Monday 11 May 2015

ನಾನು ಹೀಗೇನೇ ಇರೋದು….. …ನಂಗೆ ಇದೇ ಇಷ್ಟ…..


 ಕೆಲದಿನಗಳ ಹಿಂದೆ ನಟಿಯೊಬ್ಬಳು ಹೀಗೆ ಉದ್ಘೋಷಿಸಿದ ಸುದ್ದಿ ನೋಡುತ್ತಿದ್ದಂತೆ ಎಲ್ಲರೂ ಎಚ್ಚೆತ್ತರು. ಅವಳೇನೋ ಪಾಪತನ್ನ  ಉದ್ಯೋಗಕ್ಕೆ ಅನುಕೂಲವಾಗಲಿ ಎಂದುಕೊಂಡು ಏನೋ ಹೇಳಿಕೊಂಡಳು. ಆದರೆ ನಮ್ಮ ಸಂಪ್ರದಾಯವಾದಿಗಳ ಕಣ್ಣು ಕೆಂಪಾದವು.ನಮ್ಮ ಸಮಾಜವೇ ಅಧೋಗತಿಗಿಳಿಯಿತು ಎಂದು ಅವರು ಬರೆದದ್ದೇ ಬರೆದದ್ದು. ಆದರೆ  ನಮ್ಮಂಥ ಹೆಂಗಸರುನಾವು ಹೇಳಕ್ಕೆ ಆಗದ್ದನ್ನ ಇವಳು ಹೇಳ್ಬಿಟ್ಲಲ್ಲಾ…..” ಎಂದುಕೊಂಡು ಒಳಗೊಳಗೇ ಖುಶಿಪಟ್ಟೆವು  ಆದರೆ ಮರುಕ್ಷಣವೇ ಯಾರು ಏನೇ ಅಂದ್ರೂ ನಮಗೆ ಚಾಯಿಸ್ ಇಲ್ಲವಲ್ಲ. ನಾವು ಹೀಗೇ ಬದುಕ್ಬೇಕು ….. ಹೀಗೇ ಬಟ್ಟೆ ಹಾಕ್ಕೋಬೇಕು….” ಅಂತ ನಿಟ್ಟುಸಿರುಬಿಟ್ಟೆವು
ಯಾಕೋ ನನಗೆ ಮಾತ್ರ ನಾನು ಕಂಡ ಮಹಾನ್ ಮಹಿಳೆಯರ ನೆನಪು ಒತ್ತರಿಸಿ ಬಂತು . ಮದರ್ ತೆರೆಸಾ, ಸುಧಾ ಮೂರ್ತಿ ಇರಬಹುದಾ ಅಂತೆಲ್ಲಾ ನೀವು ಕಲ್ಪನೆ ಮಾಡಿಕೋಬೇಡಿ. ನನಗೆ ಮೊದಲು ನೆನಪಾಗುತ್ತಿರುವುದು ನನ್ನ ಅತ್ತಿಗೆ. ನನ್ನ ತಂದೆ ತಾಯಿಯ ದೊಡ್ಡ ಸಂಸಾರದ ಭಾರವನ್ನು ಸಮರ್ಥವಾಗಿ ನಿಭಾಯಿಸಿದ ನನ್ನಣ್ಣನ ಪತ್ನಿ. ಕುಟುಂಬ ಯೋಜನೆಯಿನ್ನೂ ನಮ್ಮ ಹಳ್ಳಿಗೆ ತಲುಪದಿದ್ದುದರಿಂದ  ಅವರು ಮದುವೆಯಾಗಿ ಬಂದಾಗ ಮನೆ ತುಂಬ ಮಕ್ಕಳು. ಆಕೆ ತನ್ನ ಮಕ್ಕಳಷ್ಟೇ ಅಕ್ಕರೆಯಿಂದ  ತನ್ನ ನಾದಿನಿ- ಮೈದುನಂದಿರನ್ನು ಆಸ್ಥೆಯಿಂದ ನೋಡಿಕೊಂಡವರು. ನಾದಿನಿಗೆ ಮದುವೆಯಲ್ಲಿ ಚಿನ್ನದ ಸರ ಹಾಕಬೇಕಾದಾಗ ತನ್ನಲ್ಲಿದ್ದ ಆ ಒಂದೇ ಸರವನ್ನು ನಗುನಗುತ್ತ ಕೊಟ್ಟವರು. ನಾದಿನಿಯಂದಿರ ಎರಡೆರಡು ಬಾಣಂತನಗಳನ್ನು ಜತನದಿಂದ ಮಾಡಿದವರು. ನಾವೆಲ್ಲ ಬೇಸಗೆ ರಜೆಯಲ್ಲಿ ಮಕ್ಕಳೊಡಗೂಡಿ ಊರಿಗೆ ಹೋದಾಗ ಪ್ರೀತಿಯಿಂದ ಸತ್ಕರಿಸಿದವರು.  ಮುಂದೆ ಆಸ್ತಿ ಪಾಲಾದಾಗ ಫಲವತ್ತಾದ ತೋಟ ತನಗೇ ಬೇಕೆಂದು ಮೈದುನ ಹಠ ಹಿಡಿದಾಗ ಇರಲಿಅವನು ಸುಖವಾಗಿರಲಿ…. ಕೊಟ್ಟುಬಿಡಿಎಂದು ಗಂಡನಿಗೆ ಹೇಳಿದ ಆ ಕರುಣಾಮಯಿಯನ್ನು ಏನೆಂದು ಹೊಗಳಲಿ?
ನನ್ನ ಸಹೋದ್ಯೋಗಿಯೊಬ್ಬರಿದ್ದಾರೆಅವರ ದಿನಚರಿಯನ್ನು ನೀವೊಮ್ಮೆ ನೋಡಬೇಕು. ಅವರು ಬೆಳಗ್ಗೆ ಬೇಗ ಎದ್ದು ಮನೆಕೆಲಸಗಳನ್ನು ಮುಗಿಸಿ, ಗಂಡ , ಮಕ್ಕಳ ಬೇಕುಗಳನ್ನು ಪೂರೈಸಿ, ಲಕ್ವ ಹೊಡೆದು ಹಾಸಿಗೆ ಹಿಡಿದಿರುವ [ ೧೨ ವರ್ಷಗಳಿಂದ] ಅತ್ತೆಗೆ ಸ್ನಾನ ಮಾಡಿಸಿ, ಶುಭ್ರವಾದ ಬಟ್ಟೆ ತೊಡಿಸಿ ೯ ಕ್ಕೆ ಆಫೀಸಿಗೆ ಬರುತ್ತಾರೆ. ಸಂಜೆ ಐದಕ್ಕೆ ಮನೆ ತಲುಪಿದ ತಕ್ಷಣ ಅತ್ತೆಯ ಮಲ- ಮೂತ್ರಗಳನ್ನು ಸ್ವಚ್ಛಗೊಳಿಸಿ, ಒಗೆದ ಬಟ್ಟೆ ತೊಡಿಸಿ ಮತ್ತೆ ಮನೆಕೆಲಸಕ್ಕೆ ತೊಡಗುತ್ತಾರೆ. ಕೆಲಸ ಬಿಟ್ಟು ಮನೆಯಲ್ಲಿರುವ ಅಥವಾ ಅತ್ತೆಯ ಸೇವೆಗೆ ಆಳನ್ನು ನಿಯೋಜಿಸುವ ಆರ್ಥಿಕ ಚೈತನ್ಯ ಅವರಿಗಿಲ್ಲ. ಆದರೆ ಅವರ ಮುಖದ ಮೇಲೆ ನಗು ಮಾಸಿದ್ದನ್ನು ನಾನೆಂದೂ ನೋಡಿಲ್ಲ.
ಇಂದಿನ ಸ್ವಸ್ಥ , ಆರೋಗ್ಯವಂತ ನಾಗರಿಕರ ಹಿಂದೆ ಇಂಥ ಅನೇಕ ದೈವೀಸ್ವರೂಪರಾದ ಅಕ್ಕಂದಿರು, ತಾಯಂದಿರು, ಅತ್ತೆಯರು, ಚಿಕ್ಕಮ್ಮ, ದೊಡ್ದಮ್ಮಂದಿರು ಮಾತ್ರವಲ್ಲ ಅಣ್ಣಂದಿರು, ಭಾವಂದಿರು, ಮಾವ, ಚಿಕ್ಕಪ್ಪ, ದೊಡ್ಡಪ್ಪಂದಿರು ಇದ್ದಾರೆ. ಬಹುಶ: ತ್ಯಾಗವೆಂಬ  ಶಬ್ದಕ್ಕೆ ಇವರು ಜೀವಂತ ಉದಾಹರಣೆಗಳು. ಹೇಳಿಕೊಳ್ಳುವಂಥಾ ಆದಾಯ ಇಲ್ಲದಿದ್ದಾಗಲೂ ಕುಟುಂಬದ ಸುಖವೇ ತನ್ನ ಸುಖ ಎಂದುಕೊಂಡ ಮಹಾನುಭಾವರಿವರು.  

ನನಗನಿಸುತ್ತದೆ ಇವರೆಲ್ಲಾ ತಮ್ಮನ್ನು ನಂಬಿದ ಜೀವಗಳಿಗೆ ಯಾವಾಗಲೂ ಹೇಳುತ್ತಿದ್ದುದು ಒಂದೇ ಮಾತುನಂದು ಹೇಗೋ ಆಗುತ್ತದೆ ಬಿಡು…… ನೀನು ಚೆನ್ನಾಗಿರಬೇಕು….. ನಿನ್ನಿಷ್ಟನೇ ನನ್ನಿಷ್ಟ……”

No comments:

Post a Comment