬರೀ ನಾಲ್ಕು ಜನರಿಗೋಸ್ಕರ ದೊಡ್ಡ ಬಸ್ಸು ವ್ಯರ್ಥವಲ್ಲವೇ? ಏರ್ ಪೊರ್ಟ್ ಬಸ್ ಗಳಲ್ಲಿ ಯಾವಾಗ್ಲೂ ಜನ ಇರುವುದಿಲ್ಲ. ಆದ್ರೆ ದೊಡ್ಡ ಬಸ್ಸು ಅಡ್ಡಾಡುತ್ತದೆ. ಇದರ ಬಗ್ಗೆ ಗಮನ ಕೊಡಿ ಅಂತ ನನ್ನ ಸಲಹೆ.

ಬೀದಿನಾಯಿಗಳ ನಿಯಂತ್ರಣ ಇನ್ನೊಂದು ವಿಷಯ.ನಾಯಿಗಳ ಸಂತಾನಹರಣಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. ಕಸದ ಸಮಸ್ಯೆ ಕಮ್ಮಿ ಆದ್ರೆ ನಾಯಿಗಳೂ ನಿಯಂತ್ರಣಕ್ಕೆ ಬರುತ್ತವೆ.

ನಾನೇನಾದ್ರೂ ಮೇಯರ್ ಆದ್ರೆ ನಾನು ಭಾಗವಹಿಸೋ ಸಮಾರಂಭದಲ್ಲಿ ಪ್ಲಾಸ್ಟಿಕ್ ಉಪಯೋಗ ಅತಿ ಕಡಿಮೆ ಇರಬೇಕು. ನಿರ್ದಾಕ್ಷಿಣ್ಯವಾಗಿ ಇದನ್ನು ಜಾರಿಗೆ ಮಾಡ್ತೇನೆ. 

ಎಲ್ಲಕ್ಕಿಂತ ಮುಖ್ಯ ಅಂದ್ರೆ ನಮ್ಮ ಕಾರ್ಪೋರೇಟರ್ ಗಳಿಗೆ ನೈತಿಕ -ಸಾಮಾಜಿಕ ಪ್ರಜ್ಞೆ ತರಿಸುವಂಥ ಕಾರ್ಯಕ್ರಮಗಳಿಗೆ ಒತ್ತು ಕೊಡುತ್ತೇನೆ. ನನ್ನ ವಾರ್ಡ್ ನಲ್ಲಿ ಮೊದಲು ನನ್ನ ಪ್ರಯೋಗಗಳನ್ನೆಲ್ಲ ಆರಂಭಿಸುತ್ತೇನೆ. ನಾನೇ ಮಾಡಿ ತೋರ್ಸಿದ್ರೆ ಕಾಲಕ್ರಮೇಣ ಕೆಲವರು ತಿದ್ದಿಕೋಬಹುದು ಅನ್ನೋದು ನನ್ನ ದೃಢನಂಬಿಕೆ. ಸರಕಾರೀ ಕಚೇರಿಗಳಲ್ಲಿ ನಮ್ಮ ಪ್ರಯೋಗಗಳನ್ನು ಮೊದಲು ಜಾರಿಗೆ ತರಬೇಕು. ನಮ್ಮ ಕಚೇರಿಗಳು ಸೋಮಾರಿಗಳ, ಭ್ರಷ್ಠರ ಕಾಯಂ ನಿವಾಸಗಳು ಅನ್ನೋ ಧೋರಣೆಯನ್ನು ಬದಲಿಸಬೇಕು. ನಾನು ಮೇಯರ್ ಆದರೆ ಈ ವ್ಯವಸ್ಥೆಯಲ್ಲಿ ನನ್ನ ಹೆಜ್ಜೆಗುರುತನ್ನು ಮೂಡಿಸಿ ನಿರ್ಗಮಿಸುವುದೇ ನನ್ನ ಹೆಬ್ಬಯಕೆ.